Tuesday 21 July 2015

ಕಾಗೆಗಳು- ಆರ್.ವಿ. ಭಂಡಾರಿ.

ಕಾಗೆಗಳು                 ಆರ್.ವಿ. ಭಂಡಾರಿ.
ಈ ಬಸ್ಸುಗಳು ನಮ್ಮ ಮಂತ್ರಿಗಳ ಪ್ರೋಗ್ರ್ಯಾಮಿನ ಹಾಗೆ. ಒಂದು ಒಂದೂವರೆ ತಾಸು ಲೇಟು. ಆರುಗಂಟೆಗೆ ಸ್ಟಾಂಡಿಗೆ ಬಂದಿದ್ದೆ. ಏಳೂವರೆಯಾದರೂ ಬಸ್ಸು ಬರಲಿಲ್ಲ. ಸ್ಟಾಂಡಿನಲ್ಲಿ ಜನರ ನೂಕುನುಗ್ಗಲು. ಒಂದು ಬಸ್ಸು ಬಂದರೆ ಸಾಕು. ನೂರು ಜನರು ನುಗ್ಗುತ್ತಿದ್ದರು. ಹತ್ತುವವರು ಕೆಲವರಾದರೆ ನೋಡುವವರು ಹಲವರು. ಬಸ್ಸು ಹೊಂಟಿತೊ ಮತ್ತೆ ಜನ ತಿರುಗುತ್ತಿದ್ದರು. ಪತ್ರಿಕೆಯವರು ಓಡಾಡುತ್ತಿದ್ದರು. ಕೆಲವರು ನಾಲ್ಕೈದು ಪಿಳ್ಳೆಗಳನ್ನು ಕಟ್ಟಿಕೊಂಡು ಪೇಚಾಡುತ್ತಿದ್ದರು. ಕೆಲ ಹೆಂಗಸರು ತಮ್ಮ ಗಂಡಂದಿರನ್ನು ಮಾತು ಕೇಳಿಸುವ ಧಿಮಾಕು ನೋಡಬೇಕಿತ್ತು. ಬಸ್ಸು ಹೊರಟಾಗ ಗುರುತಿಲ್ಲದವರಿಗೆ ಕೈಮಾಡಿ 'ಟಾಟಾ' ಎಂದು ಯುವಕರು ನಗುತ್ತಿದ್ದರು. ಅದನ್ನು ನೋಡಿ ಕೆಲವರು ನಗುತ್ತಿದ್ದರು. ವತ್ಸಲಾ ಹೇಳುತ್ತಿದ್ದಳು. ಈ ಬಸ್ಸು ಪ್ರಯಾಣವೆಂದರೆ ಬೇಸರ. ಬೇಕಂತಲೇ ಒತ್ತಿ ಒತ್ತಿ ನುಗ್ಗುವ ಗಂಡಸರು. ಸೀಟು ಸಿಕ್ಕಿದರಾಯಿತು. ಸಿಕ್ಕದಿದ್ದರೆ ಅವರಿಗೆ ಹಬ್ಬ. ತೂಗು ಪಟ್ಟಿಹಿಡಿದು ಜೋಲಿ ಹೋಗುವುದು. ಬಸ್ಸು ಚಲಿಸಿದೊಡನೆ ಮೈಯಿಗೆ ಹಾಯುವುದು.
ಥ್ರಿಲ್ ಎನ್ನಿಸುವುದಿಲ್ಲವಾ ನಿನಗೆ?
ಥ್ರಿಲ್ಲು! ಅದೆಂತ ಥ್ರಿಲ್ಲು ಮಾರಾಯಾ? ಅದೆಲ್ಲ ಮಾನಸಿಕ. ಯಾರೊ ಯಾರನ್ನೋ ಹಾಯಿಸಿಕೊಂಡರೆ ಥ್ರಿಲ್ಲಾ? ಈ ಯಾತನೆ ಯಾವಾಗ ಮುಗಿದೀತೋ ಎನ್ನಿಸುತ್ತದೆ.
ಕಾಲೇಜಿನಲ್ಲಿ ಕಾಗದದ ಬಾಣ ಚುಚ್ಚಿದಾಗ ಥ್ರಿಲ್ ಎನ್ನಿಸುವುದಿಲ್ಲವಾ?
ನುಸಿ ಕಚ್ಚಿದಾಗ ಥ್ರಿಲ್ ಆಗುವುದಾ? ಒಂದು ಸಲ ಏನಾಯಿತಂತಿಯಾ? ನಮ್ಮ ಕಾಲೇಜಿನಲ್ಲಿ ಸಂಗೀತ ಪ್ರೊಗ್ಯಾಂ ಇತ್ತು. ಒಬ್ಬ ಚೆನ್ನಾಗಿ ಭಾವಗೀತೆ ಹಾಡಿದ್ದ. ನನಗೆ ಸಂತೋಷವಾಗಿತ್ತು. ನನಗೂ ಹಾಡಬೇಕೆನ್ನುವಷ್ಟು. ಹೊರಬಿದ್ದಾಗ ನಾನು ಅವನ ಮೋರೆ ನೊಡಿ ನಕ್ಕೆ, ಅಷ್ಟೆ. ಏನಂತಿಯಾ ಅವನು ನನಗೇ ಗಂಟುಬೀಳಬೇಕೆ. ಸಾಯ್ಕಲ್ ಹಿಡಿದು ತನ್ನ ಗೆಳೆಯರ ಸಂಗಡ ಸ್ಟಾಂಡಿನವರೆಗೂ ಬರುತ್ತಿದ್ದ. ನಾನು ಹತ್ತಿದ ಬಸ್ಸು ಚಲಿಸಿದ ಮೇಲೆ ಹೋಗುತ್ತಿದ್ದ.
ಅಥವಾ ಮತ್ತಾರನ್ನಾದರೂ ಬೀಳ್ಕೊಡಲು ನಿಲ್ಲುತ್ತಿದ್ದರೊ.
ಅದೂ ಇರಬಹುದು. ಮೊದ ಮೊದಲು ತಮಾಶೆ ಎನ್ನಿಸಿತು. ಒಂದು ರೀತಿಯ ನೀನು ಹೇಳಿದೆಯಲ್ಲ ಥ್ರಿಲ್ಲು ಅಂತ ಹಾಗೆ ಆಗಿರಬೇಕು. ಒಮ್ಮೆ ಹೀಗೆ ಬಸ್ಸಿನ ಬಳಿ ಹಾದು ಬಂದ. ತನ್ನ ಹಿಪ್ಪಿ ಕೂದಲನ್ನು ನೇವರಿಸುತ್ತ ಪಕ್ಕದಲ್ಲಿ ಕುಳಿತ ನನ್ನ ಕಡೆ ಬಾಗಿ 'ಬ್ಯೂಟಿಪುಲ್' ಎಂದ. ನಾನು ಶಾರದೆ ಬಿದ್ದು ಬಿದ್ದು ನಕ್ಕೆವು. ಆ ಮೇಲೆ ಆ ಮೋರೆ ನೋಡಲಿಲ್ಲ. ಬೇಸರ ಬಂದಿರಬೇಕು ಅಂತೂ ಕಾಟ ತಪ್ಪಿತು.
ಕಾಲೇಜ ಜೀವನ ರಾಮೆನ್ಸ ಅಲ್ಲವಾ? ಇರಬಹುದು. ಅದಕ್ಕಾಗಿಯೇ ಹೋದವರಿಗೆ. ನಾನು ವಿದ್ಯೆಗಾಗಿ ಹೋಗಿದ್ದೆ. ನನಗೆ ಹೊಸ ಹೊಸ ಪುಸ್ತಕ ಕಂಡಾಗ ಥ್ರಿಲ್ ಆಗುತ್ತಿತ್ತು. ನಿಮ್ಮ ಗಂಡುಗಳ ಕೋತಿ ಮೋರೆ ನೋಡಿದಾಗಲ್ಲ?
ನೀನು ವಿಚಿತ್ರ.
ಏನೋ, ನೀನು ಹೇಳಿ ಹಾಗೇ ಆಗಿತ್ತಿತ್ತೇನೋ. ಆದರೆ ನೀನು ಗಂಟು ಬಿದ್ದೆಯಲ್ಲ. ನನ್ನ ಥ್ರಿಲ್ ಎಲ್ಲ ನಿನಗೆ ಗುತ್ತಿಗೆಯಾಯಿತು. ನನ್ನ ಜೋಲಿ ಹಾಳು ಮಾಡಿಬಿಟ್ಟೆ. ಎಷ್ಟು ದಿನದಿಂದ ಕಾದಿತ್ತೊ ನಿನಗಾಗಿ. ನೀನು ಏಳು ಸುತ್ತಿನ ಕೋಟೆ ಒಡೆದು ಬಂದೆ ರಾಜಕುಮಾರ ನಿನ್ನನ್ನು ಕಂಡರೂ ಥ್ರಿಲ್ಲು. ನಿನ್ನ ನೆನೆದರೂ ಥ್ರಿಲ್ಲು ಶುರುವಾಯಿತು.
ಮದುವೆ ಆದ ಮೇಲೆ ಶಮನವಾಯಿತೆ?
ವತ್ಸಲ ಮಾಯ್ ಡಿಯರ್ ಬಾಯ್ ಎಂದು ತುಟಿಕಚ್ಚಿ ಮುತ್ತು ಕೊಟ್ಟಿದ್ದಳು.
ನಗೆಯು ಬರುತಿದೆ ನನಗೆ ರಾಗ ಮಾಲಿಕೆ ಶುರುವಾಯಿತು. ನನಗೂ ನಗೆಬಂತು. ಮೂತ್ರ ಮಾಡಿ ಬರಬೇಕೆಂದು ರೋಡಿನ ಆಚೆಗೆ ನಡೆದೆ. ಚರಂಡಿಯಲ್ಲಿ ಯಾರೊ ಸತ್ತ ಬೆಕ್ಕನ್ನು ಒಗೆದಿದ್ದರು. ಕಾಗೆಗಳು ಹತ್ತಾರು ಜಮಾಯಿಸಿದ್ದವು. ತಮ್ಮ ಕಬ್ಬಿಣದ ಕೊಕ್ಕಿನಲ್ಲಿ ಕಚ್ಚಿ ಕಚ್ಚಿ ಬಿಡಿಸುತ್ತಿದ್ದವು. ಎಷ್ಟು ತಲ್ಲೀನ. ಸ್ವರ್ಗ ಸುಖ ಅನುಭೋಗಿಸುತ್ತಿದ್ದವು. ಸರ್ವ ಪ್ರಪಂಚವೂ ಅಲ್ಲಿಯೇ. ನಾನು ನೋಡುತ್ತಲೇ ನಿಂತಿದ್ದೆ. ಒಂದು ತರದ ಅಸಹ್ಯತೆ ಮನಸ್ಸನ್ನು ವ್ಯಾಪಿಸಿತು. ಅಯ್ಯೊ ಜೀವವೇ ಎನ್ನಿಸಿತು. ಇನ್ನು ಎಷ್ಟು ಹೊತ್ತು ನಿಲ್ಲುತ್ತಿದ್ದೆನೊ ಆ ಕಡೆಯಿಂದ ಗಾಳಿ ಬೀಸಿತು. ಗೊಕ್ ಎಂದು ವಾಕರಿಗೆ ಬಂತು. ಪ್ಯಾಂಟಿನ ಗುಂಡಿ ಹಾಕಿಕೊಳ್ಳುತ್ತಲೇ ಓಡಿದೆ.
ಗಾಡಿ ಬರಲಿಲ್ಲ. ಒಂದು ಪೇಪರನ್ನು ಕೊಂಡೆ. ಓದಲು ಮನಸ್ಸೇ ಬರಲಿಲ್ಲ. ಪೇಪರು ತುಂಬ ಕಾಗೆಗಳು. ಅಷ್ಟು ಹೊತ್ತಿಗೆ ಲಿಂಗಪ್ಪ ಬಂದ. ಹಲ್ಲೊ ಎಲ್ಲಿ?
ಇಲ್ಲೇ ಸದ್ಯ.
ನಿಮ್ಮ ಬಸ್ಸು ಇನ್ನೂ ಬರಲಿಲ್ಲವಾ? ಆರೂವರೆಯದು. ಎಲ್ಲೊ 'ಪುಸ್' ಎಂದಿರಬೇಕು. ಸುಟ್ಟು ಬಸ್ಸುಗಳು. ಈ ಗೌರ್ನಮೆಂಟ ಕೈಹಾಕಿದ್ದೆಲ್ಲ ಹೀಗೆ. ತನ್ನ ಜನರಲ್ ಪಾಲಿಟಿಕ್ಸಿನ ಜ್ಞಾನಕೋಶಕ್ಕೆ ಕೈ ಹಾಕಿದ. ಒಂದು ಶಿಂಗಲ್ ಚಾ ಹೊಡೆಯುವಾ ಎಂದು ಎಳೆದ. ಕ್ಯಾಂಟೀನನ್ನು ಹೊಕ್ಕೆವು.
ಬಿಸಿ ಬಿಸಿ ಇಡ್ಲಿ ಎರಡು ಎಂದ.
ಬೇಡ ಅಕ್ಕಿಯದನ್ನೆ ನಾನು ಈಗ ತಿನ್ನುವುದಿಲ್ಲ.
ಎನು?
ಅಪ್ಪನಿಗೆ ಅನ್ನ ಹಾಕುವುದಿದೆ.
ಹಾಗಾದರೆ ಬಿಸಿ ಬಿಸಿ ದೋಸೆ ಶುದ್ಧ ಗೋದಿಯದು.
ಮಾತಾಡು ಮಾರಾಯಾ?
ಏನು ಗಲಾಟೆ.
ಎಂದು ಲಿಂಗಪ್ಪ ಕಿಡಕಿಗೆ ಮುಖ ತಿರುಹಿದ. ಚರಂಡಿಯಲ್ಲಿ ಕಾಗೆಗಳ ಮೇಲಾಟ ನಡೆದಿತ್ತು. ಥೂ ಎಲ್ಲಿ ಹೋದರೂ ಈ ಕಾಗೆಗಳ ಕಾಟ ತಪ್ಪದು. ಎನ್ನುತ್ತಿರುವಾಗ ಮಾಳಿಗೆಯಿಂದ ಯಾರೊ ಇಳಿದರು. ಲಿಂಗಪ್ಪನಿಗೆ ಆಕರ್ಿಮಿಡಿಸಿನ ಹಾಗೆ ಆಗಿರಬೇಕು. ಅಕೊ! ಎಂದ. ನನಗೆ ಏನೆಂದು ತಿಳಿಯದೆ ಒಂದೇ ಸಲ ಚಹ ನುಂಗಿ ಗ್ಲಾಸು ಕೆಳಗಿಟ್ಟೆ.
ಕಂಡೆಯಾ ಕ್ಷಿಯೊಪಾತ್ರ. ಈಗ ನೋಡುತ್ತಿರು. ಇಲ್ಲೇ ಕುಳಿತಿದ್ದರೆ ಎರಡು ಮೂರು ಜನರಾದರೂ ಮಾಳಿಗೆಯಿಂದ ಇಳಿದುಬರುತ್ತಾರೆ.
ಬಂದರೆ?
ಬಂದರಲ್ಲ. ಅವರು ಈಗ ಅವಳ ಮಗ್ಗುಲಲ್ಲಿ ಮಲಗಿ ಎದ್ದರು. ಅಂಥಾದ್ದನ್ನು ಹೇಳುವುದರಲ್ಲಿ ಲಿಂಗಪ್ಪನಿಗೆ ಎಲ್ಲಿಲ್ಲದ ಉತ್ಸಾಹ. ಯಕ್ಷಗಾನ ಕಲಾವಿದರು. ರಾಜಕಾರಣಿಗಳು ಚೇರಮನ್ನರುಗಳು ಎಲ್ಲರೂ ರುಚಿ ಉಂಡವರೆ. ಏನಂತಿಯಾ ಊರ್ವಶಿ, ಮೇನಕಿ ಮೊದಲಾದವರ ಜಾತಿ ಅವಳು. ಮೊನ್ನೆನ ಮಜಾ ಕೇಳಿದ್ದಿಯಾ ಆ ವೇದಾಂತ ಭಟ್ಟ ಸೋಗೆ ಅಟ್ಟಣಗಿಯಲ್ಲಿ ಈಕೆ ಜೊತೆ ಮಲಗಿದ್ದನಂತೆ. ಅಕಸ್ಮಾತ್ ಅವಳ ಗಂಡ ಕಂಡು ಬಿಟ್ಟನಂತೆ. ಪಾಪ ಏನಾಗಬೇಡ. ಒಂದು ಸೊಟ್ಟ ತೆಗೆದುಕೊಂಡು ಬಡಿದನಂತೆ. ವೇದಾಂತಿ ಪಾರಾದ. ಈಕೆ ಹೋಗಿ ಬಾವಿ ಹಾರಿಬಿಟ್ಟಳಂತೆ. ಕೇಳಬೇಕೆ ಆಗ ಗಂಡನೇ ಓಡಿ ಹೋಗಿ ಎತ್ತಿ ಬದುಕಿಸಿದನಂತೆ.
ಹಾಳು ಬೀಳಲಿ ಮಾಡಿದವರ ಪಾಪ ಆಡಿದವರಿಗೆ. ನಿನಗೆ ಯಾಕೆ ಅಷ್ಟು ನಾಲಿಗೆ ತುರಿಕೆ.
ಹೌದು ಮಾರಾಯಾ ಈ ಕಾಗೆಗಳು ಯಾಕೆ ಹೀಗೆ ಒದರುತ್ತಾವೊ. ಹುಶ್ ಶ್ಚು ಎಂದು ಎದ್ದ. 
ಅಂಗಡಿ ಬಾಗಿಲಲ್ಲಿ ಯಾರೋ ಕಫ ಉಗಿದಿದ್ದರು. ಮೂರುನಾಲ್ಕು ಕಾಗೆಗಳು ಚುಂಚಿನಿಂದ ತೆಗೆಯುವಾಗ ಮಾಲೆ ಮಾಲೆಯಾಗಿರುತ್ತಿತ್ತು. ಕುಡಿದ ಚಾವೆಲ್ಲ ತಿರುಗಿ ಬರುತಿತ್ತು. ಅಷ್ಟು ಹೊತ್ತಿಗೆ ಬಸ್ಸು ಬಂತು. ಆ ಕಡೆ ನುಗ್ಗಿದೆ.
ನಮ್ಮದು ಹಳ್ಳಿಯ ಬಸ್ಸಾದ್ದರಿಂದ ಜನ ಕಡಿಮೆ. ನಿರಾತಂಕವಾಗಿ ಹತ್ತಿ ಕುಳಿತೆ. ಲಿಂಗಪ್ಪ ಬೇರೆ  ಬಸ್ಸಿನ ಕಡೆ ನಡೆದ. ಕಂಡಕ್ಟರ್ ಟಿಕೇಟ್ ಪಂಚುಮಾಡಿ ಆಫೀಸಿಗೆ ಹೋದ. ಆಗ ಕ್ಲಿಯೋಪಾತ್ರ ಬಸ್ಸು ಹತ್ತಿದಳು. ಕ್ಲಿಯೋಪಾತ್ರ ಆಕೆಯ ನಿಜವಾದ ಹೆಸರಲ್ಲ. ಆಕೆಯ ಸೌಂದರ್ಯಕ್ಕೂ, ಕಾಮಕ್ಕೂ ಮೆಚ್ಚಿ ನಮ್ಮ ಲಿಂಗಪ್ಪನಂತಹರು ಕೊಟ್ಟ ಬಿರುದು. ಏನಿದ್ದರೂ ಲಿಂಗಪ್ಪ ರಸಿಕ ಎನ್ನಿಸಿತು.
ತನ್ನ ನಿರಿ, ಸೆರಗುಗಳನ್ನು ಪಕ್ಕದವರಿಗೆ ಹಾಯಿಸಿಕೊಳ್ಳುತ್ತ ಮುಂದಿನ ಸೀಟಿಗೆ ಹೋಗಿ ಕುಳಿತಳು. ಜನವೆಲ್ಲ ಸ್ತಬ್ಧವಾಯಿತು. ನನಗೆ ಆಶ್ಚರ್ಯ ಜನ ಮಾತಾಡುವುದಿಲ್ಲವೇಕೆ?
ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ರೀತಿ ಆಡುತ್ತಿದ್ದಳೇನು ಕ್ಲಿಯೋಪಾತ್ರ.
ಬಸ್ಸು ಚಲಿಸಿತು. ಸತ್ಯ, ವತ್ಸಲಾ ಎಲ್ಲರ ಮನಸ್ಸೂ ಆ ಕಡೆಯೇ ಇತ್ತು. ಅವಳ ಚಲನೆ, ಅವಳ ಬ್ಲೌಸಿನಿಂದ ಹೊಕ್ಕಳು ಕೆಳಗೆ ತೀರಾ ಜಾರಿದ ಸೀರೆಯವರೆಗಿನ ಎಣ್ಣೆಗಪ್ಪಿನ ಉದರಭಾಗ, ಲೂಸು ಬ್ಲೌಸಿನ ಹೊರಗೊತ್ತಿದ ಮೊಲೆಯ ಮಾಂಸವನ್ನೇ ಅನೇಕರು ಕಣ್ಣಲ್ಲಿ ನೆಕ್ಕುತ್ತಿದ್ದರು.
ನನಗೂ ನೋಡಬೇಕೆನ್ನಿಸಲಿಲ್ಲವೆ? ನೀನಿದ್ದರೆ ಏನನ್ನುತ್ತಿದ್ದಿ ವತ್ಸಲಾ. ನಾನೂ ಅಷ್ಟೆಯೆ? ಮೈಯ್ಮೇಲೆಲ್ಲ ಆ ಕಾಗೆಗಳು ಕುಳಿತಂತೆ. ಚರಂಡಿಯ ನೆನಪು. ಪಕ್ಕದಲ್ಲಿ ಕುಳಿತ ಯುವಕ 'ಮೈಯಲ್ಲಿ ಚನ್ನಾಗಿಲ್ಲವಾ? ಎಂದು ಮಾತು ತೆಗೆದ. ನನಗೆ ಮಾತು ಬೇಕಿರಲಿಲ್ಲ, ಬಸ್ಸಿನ ಮೇಲೆಲ್ಲ ಹರಟುವುದು ನನ್ನ ಸ್ವಭಾವವೂ ಅಲ್ಲ. ಆದರೂ ದಾಕ್ಷಿಣ್ಯಕ್ಕೆ ಮಾತಾಡಿದೆ.
ನೋಡಿ ಆಕೆಯಾ?
ಹ್ಞಾಂ
ಎಂಥ ಹೆಣ್ಣು ಮಾರಾಯರೆ ಮಾತು ನನಗೆ ಬೇಡವಾಗಿತ್ತು. ಆದರೂ ಆತ ಕೊರೆದ. ನೋಡಿ ನೋಡಿ ಅವರನ್ನು ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತವರು. ಮಧ್ಯವಯಸ್ಸು ದಾಟಿದೆ. ಚಪ್ಪರಕು ಸ್ವಭಾವದವರಾಗಿರಬೇಕು. ಕಾಲಿಗೆ ಹಲಸಿನ ಮೇಣ ತಾಗಿದ ನೊಣದಂತೆ ಒದ್ದಾಡುತ್ತಿದ್ದರು. ಮುಂದಿನ ಸೀಟಿಗೆ ತಮ್ಮ ಎರಡೂ ಕೈ ತೋಳಿಟ್ಟು ಬಗ್ಗಿದ್ದರು. ಗಾಡಿ ಅಲುಗಿದಾಗಲಾದರೂ ಅವಳ ಸ್ಪರ್ಶವಾಗಲೆಂದು. ಅವಳು ಆದಷ್ಟು ಹಿಂದೇ ತನ್ನ ಕೊರಳನ್ನು ಬಾಗಿಸಿ, ಮುಡಿಯನ್ನೇ ಅವರ ಕೈ ಮೇಲೆ ಕೆಡವುತ್ತಿದ್ದಳು. ಅವರಿಗೆ ಅತ್ತ ಚಪಲ. ಆದರೆ ಸುತ್ತಲೂ ಗುರುತಿನವರು. ನಿಜವಾಗಿಯೂ ವತ್ಸಲಾ ನನಗೆ ಪಾಪವೆನ್ನಿಸಿತು. ಅಷ್ಟಿದ್ದರೆ ಅವರೇಕೆ ಹೆದರಬೇಕು. ಮುಂದಿನ ಸೀಟಿನಲ್ಲೇ ಹೋಗಿ ಕುಳಿತರಾಗದೆ? ಮನುಷ್ಯನ ಈ ಅವಸ್ಥೆ ಯಾರಿಗೂ ಬೇಡ.
ಆ ಬೋಳಿ ಮಕ್ಕಳ ನೋಡಿ ಹಲ್ಕಟ್ ಬಾಂಚೋದ್ ಎಂದ ಪಕ್ಕದವ. ನನಗೆ ರೇಗಿತು.
ಅಯ್ಯಾ, ನೀನು ಸಂಭಾವಿತನ? ನೀನು ಮಾಂಸ ಭಕ್ಷಕನಲ್ಲವಾ? ಹಾಗಾದರೆ ಯಾಕೆ ಕೊರೆಯುತ್ತಿ. ಅವರಿವರಿಗೆ ಬೇಕಾದದ್ದು ಅವರವರಿಗೆ.
ಅವನಿಗೆ ಬೇಸರ ಆಗಿರಬೇಕು. ನಾನು ಮುಖ ತಿರುಗಿಸಿ ಕುಳಿತೆ. ಬಸ್ಸು ನಿಂತಿತು. ಕ್ಲಿಯೋಪಾತ್ರ ಇಳಿದಳು. ಅವರೂ ಇಳಿದರು.
ಎಲ್ಲ ಅಷ್ಟೇ ವತ್ಸಲಾ. ಹಾಗೆ ಕೇಳಿದರೆ ಅವಳ ಬಗ್ಗೆ ನನಗೆ ಅಭಿಮಾನ ಅನ್ನಿಸಿತು. ಈ ಗಂಡಸರೆಲ್ಲ ಹುಳಿತಿಂದ ಹಾಗೇ ಒದ್ದಾಡುವಾಗ ಆ ಹೆಣ್ಣು ಹೇಗೇ ಧಿಮಾಕು ಮಾಡಿದಳು.
ನೀವೆಲ್ಲ ನನಗೆ ತೃಣ ಎಂಬಂತೆ ನಡೆದುಬಿಟ್ಟಳು.
ಬಸ್ಸಿನಲ್ಲಿ ಉಸಿರು ಬಂತು. ಒಬ್ಬೊಬ್ಬರು ಒಂದೊಂದು ಮಾತು. ಇವರೆಲ್ಲ ಸಂಭಾವಿತರು ಅಂತಿಯಾ ವತ್ಸಲಾ? ಎಲ್ಲ ಅಷ್ಟೆ ಅಲ್ಲದಿದ್ದರೆ ಗುರುನಾಥ ಏನಾದ ಗೊತ್ತಲ್ಲ. ಗುರುನಾಥ ಅವನ ಹೆಂಡತಿಯ ಚಲುವಿಕೆಯೇನು ಕಡಿಮೆ. ಅಲ್ಲದೆ ಎಷ್ಟು ನಾಜೂಕು. ಮಕ್ಕಳು ರತ್ನದಂತವು. ಆದರೆ ಅವನು ಯಾವುದೋ ಒಂದು ಮಲೆಯಾಳಿ ಹೆಣ್ಣಿಗೆ ಗಂಟುಬಿದ್ದ. ಅಂಥ ಹೆಂಡತಿ ಮಕ್ಕಳು ಇದ್ದರೂ ಅವನಿಗೆ ಹಳಸಿದ ಮಾಂಸದ ಘಾಟು ಹೊಡೆಯಿತು. ನಾನು ಎಷ್ಟು ಹೇಳಿದೆ. ನೀನು ಹೇಳಿದೆ. ಆದರೆ ಗುರುನಾಥ ಹುಚ್ಚನಾದ. ಕೊನೆಗೆ ಆಕೆಯ ಮತ್ತೊಂದು ಗಿರಾಕಿ ಚೂರಿ ಹಾಕಲು ಬಂದನಂತೆ. ಹೇಗೆ ಜೀವದಿಂದ ಪಾರಾಗಿ ಬಂದ. ಈಗ ಎಷ್ಟು ಸಲೀಲಾಗಿ ಇದ್ದಾನೆ. ಶುದ್ಧ ಪ್ರೇಮ ಸಾಧ್ಯವಿಲ್ಲ. ಅದು ಕಾವ್ಯದಲ್ಲಿ ಮಾತ್ರ ಇರಬಹುದು. ನಾನೂ ಅದಕ್ಕೆ ನಿನಗೆ ಗಂಟು ಬಿದ್ದಿದ್ದಿರಬಹುದು. ನಿನ್ನನ್ನು ನಾನು ಬಿಟ್ಟುಳಿಯಲಾಗುವುದಿಲ್ಲ. ಆದರೆ ನನಗೆ ಹೊಟ್ಟೆ ಕಿಚ್ಚಿಲ್ಲ ಅಲ್ಲವೇನೆ? ನನ್ನನ್ನು ಎಲ್ಲಿ ಬಿಡಲೂ ಹೆದರಿಕೆಯಿಲ್ಲ ಅಂತಿಯಲ್ಲ ನೀನು? ಹೌದೇನೆ ನಾನೂ ಅಷ್ಟೇ ಇರಬಹುದು. ವತ್ಸಲಾ. ಇದೆಲ್ಲ ಏನು? ಪ್ರೀತಿ ಅರ್ಥವಾಗುವುದಿಲ್ಲ. ಕ್ಲಿಯೊಪಾತ್ರ ಎಷ್ಟು ಪ್ರೀತಿಯನ್ನು ದಕ್ಕಿಸಿಕೊಂಡಳು. ಆ ಮಲೆಯಾಳಿ ಹೆಂಗಸು ಹೋಗಲಿ ಬಿಡು. ನಿನ್ನ ಮಾವನನ್ನೇ ನೋಡು. ನೀನೇ ಹೇಳಿದ್ದಿಯಲ್ಲ. ಗಂಡು-ಹೆಣ್ಣು ಇರುವುದೆಂದರೆ ಕಾಮಕ್ಕಾಗಿ ಎಂದೇ ಅವನ ಸಿದ್ಧಾಂತ. ತಾನೂ ಏಕಾಂತ ಅವನ ದೃಷ್ಟಿಗೆ ಸಿಕ್ಕುವುದಿಲ್ಲ ಎಂದು. ಇದೆಲ್ಲ ಏನು? ನನಗೆ ನನ್ನ ವತ್ಸಲಾ ಸಾಕು. ನನಗೆ ಕಾಗೆಯ ಬಗ್ಗೆ ಅಸಹ್ಯ.
ಬಸ್ಸು ನಿಂತಿತು. ನಾನು ಇಳಿದೆ. ಬಿಸಿಲೇರುತಿತ್ತು. ಅಂಗಡಿ ಹೊಕ್ಕಿ ಬಾಳೆ ಹಣ್ಣು ತಿನ್ನಬೇಕೆನಿಸುತ್ತಿತ್ತು. ಆದರೆ ಮನಸ್ಸಿಗೆ ಸ್ವಸ್ಥವಿರಲಿಲ್ಲ. ಸುಮ್ಮನೆ ನಡೆದೆ. ಪೇಪರನ್ನು ಬಿಸಿಲಿಗೆ ಅಡ್ಡವಾಗಿ ಹಿಡಿದೆ. ಸೆಟ್ಟಿ ಮನೆ ದಾಟುವಾಗ ನಿಂತೆ. ಸೆಟ್ಟಿ ಹೆಂಡತಿಯನ್ನು ಹಿಡಿದು ಸೌದೆಕೋಲುನಿಂದ ಬಡಿಯುತ್ತಿದ್ದ. ಅವಳು ಅರಚಿಕೊಳ್ಳುತ್ತಿದ್ದಳು. ಎಲ್ಲಿ ಕೊಂದು ಬಿಟ್ಟು ಪೇಚಾಟಕ್ಕೆ ಸಿಕ್ಕುತಾನೇನೋ ಎಂದು ಹೊಕ್ಕಿದೆ.
ಏನೊ ಸೆಟ್ಟಿ ಹೀಗೆ ಬಡಿಯೂದಾ? ಎಂದೆ.
ನೋಡಿ ಒಡೆಯಾ? ಇವಳು ಬೀದಿ ಬಸವಿ ಆಗುತ್ತಿದ್ದಾಳೆ. ಸೌದೆಗೆ ಹೋದರೆ ಎಷ್ಟು ಹೊತ್ತು ಇವಳಿಗೆ. ಆ ದುರ್ಗನಾಯ್ಕನ ಕೈಲಿ ಕೊಮಣೆ ಮಾಡುತ್ತ ವೇಳೆ ಕಳೆಯುತ್ತಾಳೆ, ರಂಡೆ.
ನಾನು ಹೋದದ್ದರಿಂದಲೋ ಏನೋ. ಅವನ ಹೆಂಡತಿ ಕಣ್ಣೀರು ಒರೆಸಿಕೊಂಡಳು. ಶೆಟ್ಟಿ ಅವಳನ್ನು ಬಿಟ್ಟ. ಎರಡೂ ಕೈಗಳನ್ನು ಮೇಲೆ ಮಾಡಿ ಮುಡಿಕಟ್ಟಿಕೊಳ್ಳುತ್ತ ನಿಂತಳು. ಬ್ಲೌಸ್ ಇಲ್ಲದ್ದರಿಂದ ಅರ್ಧಮರ್ಧ ಮೊಲೆ ಇಣುಕುತಿತ್ತು.
ನೋಡಿ ಒಡೆಯಾ? ತಾ ಕಳ್ಳ ಪರರ ನಂಬ. ಸೌದೆ ಹೊರೆ ಒಜ್ಜೆ ಆಗಿತ್ತು. ಇವರು ಮುಂದೆ ಬಂದಿದ್ದರು. ನಾನು ಹೊರೆ ಚಾಚಿದೆ. ಜಾರಿಬಿದ್ದು ಹೋಯಿತು. ಎತ್ತಲು ಆಗಲಿಲ್ಲ. ಅಲ್ಲೇ ಕರಡಕೊಯ್ಯುತ್ತಿದ್ದ ದುರ್ಗಪ್ಪನ ಹತ್ತಿರ ನಗೆಯೆಂದೆ. ಅವನು ಕವಳ ಹಾಕುತ್ತ ಕುಳಿತನೂ ಒಂದು ತೆಗೆದುಕೊಂಡು ಹಾಕಿದೆ. ಅಷ್ಟೇ ಅಷ್ಟಕ್ಕೆಲ್ಲ ಈ ರಂಪಾಟ.
ನೀವು ನಂಬಬೇಡಿ. ಈ ರಂಡೆ ಏನು ಮಾಡಿದಳೆಂದು ನನಗೆ ಗೊತ್ತ ಎಂದು ನನಗೆ ಕೂಡ್ರಲು ಸ್ಥಳಮಾಡಿಕೊಟ್ಟ ಶೆಟ್ಟಿ. ನಾನು ಬಂದುದರಿಂದಲೇನೊ ಅವನ ಹೆಂಡತಿ ಗೆಲುವಾದಳು. ಅಲ್ಲಿಯೇ ಮೆಟ್ಟಗತ್ತಿ ಇಟ್ಟು ಹರಿಗೆಸೊಪ್ಪು ಕೊರೆಯಲು ಶುರುಮಾಡಿದಳು. ಕಂಪೌಂಡಿನಲ್ಲಿ ಆಕಳು ಬಂತು. 'ಹಾತ್ ಹುಶ್' ಹಾಕುತ್ತ ನಡೆದ. ಅವಳು ಮೆಟ್ಟಗತ್ತಿಯ ಮೇಲೆ ಕುಳಿತಳು. ತನ್ನ ಸೀರೆಯನ್ನು ಮೇಲೆ ಸರಿಸಿ, ಸರಿಸಿ ಬೆಳ್ಳ ಬೆಳ್ಳಗಿನ ತೊಡೆಯನ್ನು ನಿರ್ಲಕ್ಷ್ಯಿತವೊ ಎನ್ನುವಂತೆ ತೋರಿಸುತ್ತಿದ್ದಳು. ಸರಿಸುವ ನೆವದಿಂದ ತನ್ನ ಎದೆಯ ಗುಂಡಿಕೆಯನ್ನು ಪ್ರದಶರ್ಿಸುತ್ತಿದ್ದಳು. ನಾನು ಹೆದರಿದೆ. ಸಿಟ್ಟೂ ಬಂತು. ಹೀಗೆಲ್ಲ ಮಾಡಿದರೆ ಸಂಸಾರ ಹೇಗೆ ನಡೆಯುತ್ತದೆ ಎಂದೆ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಒಂದು ಥರ ನಗೆಯಾಡಿದಳು. ಇನ್ನು ಕೂಡ್ರುವುದು ಕ್ಷೇಮವಲ್ಲವೆನ್ನಿಸಿತು. ಬರುತ್ತೇನೆ ಎಂದು ಎದ್ದೆ. ಸೀರೆ ಕೊಡಹುತ್ತ ಎದ್ದು ನಿಂತಳು. ದಣಪೆಯವರೆಗೂ ಬಂದು ಬರುತ್ತೇನೊ ಎಂದೆ. ಹೊರಟು ಬಿಟ್ಟಿರಾ? ಎಂದ ಶೆಟ್ಟಿ ಬಾಳೆಕೊನೆ ಶಿಲ್ಕ ಅದೆಯಾ ಎಂದ. ನೋಡುವಾ ನಾಳೆ ಆ ಕಡೆ ಬಾ ಎಂದೆ. ಅವನ ಹೆಂಡತಿ ಅಂಗಳಕ್ಕೆ ಬಂದಿರಬೇಕು. ತಿರುಗಿ ನೋಡಬೇಕನ್ನಿಸಿತು. ಮನುಷ್ಯನನ್ನೇ ಮನುಷ್ಯನು ದೌರ್ಬಲ್ಯಕ್ಕೆ ಸಿಲುಕಿಸುವುದಾದರೆ ಯಾವುದು ಅಸಾಧ್ಯ.
ಇದೇ ನಿಸರ್ಗವೇನೆ ವತ್ಸಲಾ? ಹಾಗಾದರೆ ಸಂಸ್ಕೃತಿಯೆಂದರೇನು? ಅದೆಲ್ಲಾ ಸುಳ್ಳು ಅಲ್ಲವಾ? ಕಾಗೆಗಳು, ಚರಂಡಿ, ಕೊಳೆತ ಮಾಂಸ, ಅದೇ ಸತ್ಯ ಥೂ.
ನಿನಗೂ ಅಂಥಾ ಚಪಲತೆ ಉಂಟಾಗುವುದಿಲ್ಲವಾ? ಅಥವಾ ಅದನ್ನೆಲ್ಲ ನೀನೂ ಹತೋಟಿಯಲ್ಲಿಟ್ಟು, ನನ್ನನ್ನೂ ಹತೋಟಿಯಲ್ಲಿಟ್ಟುಕೊಂಡಿದ್ದಿಯಾ? ನೀನು ಸತ್ತು ಹೋದರೆ ನಾನೂ ಕೊಳಕು ಕೂಳನ್ನು ಆರಿಸುತ್ತೇನೆಯೆ? ನಮಗೆ ಇದು ಸಾಧ್ಯವಿಲ್ಲ ಅಲ್ಲವಾ? ಅವರವರ ದಾರಿ ಅವರಿಗೆ. ನಾನೇಕೆ ತಲೆಕೆಡಿಸಿಕೊಳ್ಳಬೇಕು.
ಮಧ್ಯಾಹ್ನ ಹನ್ನೆರಡಕ್ಕೆ ಸಮೀಪ. ಗೇಟಿನಲ್ಲಿ ವತ್ಸಲಾ ನಿಂತಿದ್ದಳು. ಸುಳ್ಳು ಸಿಟ್ಟಿನಿಂದ ಇಷ್ಟು ಹೊತ್ತಾ? ನೋಡಿ ಮನೆಗೆ ಬಂದವರೆಲ್ಲ ನಿಮ್ಮನ್ನೇ ಕೇಳುತ್ತಿದ್ದಾರೆ. ಆಗಲೇ ಭಟ್ಟರು ಬಂದಿದ್ದಾರೆ. ನಿಮ್ಮದು ಯಾವಾಗಲೂ ಹೀಗೆ.
ನಾನು ವತ್ಸಲೆಯನ್ನೇ ನುಂಗುವ ದೃಷ್ಟಿಯಿಂದ ನೋಡುತ್ತ ನಿಂತೆ.
ಇಂದು ಮಾವನ ದಿನ ಎಂದು ಅರ್ಥಗಭರ್ಿತವಾಗಿ ನಕ್ಕಳು ವತ್ಸಲ. ತುಂಟಿ ಎಂದು ಕೆನ್ನೆ ಚಿವುಟಿದೆ.
ಸಾಕು ಎಂದರೆ, ನೋಡಿಯಾರು ಎಂದಳು ವತ್ಸಲ.
ವಿಧಿಯಂತೆ ಎಲ್ಲ ನಡೆಯಿತು. ಕಾಗೆಗೆ ಎಡೆ ಇಟ್ಟೆ. ಹಾಯ್ ಹಾಯ್ ಎನ್ನಲು ಬಾಯ್ತೆಗೆದೆ. ಅಯ್ಯೊ! ಆ ಚರಂಡಿಯ ನೆನಪು. ಸತ್ತ ಬೆಕ್ಕಿನ ಮಾಂಸ, ಕಫವನ್ನೇ ನಾರು ನಾರಾಗಿ ಎಳೆಯುತ್ತಿರುವ ಕಾಗೆ, ಅದೇ ಕಾಗೆಯೆ ನನ್ನ ಅಪ್ಪನಿಗೆ ಅನ್ನ ಮುಟ್ಟಿಸುತ್ತದೆಯೆ!
ವಾಕರಿಕೆ ಬಂತು. ಆದರೂ ರೂಢಿ ಯಾಕೆ ಹಾಗೆ ನಿಂತಿದ್ದೀರಿ ಕರೆಯಿರಿ ಎಂದಳು ವತ್ಸಲ. ಅವಳಿಗೆ ಕೂಡಲೇ ಗೊತ್ತಾಗುತ್ತದೆ ನನ್ನ ಮಿಡಿತ. ನನ್ನ ಭಾವನಾಪರವಶತೆ ಅವಳಿಗೆ ಗೊತ್ತು. ಇಂದು ಏನಾದರೂ ನೋಡಿಬಂದಿರಬೇಕು. ಅಥವಾ ಜಗಳ ಮಾಡಿಬಂದಿರಬೇಕು. ಅಥವಾ ರಾಜಕೀಯ ಭಾಷಣ ಕೇಳಿರಬೇಕು. ಇಲ್ಲವೆ, ಯಾವುದೊ ಪುಸ್ತಕ ಓದಿರಬೇಕು. ಅಥವಾ ಯಾವುದೋ ಸಿನೇಮಾಕ್ಕೆ ಹೋಗಿರಬೇಕು. ಇನ್ನು ಮಧ್ಯಾಹ್ನ ತರಾಟೆಗೆ ತೆಗೆದು ಕೊಳ್ಳುತ್ತಾ ಕೇಳುತ್ತಾಳೆ. ಚಚರ್ೆನಡೆಸುತ್ತಾಳೆ. ನನ್ನ ಮುದ್ದು ಮಗು ಎನ್ನುತ್ತಾಳೆ. ವತ್ಸಲೆಯ ಮಾತಿಗೆ ಎಚ್ಚತ್ತು 'ಹ್ಯಾ ಹಾಯ್' ಕರೆದೆ. ಕಾಗೆ ಬರಲಿಲ್ಲ. ವತ್ಸಲೆಯ ಮನಸ್ಸಿನಲ್ಲಿ ಭಯ. ಆಯಿಯ ಮನಸ್ಸಿನಲ್ಲಿ ಶಂಕೆ. ಹುಡುಗರಿಗೆ ಊಟದ ಚಿಂತೆ.
ಎಲ್ಲಿ ಮೈಲಿಗೆಯಾಗಿದೆಯೊ ಎಂದು ಆಯಿಗೆ ಭಯ. ಸ್ನಾನ ಆದ ಮೇಲೆ ಉಚ್ಚೆ ಹೊಯ್ದು ಬಿಟ್ಟಿದ್ದೇನೇನೊ ಎಂದು ಭಟ್ಟರಿಗೆ ಭಯ. ಈ ತಪ್ಪಿಗೆ ತನ್ನ ಗಂಡ ಪಕ್ಕಾಗುತ್ತಾನೆಂದು ವತ್ಸಲೆಗೆ ಭಯ. ನನಗೆ ಸ್ಥಾನಮಾನದ ಭಯ. ಮತ್ತೆ ಕರೆದೆ ಮತ್ತೆ ಕರೆದೆ.
ಮೌನವೇ ರಾಜ್ಯ ಪಸರಿಸುತ್ತದೆ. ಅರ್ಧ ತಾಸು ಆದರೂ ಕಾಗೆಯಿಲ್ಲ. ಕೊನೆ ಆಯಿತು. ತಾನು ನೀರು ಬಿಡುತ್ತೇನೆ ಎಂದು ಬಂದಳು. ಮತ್ತೆ ಕರೆದೆ. ಹತ್ತುನಿಮಿಷದ ಮೇಲೆ ಕರ ಕರ ಎಂದು ಹಾರಿಬಂತು.
ಕೊಳೆ ಹೆಕ್ಕುವ ಈ ಕಾಗೆಗಳಿಗೆ ಸೂಕ್ಷ್ಮವಿಷ್ಟು ಎಂದು ಹಲ್ಲು ಕಡಿದೆ. ಬೇರೆ ಸಮಯವಾಗಿದ್ದರೆ ಚಿಟ್ ಬಿಲ್ಲಿನಿಂದ ಎದುರಿಸಿ ಬಿಡುತ್ತಿದ್ದೆ. ಈಗ ಹಾಗಲ್ಲ ಅಪ್ಪನಿಗೆ ಪಾರ್ಸೆಲ್ ಮುಟ್ಟಿಸಬೇಕಲ್ಲ.
ಬಂತು ಕಾಗೆ ಒಂದೋ ಎರಡೋ ಎಡೆ ತಿಂದಿತು. ಎಲ್ಲರಿಗೂ ಸಮಾಧಾನ. ಹೆಚ್ಚು ಮಾತಾಡದೇ ಊಟ ಮಾಡಿ ಮುಗಿಸಿದೆ. ಎಲ್ಲರೂ ಹೊರಟು ಹೋದರು. ರೂಮನ್ನು ಹೊಕ್ಕಿ ನಿರುಂಬಳವಾಗಿ ಮಲಗಿದೆ.
ಮನಸ್ಸು ವೇದನೆಗೊಳಗಾಗುತ್ತಿತ್ತು. ಆದರೂ ದಣಿವು. ಅದರಲ್ಲಿ ಶ್ರಾದ್ಧದ ಊಟ. ಬಳಲಿಕೆ ಹಾಯಾಗಿ ಗಾಳಿಬೀಸಿತು. ನಿದ್ದೆ ಬಂತು.
ಎಚ್ಚರಾದಾಗ ಐದು ಗಂಟೆ. ತಲೆ ಹಗುರಾಗಿತ್ತು. ಇಷ್ಟು ತಣ್ಣೀರು ಚಿಮುಕಿಸಿ ಬಂದು ಕುಳಿತೆ. ಹಿತ್ತಲಲ್ಲಿ ತೆಂಗಿನ ಹೆಡೆ ನೇಯುತ್ತಿದ್ದ ವತ್ಸಲೆ ಕಂಡಿರಬೇಕು. ಚಹಾ ಮಾಡಿ ತಂದಳು.
ಏನು ಆರಾಮ ಆಯ್ತಾ.
ನಗೆಯಾಡಿದೆ, ಅಷ್ಟೆ.
ನೋಡಿ ದಿನವಿಡೀ ಕಾಗೆಗೆ ಬಯ್ಯುತ್ತಿರಬೇಡಿ. ಅದಕ್ಕೆ ಕೋಪ ಬರುತ್ತದೆ. ನಕ್ಕಳು ವತ್ಸಲೆ. ನಕ್ಕರೆ ಮಿಂಚು ತೋಕುತ್ತದೆ.
ಹೌದಾ?
ಕಣ್ಣು ಕಾಣಲಿಲ್ಲವಾ? ಇಂದು ಕಾಗೆ ಬರದಿದ್ದರೆ ಎಷ್ಟು  ಪಜೀತಿಯಾಗುತಿತ್ತು.
ವತ್ಸಲಾ ಕಾಗೆಗಳು.....
ಉಶ್ ವತ್ಸಲಾ ತುಟಿಯ ಮೇಲೆ ಕೈಯಿಡುತ್ತಾ ಈ ಕಾಗೆ ಬರುವ ಮುನ್ನ ಈ ಇಲ್ಲಿ ಏನಿತ್ತಣ್ಣ. ಬರೀಶೂನ್ಯ ಸಿಂಹಾಸನ. ಇದರ ಸುಖದ ಸೋಂಕಿನಿಂದಲೆ ಕಣಾ ಪ್ರಕೃತಿಯ ಮೃದಂಗ ಚೇತರಿಸಿ ಹರಿಸಿತ್ತು ತಾನಸೇನನ ಗಾನ ಎಂದು ಮುತ್ತಿಕ್ಕಿದಳು.
ತುಂಟಿ ಎಂದು ಸೊಂಟ ಬಳಸಿಕೊಂಡು ಮಂಚದಲ್ಲಿ ಬಿದ್ದೆ.

ಮೋಡ - ಆರ್.ವಿ. ಭಂಡಾರಿ.


ಹತ್ತು ಗಂಟೆ ರಾತ್ರಿಯಾದರೂ ಸೆಖೆ ಆರಲಿಲ್ಲ. ಹಗಲಿಗಿಂತ ರಾತ್ರಿಯೇ ಬಿಸಿ ಎನ್ನಿಸುತ್ತಿದೆ. ಒಣ ಹಂಚಿನ ಕಾವಿಗೆ ಸೆಖೆಯೆಂದು ಅಂಗಳಕ್ಕೆ ಬಂದರೆ ಅಲ್ಲೂ ಅಷ್ಟೆ ಆಕಾಶದಲ್ಲಿ ಎಡೆಬಿಡದ ತೆಳುಮೋಡ. ಗಾಳಿಯ ಸಂಚಾರವೇ ಇಲ್ಲ. ಒಮ್ಮೆ ಬೋರೆಂದು ಗಾಳಿ ಬೀಸಿದ್ದರೆ ಈ ಮೋಡವೆಲ್ಲ ಚೆದುರಿ ಹೋಗುತ್ತಿತ್ತು. ಶುದ್ಧ ಆಕಾಶದಲ್ಲಿ ಲೆಕ್ಕವಿಲ್ಲದ ನಕ್ಷತ್ರಗಳು ಚಿಮುಕಿಸುತ್ತಿದ್ದವು. ವಾತಾವರಣ ಶಾಂತವಾಗಿರುತ್ತಿತ್ತು. ಮಲಗಿದೊಡನೆ ನಿದ್ರೆ ಬರುತಿತ್ತು. ಈ ನಕ್ಷತ್ರಗಳು ಮಿಣುಕಿ ಮೋಡದಲ್ಲಿ ಮರೆಯಾಗಿದೆ. ಕೇವಲ ನೆನಪು.
ನೆನಪು ಹಾಳಾಗಲಿ. ನೆನಪೇ ಬೇಡ. ಆದರೆ ಅದು ಯಾಕೆ ಅದಮ್ಯವೆನ್ನಿಸುತ್ತದೊ. ಥೂತ್, ಈ ಸಿಗರೇಟು. ಈ ಸೆಖೆಯಲ್ಲಿ ಹಚ್ಚಬಾರದೆಂದುಕೊಂಡೆ. ಸ್ನೇಹಲತಾ ನನ್ನಿಂದ ಭಾಷೆ ತೆಗೆದುಕೊಂಡಿದ್ದಳು. ಮರಿ ಈ ಹಾಟಕಂಟ್ರಿಯಲ್ಲಿ ಸಿಗರೇಟು ಕೆಟ್ಟದ್ದು. ಸೇದಬೇಡ. ನಾವು ಬೌದ್ಧಿಕವಾಗಿ ಬದುಕಬೇಕು. ಬುದ್ಧಿಯಿಂದ ನಮ್ಮ ಚಟ ನಿರೂಪಿಸಿಕೊಳ್ಳಬೇಕು.
ನಿನ್ನ ನೆನಪು ಬಂದೊಡನೆ ನನಗೆ ಸಿಗರೇಟು ಬೇಕು.
ಛೇ! ಬಿಡತೂ ಅನ್ನು. ನನಗಿಂತ ಸಿಗರೇಟು ಶ್ರೇಷ್ಠವೆ? ಕೊಡು ಭಾಷೆ ಕೊಡು. ಇನ್ನು ಸೇದಕೂಡದು ಹ್ಞೂಂ.
ಬಸವಣ್ಣ ನಾನು; ತಲೆ ಹಾಕಿದ್ದೆ. ಇನ್ನು ಸೇದುವುದಿಲ್ಲವೆಂದಿದ್ದೆ. ಈಗ, ಈಗ ಸ್ನೇಹಲತಾ ನನ್ನ ಪಾಲಿಗೆ ಸತ್ತಿದ್ದಾಳೆ. ಸತ್ತಿಲ್ಲವೆ? ಸತ್ತಿದ್ದರೆ ಈ ಕ್ರೌರ್ಯವೇಕೆ. ದಿನಾಲು ಆಕೆ ಸತ್ತಿದ್ದಾಳೆ ಎಂದು ಕೊಳ್ಳುವುದೇಕೆ. ಅವಳಿನ್ನು ನನ್ನ ವಿಚಾರದ ಯಾವುದೋ ಶೋಲಿಯಲ್ಲಿ ಬೆಂಕಿ ಹಾಕುತ್ತಿದ್ದಾಳೆಯೆ. ನನ್ನನ್ನು ಪೂರ್ಣ ಸುಟ್ಟು ಬಿಡುತ್ತಾಳೆಯೆ!
ಅಂಗಳದಲ್ಲಿ ನಿಂತರೂ ಅಷ್ಟೆ. ರೂಮಿಗೆ ಹೋಗುವ ಫ್ಯಾನ್ ಹಾಕಿ ಹಾಸಿಗೆಯ ಮೇಲೆ ಬೀಳುವ. ಒಂದು ಟವೆಲ್ ಒದ್ದೆಮಾಡಿ ಮೈಮೇಲೆ ಹಾಕಿಕೊಳ್ಳುವಾ. ಅಂದರೆ ನಿದ್ದೆ ಹತ್ತುತದೆ.
ಅರೆ, ಇನ್ನೂ ಬೂಟು ಯಾಕೆ ಕಳಚಲಿಲ್ಲ. ಹಸೆಯೆಲ್ಲ ದೂಳು. ಕಳಚುತ್ತೇನೆ. ಬಿದ್ದು ಕೊಳ್ಳುತ್ತೇನೆ.
ವಿಷ್ಣುವಿನ ಸಂಗಡ ಪಿಕ್ಚರಿಗಾದರೂ ಹೋಗಬೇಕಿತ್ತು. ಬಾ ಎಂದ ಕರೆದ. ಅವನೋ ಕೊರೆದೇ ಕೊರೆಯುತ್ತಾನೆ. ಸಾಯಲಿ ತಲೆ ಚಿಟ್ಟೆ ಹಿಡಿಸುತ್ತಾನೆ. ಅದಕ್ಕೆಂತಲೇ ತಪ್ಪಿಸಿಕೊಂಡೆ.
ವಿಷ್ಣುವಿನ ಸಂಗಡ ಹೋಗಲೇ ಬಾರದಾಗಿತ್ತು. ದಿನವಿಡೀ ಕೊರೆಯುತ್ತಾನೆ. ಹಗಲಿಡೀ ಆಫೀಸು ಕೆಲಸ. ಆಮೇಲೆ ಹೆಣ್ಣುಗಳ ಬೇಟೆ. ತಪ್ಪದೇ ಬೀರು ಕುಡಿತ. ಪಿಕ್ಚರು. ಲೈಫ್ ಎಷ್ಟು ಮಜ ಅಲ್ಲವಾ? ಎನ್ನುತ್ತಾನೆ. ತನಗೆ ಹೆಣ್ಣು ಇಲ್ಲದಿದ್ದರೆ ಆಗದೆನ್ನುತ್ತಾನೆ. ಲವ್ ಏರಿದರೆ ಏನು ಗೊತ್ತಾ? ಪ್ರಸಂಗದ ಅವಶ್ಯಕತೆಯಲ್ಲಿ ಹುಟ್ಟಿಕೊಳ್ಳುವ ಅನಿಸಿಕೆ. ನೋಡು ತನಗೆ ರುಕ್ಮಿಣಿಯಲ್ಲಿ ಲವ್ ಇದೆ. ಅವಳನ್ನು ದಿನ ನೋಡದ ಹೊರತು ಆಗದು. ಆದರೆ ಚಂದ್ರಿ ಸಿಕ್ಕಿದರೆ ತನಗೆ ರುಕ್ಮಿಣಿಯ ನೆನಪೇ ಆಗುವುದಿಲ್ಲ. ನೀನು ಇನ್ನೂ ಲವ್ ಮಾಡಿಲ್ಲವಾ? ಲವ್ ಎಷ್ಟು ಕಾವು ಗೊತ್ತಾ? ಹ್ಞಾ! ನೋಡು. ಆ ಹುಡುಗಿ, ನೋಡಿದೆಯಾ? ನಿನ್ನನ್ನೇ ನೋಡುತ್ತಾಳೆ. ನನಗೆ ನಿಜವಾಗಲೂ ಹೊಟ್ಟೆಕಿಚ್ಚು. ನನ್ನಂಥ ಕೀಚಕನಿರುವಾಗ ನಿನ್ನನ್ನೇ ದಿಟ್ಟಿಸುತ್ತಾಳೆ. ಚೆಂದ ಇದ್ದಾಳೆ ಅಲ್ಲವಾ? ತನ್ನ ಪುಟ್ಟ ತಮ್ಮನನ್ನು ಎದೆಗೊತ್ತಿಕೊಳ್ಳುತ್ತಾಳೆ ಗೊತ್ತ...... ಎಂಥ ತಮಾಷೆಯಾಗಿ ನಗೆಯಾಡುತ್ತಾನೆ. ನೋಡು ನೋಡು ಮುತ್ತುಕೊಟ್ಟು ಮಗುವನ್ನು ಅಳಿಸಿದಳು. ಅದು ಏನು ಗೊತ್ತಾ? ಮಗುವಿನ ನೆವದಲ್ಲಿ ನಿನ್ನನ್ನೇ ನೆಕ್ಕುತ್ತಾಳೆ.
ಥೂ ಹಲ್ಕಟ್
ಹಾಗೆಂದಾಗ ಅವನಿಗೆ ತಾಗಿರಬೇಕು. ಆದರೂ ಖದೀಮ. ಕಾಣಿಸಿಕೊಳ್ಳಲಿಲ್ಲ. ನೀನು ತುಂಬಾ ಸಂಭಾವಿತ. ನೀನು ಕಿವಿಯಲ್ಲಿ ಹುಟ್ಟಿದವ. ತೊಡೆಯಲ್ಲಲ್ಲ. ಅಲ್ಲವಾ? ಎನ್ನುತ್ತಾನೆ.
ಥೂ, ಇವನನ್ನು ಸಾಗ ಹಾಕುವುದು ಹೇಗೆ ಎನ್ನುತ್ತಿದ್ದೆ. ಆಗಲೇ ಬಸ್ಸ್ಟಾಪಿಗೆ ಬಂದಾಗಿತ್ತು. ಯಾರೋ ಹುಡುಗಿಯರು ಪಿಕ್ಚರಿಗೆ ಹೋಗಲು ಬಸ್ ಹತ್ತಿದರು. 'ಜೈ ಬಲಬುಚ' ಎಂದ. ಮುದ್ದುಮಗು ಬರ್ತಿಯಾ? ಇಲ್ಲ ಬೇಸರವಾಗುವುದಿಲ್ಲ? ಥೆಂಕ್ಸ ವಿಷ್ಣು ಬಸ್ ಬಗ್ಗೆ ಬಿಟ್ಟ. ತುರ್ತ ತೊಲಗಿದ. ನಾಳೆ ಇನ್ನು ಕೊರೆಯುವುದು ಇದ್ದೇ ಇದೆ.
ನಾನು ತಿರುಗಿದೆ. ಆ ಹುಡುಗಿ ಇನ್ನೂ ಅಲ್ಲೇ ನಿಂತಿದ್ದಳು. ತುಸುನಕ್ಕಳು. ನಾನೇಕೆ ಗಲಿಬಿಲಿಯಾದೆ. ಮತ್ತು ನೋಡಬೇಕೆನ್ನಿಸಿತೇಕೆ.
'ಸೆಕೆ' ಎಂದಳು. ಬ್ಲೌಸ್ ಉಬ್ಬಿಸಿ ಗಾಳಿ ಹಾಕಿಕೊಂಡಳು. ನನ್ನ ಕಾಲು ತಡಸಿತೇಕೆ. ಬಿರ ಬಿರನೆ ಬಂದು ಬಿಟ್ಟೆ. ಆಕೆ ನಕ್ಕಿರಬೇಕು. ಅಥವಾ ನಿರಾಶೆಯಾಗಿರಬೇಕು.
ರೂಮಿಗೆ ಬಂದೆ. ಬಹಳ ದಿನಗಳ ಮೇಲೆ ಸ್ನೇಹಲತೆಯ ಪೋಟೋ ನೋಡಬೇಕೆನ್ನಿಸಿತು. ಸೂಟುಕೇಸಿನ ಅಡಿಯಲ್ಲೆಲ್ಲೋ ಹುಗಿದು ಬಿದ್ದಿತ್ತು. ತೆಗೆದೆ ನೋಡಿದೆ. ಮನಸ್ಸು ಹೊತ್ತಿಕೊಂಡಿತು. ಅವಳ ನಗೆಯ ಚೆಲ್ವಿಕೆ ನೆನಪಿಗೆ ಬಂತು. ನಿಷ್ಕಳಂಕ ಮುಖ. ಹೌದು ನಾನು ತಪ್ಪಿರಬೇಕು. ಸ್ನೇಹಲತಾ ನಿಷ್ಕಳಂಕಳು.  ಅವಳನ್ನು ತಪ್ಪು ತಿಳಿದೆ. ಅವಳು ದಿಟ್ಟಳು ಸರಿ; ಆದರೆ ಕೆಟ್ಟವಳಲ್ಲ. ಹಾಗೆಂದೇ ಅಲ್ಲವೆ ನಾನು ಬೆಂಗಳೂರಿಂದ ಬಂದವನೆ ಅವಳನ್ನು ಬೆಟ್ಟಿಯಾಗಲು ಹೊರಟಿದ್ದು. ಮಂಜಪ್ಪ ಸಿಕ್ಕಿದ. ಓ! ಮಂಜಪ್ಪ ಎಷ್ಟು ಸ್ನೇಹಿ! ನಾನೆಂದರೆ ಪ್ರಾಣ. ಅವನೇ ಹೇಳಿದ್ದು. ನೀನು ಅವಳ ಖಾಯಂ ಗಿರಾಕಿ. ತೊಂದರೆಯಿಲ್ಲ. ಮದುವೆಯಾಗಲು ನೀನಿದ್ದೆ. ಅಲ್ಲಿಯ ತನಕ ಮಜ ಹೊಡೆಯಲು ಉಳಿದವರಿದ್ದಾರೆ ಮಂಜೂ ಎಂದು ಅವನ ಶಟರ್ು ಎಳೆದಿದ್ದೆ. ಸಿನೇಮಾ ಅಲ್ಲ ಮಗು. ಇದು ಜೀವನ. ನಿನ್ನ ಸ್ನೇಹಲತೆ ಹೀಗೆ ಹಬ್ಬುತ್ತಾಳೆ. ಯಾರನ್ನಾದರೂ ತಬ್ಬಿಕೊಳ್ಳುತ್ತಾಳೆ.
ನನಗೆ ಎಷ್ಟು ಕಳವಳ ಎಷ್ಟು ದುಃಖ ನನ್ನ ಸ್ನೇಹಲತಾ ಮೋಸ ಮಾಡುವಳೆ.
ತಡೆಯಲಾರದೆ ಸ್ನೇಹಲತೆಯನ್ನು ಉರುಟು ಮಾತಿನಲ್ಲಿ ಕೇಳಿದೆ. ನೀನು ಇದನ್ನೆಲ್ಲ ನಂಬುತ್ತಿಯಾ? ನೀನು ಮಂಜಪ್ಪನ ದೋಸ್ತು. ಎಂಥೆಂಥ ಕೆಟ್ಟವರ ಸ್ನೇಹ ಮಾಡುತ್ತಿ ನೀನು. ಮಂಜಪ್ಪ ಒಬ್ಬ ಹಂದಿ. ಸ್ನೇಹಲತಾ ಅತ್ತಿದ್ದಳು. 
ನೋಡು ನಿನಗೆ ನೋವಾಗುತ್ತದೆಂದರೆ ನನಗೆ ಅಳುಬರುತ್ತದೆ. ನಿನ್ನ ಧೈರ್ಯದ ಮೇಲೆ, ನಂಬುಗೆಯ ಮೇಲೆ ನಾನು ಧೈರ್ಯವಾಗಿ ವತರ್ಿಸುತ್ತೇನೆ. ನನಗೆ ಉಳಿದವರ ಕ್ಯಾರ್ ಇಲ್ಲ. ನನ್ನ ನಿನ್ನ ಸ್ನೇಹವಂತೂ ನಮ್ಮ ಬಂಧುಗಳಿಗೆಲ್ಲ ಗೊತ್ತು. ನೀನು ಹೀಗೆ ನನ್ನನ್ನು ಕೊಲ್ಲಬೇಡ. ಆಯ್ತಾ ಮಾರಾಯಾ. ಇನ್ನು ಯಾರೊಡನೂ ನಾನು ಮಾತಾಡುವುದೇ ಇಲ್ಲ. ಅಣ್ಣನೊಡನೆಯೂ ಆಯಿತಾ?
ಸ್ನೇಹಲತೆಯನ್ನು ರಮಿಸುವುದೊಂದು ಹೊರೆಯಾಯಿತು. ಅವಳ ಬಾಡಿದ ಮುಖ ಅರಳಿ ನಗೆ ಸೂಸಿದಾಗ ಬೆಳದಿಂಗಳ ಹೊನಲೆಂದುಕೊಂಡಿರಲಿಲ್ಲವೆ! 
ಅರೆ, ಇದೆಂಥ ಮರೆವು. ಸುಮ್ಮನೆ ಕುಳಿತು ಬಿಟ್ಟಿರುವೆನಲ್ಲ. ಫ್ಯಾನನ್ನು ಆನ್ ಮಾಡಲು ಮರೆತು. ಉಶ್. ಸ್ವಲ್ಪ ನೆಮ್ಮದಿಯಾಯಿತು. ಇನ್ನು ಬಿದ್ದುಕೊಳ್ಳುತ್ತೇನೆ. ನಿದ್ದೆ ಬಂದು ಬಿಟ್ಟರೆ ಸಾಕು. ಸ್ನೇಹಲತಾ ಹಾಳಾಗಲಿ. ಹಾಗೆ ಕೇಳಿದರೆ ಸ್ವರ್ಣಲತಾ ಏನು ಕಡಿಮೆ. ಎಷ್ಟು ಮೃದುಮಾತು. ನಾನೆಂದರೆ ಜೀವ ಬಿಡುತ್ತಾಳೆ. ನನ್ನೊಡನೆ ಮಾತಾಡಲು ಆಕೆ ಎಷ್ಟು ಹವಣಿಸಿದ್ದಳು!
ಅಂದು ಅಲ್ಲವೆ? ನನ್ನ ತಂಗಿಯ ಬಳಿವಿಡಿದು ನಮ್ಮ ಮನೆಗೆ ಬಂದಿದ್ದು! ನನಗಿಂತ ಸ್ವರ್ಣಲತಾ ಜೂನಿಯರ್ ಅವಳಿಗಿಂತ ಸ್ನೇಹಲತಾ ಜೂನಿಯರ್. ಅವರವರಿಗೆ ಒಂದೊಂದೆ ಕ್ಲಾಸು ವ್ಯತ್ಯಾಸ. ನಾನು ಸೀನಿಯರ್ದಲ್ಲಿ ಇದ್ದಾಗ ಅವರು ಫಸ್ಟ ಇಯರ್. ನನ್ನ ಗ್ರಾಜ್ಯುವೇಶನ್ ಮುಗಿದ ಮೇಲೆ ನಾನು ಮನೆಯಲ್ಲೇ ಒಂದು ವರ್ಷ ಕೊಳೆತದ್ದು. ಬೆಂಗಳೂರಿಗೆ ಭಾವನ ಮನೆಗೆ ನೌಕರಿ ಹುಡುಕಲು ಆರು ತಿಂಗಳು ಕಾಲ ಹಾಳು ಮಾಡಿದ್ದು. ನಾನು ಊರಿನಲ್ಲಿದ್ದಾಗ ಸ್ವರ್ಣ ಹತ್ತಾರು ಸಲ ಬಂದಿದ್ದಾಳೆ. ನಾನು ಅವಳನ್ನು ಗಮನಿಸುತ್ತಿರಲಿಲ್ಲ. ಅವಳು ನನ್ನ ಮುಂದೇ ಕಾಣಿಸಿಕೊಳ್ಳಲು ನನ್ನ ತಂಗಿಯ ಜೊತೆ ಹವಣಿಸುತ್ತಿದ್ದಳು. ಯಾವುದಾದರೂ ನೆವ ತೆಗೆದು ಸ್ನೇಹಲತೆಯ ಸುದ್ದಿ ಹೇಳುತ್ತಿದ್ದಳು. ನಾನು ಕಿವಿ ನಿಮಿರಿ ಕುಳಿತಿರುತಿದ್ದೆ. ಅವಳು ತಂಗಿಯೊಡನೆ ಹೇಳಿದ್ದಲ್ಲವೆ?
ಆ ಇಕಾನಾಮಿಕ್ಸ ಪ್ರೊಫೆಸರನೆಂದರೆ ಸ್ನೇಹುವಿಗೆ ಜೀವ.
ಹೋಗೆ ಮಳ್ಳು, ಆಕೆಗೆ ಎಷ್ಟು ಜೀವವಿದೆಯೆ?
ಅಂದರೆ
ಅವಳಿಗೆ ನನ್ನ ಅಣ್ಣನೆಂದರೆ ಜೀವ.
ಹೌದಾ, ಸಾರಿ. ಸ್ವರ್ಣಗೆ ಗೊತ್ತು ಸ್ನೇಹಲತೆಗೂ ನನಗೂ ಪ್ರಿಯಸಂಬಂಧವಿದೆಯೆಂದು. ಅದನ್ನೇ ಸ್ನೇಹಲತೆಯಲ್ಲಿ ಹೇಳಿದ್ದಳು. ಆದರೂ ಬೇಕಂತಲೇ ಆಡಿದ್ದಳು. ನನ್ನ ಕುತೂಹಲ ಕೆದರಿಸಿದಳು.
ಸ್ವರ್ಣಲತಾ ಹೇಳಿದ್ದಳು. ಕಾಲೇಜಿನಲ್ಲಿ ಸ್ನೇಹಲತಾ ಎಲ್ಲರಿಗೂ ಪರಿಚಯವಂತೆ. ಎಲ್ಲ ಪ್ರೊಫೆಸರರೂ ಆಕೆಯ ಮುಖ ನೋಡಿ ಪಾಠ ಹೇಳುತ್ತಾರಂತೆ. ಅವಳ ವರ್ಗದ ಖಾನನ ಪರವಾಗಿ ಅವಳು ಇಲೆಕ್ಷನ್ನಿನಲ್ಲಿ ಹೆಣ್ಣು ಮಕ್ಕಳ ಓಟ್ ಯಾಚಿಸಿದಳಂತೆ.
ಅಂದು ನನಗೆ ನಿದ್ದೆ ಬಂದಿರಲಿಲ್ಲ. ಮಾರನೇ ದಿನ ಕಾಲೇಜ ರೋಡನ್ನೇ ಕಾದು ಸ್ನೇಹಲತೆಯನ್ನು ಕರೆದೆ. ಅಂದು ನಾನೆಷ್ಟು ಬಯ್ದೆ ಆಕೆಯನ್ನು. ಸ್ನೇಹಲತಾ ನನ್ನ ನಿನ್ನ ಸ್ನೇಹ ಮುರಿಯಿತು, ಎಂದೆ. ನಾನು ಚೆಂದವಿಲ್ಲ ಅಲ್ಲವಾ?
ಸ್ನೇಹಲತಾ ಹೇಳಿದಳು. ನಿನ್ನ ಚೆಲುವಿನ ಕುರಿತು ಈಗ ನೀನು ಹೇಳಿದ ಮೇಲೆ ನನಗೆ ಮನಸ್ಸಿಗೆ ಬರಬೇಕು. ನಾನು ಅದನ್ನು ಗ್ರಹಿಸಿಯೇ ಇರಲಿಲ್ಲ. ಬಲ್ಲೆಯಾ. ನಾನು ಬಾಹ್ಯ ಸೌಂದರ್ಯಕ್ಕೆ ಸೋಲುವುದಿಲ್ಲವೆಂದು ಹೇಳಿದರೆ ನಾಟಕದ ಅಥವಾ ಪುಸ್ತಕದ ಮಾತಿನಂತೆ ಆಡಂಬರ ತೀರ ಅವಾಸ್ತವ ಆದರ್ಶವಾಗಬಹುದು. ಆದರೆ ನೀನು ಚೆಲುವಲ್ಲವೆಂದು ಅನ್ನಿಸಲೇ ಇಲ್ಲ. ನೀನು ಶ್ರೀಮಂತನೆಂದು ನಿನ್ನ ಬಯಸಲಿಲ್ಲ. ಯಾಕೋ ನೀನು ನನ್ನ ಮನಸ್ಸಿನಲ್ಲಿ ಮೂಡಿದೆ. ನೀನು ಸ್ನೇಹದ ಹಸ್ತಚಾಚಿದೆ. ನಾನು ಅದನ್ನೇ ನಂಬಿದೆ. ನಿನ್ನ ನೆನಪೇ ನನಗೆ ಸ್ಪೂತರ್ಿ. ನಿನ್ನ ಬಗ್ಗೆ ನನಗೆಷ್ಟು ಹೆಮ್ಮೆ. ನೀನು ಪರೀಕ್ಷೆಯಲ್ಲಿ ಪಾಸಾದಾಗ ನಿಜವಾಗಿ ಆನಂದ ಪಟ್ಟವರು ನಾನೋ ನೀನೋ? ನೀನೇ ಹೇಳು. ಹೇಳು ನಾನು ಮಿಕ್ಸ ಡ್ರಾಮದಲ್ಲಿ ಪಾತ್ರ ಮಾಡಿದೆನೆಂದು ಸಿಟ್ಟ? ಇನ್ನು ಮಾಡುವುದಿಲ್ಲ. ಆಯಿತಾ? ನಿನ್ನ ಪ್ರೀತಿಗಾಗಿ ನನ್ನ ಎಲ್ಲವನ್ನೂ ಬಿಡುತ್ತೇನೆ. ನೀನೇ ಪಾತ್ರ ಮಾಡು. ಅದನ್ನು ನೊಡೇ ಆನಂದ ಪಡುತ್ತೇನೆ. ಸ್ವಲ್ಪ ತಡೆದು ಹೇಳಿದ್ದಳು. ನಿಮ್ಮ ಗಂಡಸರೇ ಹೀಗೆ. ನಿಮ್ಮ ಆದರ್ಶವೆಲ್ಲ ಪುಸ್ತಕ ಭಾಷಣದಲ್ಲಿ. ನೀವು ಹೆಂಗಸರ ಸ್ವಾತಂತ್ರ್ಯವನ್ನು ಪ್ರತಿಭೆಯನ್ನು ಸಹಿಸುವುದಿಲ್ಲ.
ಸ್ನೇಹಲತೆಗೆ ನಿಜವಾಗಿ ಬೇಸರವಾಗಿರಬೇಕು. ಅವಳ ನಿಷ್ಕಳಂಕವಾದ ಸಿಟ್ಟು ಅದನ್ನೇ ಹೇಳುತಿತ್ತಲ್ಲ.
ಸ್ನೇಹಲತಾ ತುಂಬಾ ಇಂಟಲಿಜೆಂಟು. ನಾನು ಕ್ಲಾಸು ಬರುವಾಗ ಹಗಲೂ ರಾತ್ರಿ ಎಷ್ಟೊಂದು ಹೆಣಗಲಿಲ್ಲ. ಆಕೆಗೆ ಹಾಗಲ್ಲ. ಲೀಲಾಜಾಲವಾಗಿ ಕ್ಲಾಸು ಗಿಟ್ಟಿಸುತ್ತಾಳೆ. ಸ್ವರ್ಣಲತಾ ಬೊಡ್ಡು. ಆದರೆ ತುಂಬಾ ಆಬಿಡಿಯಂಟ್. ಸ್ನೇಹಲತಾ ನಿಷ್ಪ್ರಹ. ಎಲ್ಲವನ್ನೂ ಹೇಳುತ್ತಾಳೆ. ಶಿವಯ್ಯನ ನಾಟಕದ ಪಾತ್ರವನ್ನು ನನ್ನೆದುರೇ ಎಷ್ಟು ಹೊಗಳಿದ್ದಾಳೆ. ನಿನಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಯಾಕೆ ಪ್ರಾಕ್ಟಿಸ್ ಮಾಡಲಿಲ್ಲ ಎಂದದ್ದೇಕೆ. ಹಾಗಾದರೆ ನನ್ನಲ್ಲಿ ಒಂದೊಂದು ಕೊರತೆಯನ್ನು ಸ್ನೇಹಲತಾ ಕಂಡಿದ್ದಾಳೆ. ಅದನ್ನು ಬೇರೆಯವರಲ್ಲಿ ಹುಡುಕುತ್ತಿರಬಹುದು.
ಥೂ ಮತ್ತೂ ಸೆಕೆ. ಫ್ಯಾನು ಹಾಕಿದರೂ ಅಷ್ಟೆ. ಸ್ವಲ್ಪ ಹೊತ್ತು ಹಾಯೆನಿಸುತ್ತದೆ. ಮತ್ತೆ ಹವೆ ಕಾದುಕೊಳ್ಳುತ್ತದೆ. ಎಷ್ಟು ಮಗ್ಗಲು ಮರಚಿದರೂ ನಿದ್ದೆ ಬಾರದು. ಮೈಮೇಲೆ ಹಾಕಿಕೊಂಡ ಟವೆಲ್ ಒಣಗಿ ಹೋಯಿತು. ಒಂದು ಸಿಗರೇಟಾದರೂ ಹಚ್ಚುವಾ. ವಿಷ್ಣು ಇಷ್ಟು ಹೊತ್ತಿಗೆ ಯಾವುದಾದರೂ ಹುಡುಗಿಯ ಸೊಂಟ ಹಿಡಿದು ಕೊಂಡಿರಬಹುದು. ನನಗೆ ಗೇಟಿನ ಬಳಿ ನಿಂತ ಮಿನಿಸ್ಕಟರ್ಿನ ಹುಡುಗಿ ನೆನಪು ಬರುತ್ತದೆ. ವಿಷ್ಣು ತುಂಟ. ತುಂಬ ಹರಟುತ್ತಾನೆ. ಈಗಿತ್ತ ಅವನು ಬೇಕೆಂದೆನಿಸುತ್ತದೆ. ಎಷ್ಟು ಕೊರೆದರೂ ದಿನ ದಿನ ಹೊಸ ಹುಡುಗಿಯರನ್ನು ತೋರಿಸುತ್ತಾನೆ. ಹಾದು ಹೋಗುವಾಗ ಚೇಡಿಸಿ ನಗೆಯಾಡಿಸುತ್ತಾನೆ. ನನಗೆ ಎದೆ ನಡುಗುತ್ತದೆ. ಃಜ ಛಿಠಣಡಿಚಿರಜಠಣ ಛಠಥಿ ಎನ್ನುತ್ತಾನೆ. ಆ ಹುಡುಗಿ ತಮ್ಮನಿಗೆ ಲೊಚ ಲೊಚ ಮುತ್ತು ಕೊಟ್ಟದ್ದು ನೆನಪಿಗೆ ಬರುತ್ತದೆ.
ಸ್ನೇಹಲತೆಯೊಡನೆ ಪಪ್ಪಿ ಕೊಡು ಮರಿ ಎಂದರೆ ಮುಖ ತಿರುವಿದಳು. ಈಗ ಬೇಡ ನನ್ನದೆಲ್ಲ ನಿನ್ನದೆ. ಮುಂದೆ ಹೋಗಲಿ. ಆತುರ ಸಲ್ಲ ಎಂದಳು. ಸ್ವರ್ಣಲತಾ ಏನನ್ನುತ್ತಿದ್ದಳೊ. ನನ್ನಲ್ಲಿ ಮಾತ್ರ ಸ್ನೇಹಲತೆಗೆ ಬಿಗುಮಾನವಿರಬೇಕು.
ಅದಾವುದೊ ಅವಳ ಸುಟ್ಟ ಸಂಬಂಧಿಕನಂತೆ. ಅವಳ ಹಿಂದೆಯೇ ತಿರುಗುತ್ತಾನಂತೆ. ಅವನಿಗೂ ಇವಳಿಗೂ ಗಂಟು ಎಂದು ನಾಗೇಶ್ ಹೇಳಲಿಲ್ಲವೇ? ಅವನಿಗೆ ನನ್ನ ಮೇಲೆನೂ ದ್ವೇಷವಿಲ್ಲ, ಸ್ವಲ್ಪವೂ ಅಧೈರ್ಯವಿಲ್ಲವಂತೆ. ಹೆದರಿಕೆಯೇಕೆ ಮದುವೆಯಾಗಲು ಒಬ್ಬ ನಿಕ್ಕಿ ಇರುವಾಗ ಎನ್ನುತ್ತಾನೆ. ನಾಗೇಶ್ ಅಯ್ಯೊ ನನ್ನ ಸ್ನೇಹಲತಾ?
ಲತಾ ನಿನ್ನ ಬಗ್ಗೆ ಏನೆಲ್ಲ ಸುದ್ದಿ ಗೊತ್ತಾ?
ಏನು?
ಅವನು ಯಾರೆ ನಿನ್ನ ಸಂಬಂಧಿಕ?
ಅವನ ಮೇಲೂ ಸಂಶಯವಾ?
ಜನರು ಹೇಳಿದ್ದು.
ಜನ ಒಂದು ಹೇಳುತ್ತಾರೆ ಎಂದು ಅದನ್ನು ನಂಬುವ ಹಿತ್ತಾಳೆ ಕಿವಿಯವ ಎಂಥವನು.
ನಿನ್ನ ನಾಗೇಶ.......
ನಿನ್ನ ನಾಗೇಶನಾ? ಅವನ ಮುಖದ ಮೇಲೆ ಉಗಿಯುತ್ತೇನೆ. ತಿಳೀತಾ? ಮೂರ್ಖ.
ಸ್ನೇಹಲತಾ ಅಷ್ಟು ಉಧ್ವಿಗ್ನಳಾದಳೇಕೆ. ಮತ್ತೇನಾದರೂ ಇದ್ದರೆ ನನ್ನೊಡನೆ ಹೇಳದಿರುತ್ತಿದ್ದಳೆ? ಎಲ್ಲವನ್ನೂ ಹೇಳುವ ಅವಳು ಏನನ್ನೂ ಹೇಳಲಿಲ್ಲ. ಸರಿ. ಆದರೆ ಉದ್ವಿಗ್ನತೆ ಯಾಕೆ? ನಾಗೇಶನೇ ಸ್ನೇಹ ಮಾಡಲು ಬಂದಿದ್ದನೆ? ಅವನನ್ನು ಬಯ್ದಳೆ? ಅದರ ಸೇಡನ್ನು ನಾಗೇಶನು ತೀರಿಸಿಕೊಳ್ಳುತ್ತಿರುವನೆ?
ಸ್ವಲ್ಪ ತಡೆದು ಸ್ನೇಹ ಹೇಳಿದ್ದಳು, ನಾನು ಕಾಲೇಜಿಗೆ ಹೋಗುವುದು ನಿನಗೆ ಬೇಸರವಾ? ನೀನು ಹೇಳುವುದೇನು? ಅಲ್ಲಿ ಪ್ರೊಫೆಸರರು, ವಿದ್ಯಾಥರ್ಿಗಳು ಎಲ್ಲರೂ ನನ್ನ ಮಿಂಡಂದಿರು ಅಲ್ಲವೆ? ಸ್ನೇಹಲತೆಗೆ ಎಷ್ಟು ಸಿಟ್ಟು ಬಂದಿತ್ತು! ಅವಳ ಮಾತಿಗೆ ನಾನು ನಡುಗಿದ್ದೆ. ಪಾಪ ಎಷ್ಟು ಪ್ರೀತಿಸಿದ್ದಳು. ಇಲ್ಲದಿದ್ದರೆ ನಿನ್ನ ಪ್ರೀತಿಸುವುದಿಲ್ಲ ಎಂದು ಬಿಟ್ಟರೆ ಮುಗಿದಿತ್ತಲ್ಲ. ನಾನೇನು ತಾಳಿಕಟ್ಟಿದ್ದೇನೆ. ಯಾವ ಹಂಗಿನಿಂದ ಅವಳನ್ನು ಹಾಗೆಲ್ಲ ಅವಾಚ್ಯವಾಗಿ ಬಯ್ದಿದ್ದೆ. ಯಾಕಾಗಿ ಆಕೆ ಸಹಿಸಿದಳು.
ಅವಳ ಸಿಟ್ಟಲ್ಲೇ ಕರಗಿ ಕಣ್ಣೀರಿಡುತ್ತ ಹೇಳಿದಳು. ನನ್ನ ಮೇಲೆ ನಿನಗೆಷ್ಟು ಅಪನಂಬಿಗೆ. ನನಗೆ ಮಾನ, ಅಭಿಮಾನ, ಇಲ್ಲವೆಂದೂ ಕಂಡವರಿಗೆ ತಮಾಶೆ ಮಾಡಿ, ನಗೆಯಾಡಿ, ವೇಳೆ ಕಳೆಯುವ ಒಂದು ಹಲ್ಕಟ್ ವಸ್ತುವೆಂದು ಗ್ರಹಿಸುತ್ತಿಯಾ?
ನಿನಗೆ ಗೊತ್ತಿಲ್ಲ. ನನಗೆ ಅಭಿಮಾನಕ್ಕೆ ಹೊಡೆತ ಬಿದ್ದರೆ ಜೀವವನ್ನು ಬಿಟ್ಟು ಬಿಟ್ಟೇನು. ಎಂಥ ಸ್ನೇಹವನ್ನು ಮುರಿದು ಬಿಟ್ಟೇನು. ಆದರೂ ಕೇಳು. ನಿನ್ನ ಪ್ರೀತಿಯಲ್ಲಿ ನಾನು ಲೀನ. ನನಗೆ ಆ ಬಂಧನ ಸಂತೋಷ. ನಾನು ಮುಂದಿನ ವರುಷದಿಂದ ಕಾಲೇಜು ಬಿಟ್ಟು ಬಿಡುತ್ತೇನೆ.
ಅವಳ ಮಾತಿನಲ್ಲಿ ಎಂಥಹ ಅಸಹಾಯಕತೆಯಿತ್ತು. ನಾನು ಎಷ್ಟು ನೊಂದಿದ್ದೆ. ನನ್ನ ಕ್ಷುಲ್ಲಕತನದ ಬಗ್ಗೆ ನನಗೇ ಹೇಸಿಗೆಯಾಗಿತ್ತು. ನಾನು ಇನ್ನು ಇಂಥ ಮಾತನ್ನು ನಂಬುವುದಿಲ್ಲ ಎಂದು ಭರವಸೆ ಕೊಟ್ಟಿದ್ದೆ. ನೀನು ಕಾಲೇಜಿಗೆ ಹೋಗು ಎಂದು ಧೈರ್ಯ ಹೇಳಿದ್ದೆ.
ಆದರೆ ನನ್ನ ಮನಸ್ಸು ಬೇಕೆಂತಲೇ ಅವಳಲ್ಲಿ ತಪ್ಪನ್ನು ಅರಸುತಿತ್ತೆ. ಅಥವಾ ನಾನು ಸಾವಕಾಶ ಸ್ವರ್ಣಲತೆಯ ಕಡೆ ಧಾವಿಸುತ್ತಿದ್ದೆನೆ? ನಾನು ಸ್ನೇಹಲತೆಯೊಡನೆ ಹೇಳಿದ ಪ್ರೀತಿಯ ಮಾತೆಲ್ಲ ಸಿನೇಮಾದ ರಾಮೆನ್ಸ ಅಷ್ಟೇನೆ. ನಾನು ಸ್ವರ್ಣಲತೆ ಹೇಳಿದ ಮಾತ್ರಕ್ಕೆ ನಂಬುತ್ತಿರಲಿಲ್ಲ. ನನ್ನ ತಂದೆಯೂ ಹೇಳಲಿಲ್ಲವೆ? ಸ್ನೇಹಲತೆಗೆ ಆ ಸಂಬಂಧದ ನೆವದಿಂದ ಆ ಮೂರ್ಖ ತುಂಬ ಪ್ರಿಯನಾಗಿದ್ದಾನಂತೆ. ಅವಳಿಗೆ ಅವನಿಂದಲೇ ಹಣ ಸಿಕ್ಕುತ್ತದಂತೆ. ನನ್ನ ತಂಗಿಯನ್ನು ಕೇಳಿದಾಗಲೂ ಆಕೆ ಅನುಮಾನಿಸುತ್ತ ತನಗೆ ಅದೆಲ್ಲ ತಿಳಿಯದು ಅನ್ನಲಿಲ್ಲವೆ? ಸ್ನೇಹಲತಾ, ನಿನ್ನನ್ನು ಕಾಣದೇ ಬೇಸರಬಂದು ಹೋಯಿತು ಮಾರಾಯತಿ. ಎಂಟು ದಿನ ಎಲ್ಲಿ ಹೋಗಿದ್ದೆ.
ನಿನಗೆ ಮಾತ್ರ?
ನಿನ್ನೆ ಸ್ವರ್ಣಲತಾ ಬಂದಿದ್ದಳು. ನಿನ್ನನ್ನು ಬಹಳ ಕೇಳಿದಳು.
ಮಜಾ ಹೊಡೆದೆ. ಅಂತೂ ಟೈಂ ಪಾಸಾಯಿತಲ್ಲ?
ನಿನ್ನ ಹಾಗೇ ಮಾಡಿದ್ದಿಯಾ?
ಮತ್ತೆ ನನ್ನ ಮೇಲೆ ಚಾರ್ಜ ಇದೆಯಾ?
ನೀನು ನನಗೆ ಎಷ್ಟು ಪ್ರೀತಿ ಗೊತ್ತಾ?
ಎಷ್ಟು?
ನೀನು ಯಾರನ್ನು ನೋಡಿದರೂ ಸಾಕು ಜೆಲೆಸಿ.
ನಾನು ಯಾರನ್ನು ನೋಡಿದೆ.
ನನಗೆ ಎಲ್ಲ ಗೊತ್ತು. ನೀನು ಮುಗ್ಧೆ ಬೆಳ್ಳಗಿರುವುದೆಲ್ಲ ಹಾಲು. ನಿನ್ನ ಆ ಸಂಬಂಧಿ ಯಾರೆ, ಆತ ಹಾಳು ಮಾಡದೇ ಬಿಡುವುದಿಲ್ಲ. ದೇವರಾಣೆ.
ಇಲ್ಲಪ್ಪ ಅವ ಎಂಥ ಒಳ್ಳೆಯವ ಗೊತ್ತಾ?
ನೋಡು. ನಿನಗೆ ಎಷ್ಟು ಅಭಿಮಾನ. ನನಗೆ ಗೊತ್ತು. ನಿನಗೂ ಅವನಿಗೂ ಜಛಿಡಿಜಣ ಆಗಿ ಟಠತಜ ಇದೆ.
ಹೌದು. ನಾನು ನಿನ್ನ ಗುಲಾಮ ಅಂತ ತಿಳಿದೆಯಾ? ನಾನು ಟಠತಜ ಮಾಡಿದರೆ ಅವನನ್ನು ಮಾತ್ರ. ನನಗೆ ನಿನ್ನ ಬಿಡು ಯಾರ ಹೆದರಿಕೆಯೂ ಇಲ್ಲ, ಏನು?
ನನಗೆ ಗೊತ್ತು. ಅವ ನಿನ್ನ ಹಾದಿಯ ಮೇಲೆ ಹಾಕದೇ ಬಿಡೋದಿಲ್ಲ. ಈಗಲೇ ಅವ ಅಪ್ಪ.
ಅಪ್ಪ ಆದರೆ ಏನು. ಅದು ನನಗೇ ಸಂಬಂಧಿಸಿದ ಪ್ರಶ್ನೆ. ಮದುವೆ ಇಲ್ಲದಾಗಬಹುದು. ಪ್ರೀತಿ ಕಡಿಮೆನಾ?
ನಿನ್ನಂಥ ಕ್ಷುಲ್ಲಕನನ್ನು ಮದುವೆಯಾಗಿ ಜೀವನಗುಂಟ ನೋಯುವುದಕ್ಕಿಂತ ಅವನ ಪ್ರೀತಿ ಮಾಡಿ, ವ್ಯಕ್ತಿತ್ವ ಸಾರ್ಥಕ ಮಾಡಿಕೊಳ್ಳುವುದು ಒಳ್ಳೆಯದು. ಮದುವೆಯಾಗದ ಮೂರ್ಖನನ್ನು ಪ್ರೀತಿಸಿಯಾಯಿತು. ಈಗ ಮದುವೆ ಆದವನನ್ನು ಪ್ರೀತಿಸಿ ಮೂರ್ಖಳಾಗುತ್ತೇನೆ ಸ್ನೇಹಲತಾನೆ ಈ ಮಾತು ಅಂದಿದ್ದು! ಆಕೆಯ ಸಿಟ್ಟು ತಣಿಸಲು ನಾನು ಎಷ್ಟೆಲ್ಲ ಪ್ರಯತ್ನ ಮಾಡಿದೆ.
ಒಂದು ವಾರದವರೆಗೂ ನನ್ನ ಮೋರೆಯನ್ನು ನೋಡುತ್ತಿರಲಿಲ್ಲ. ಬಹುಶಃ ಯಾರದನ್ನು ಏಕಾಂತ ವನವಾಸವಿರಬೇಕು. ಆಗ ನನಗೇ ಎಷ್ಟು ಬೇಸರವಾಯಿತು. ಬೋರ್ ತಡೆಯಲಾರದೆ ಕ್ಷಮೆ ಕೇಳಿದ್ದೆ. ಹಾಗೇಕೆ ಮಾಡಿದೆ ನಾನು. ಸ್ನೇಹಲತೆಯೆ ನನಗೆ ತೆಸೆಯೆ. ಎಷ್ಟೊಂದು ಹೆಣ್ಣುಗಳು ನನ್ನ ಹಾದಿ ನೋಡುತ್ತಿರಲಿಕ್ಕಿಲ್ಲ. ಈಗೀನ ಕಾಲದಲ್ಲಿ ಹೆಣ್ಣೊಂದು ಲೆಕ್ಕವೆ?
ಕಲಿತವಳೇ ಬೇಕೆಂದರೆ ಸ್ವರ್ಣಲತಾ ಇಲ್ಲವೆ? ಯಾಕೆ ನಾನು ಕೇಳಿದರೆ ಮಂಜಪ್ಪನೇ ತನ್ನ ತಂಗಿಯನ್ನು ದಮ್ಮಯ್ಯ ಎಂದು ಕೊಡುವುದಿಲ್ಲವೆ? 
ಯಾಕೆ ನನಗೆ ಅದೆಲ್ಲ ಚಿಂತೆ ಈಗ. ಯಾರು ನನ್ನ ಮದುವೆ ಮಾಡಲು ತಯಾರು ಮಾಡಿದರು.
ಉಶ ಏನು ಸೆಕೆಯಪ್ಪ. ಮೋಡ ಚದರಿತೆ. ಛೇ! ಇಲ್ಲ. ಮೊದಲಿಗಿಂತ ದಟ್ಟವಾಗಿದೆ. ನಕ್ಷತ್ರ ಒಂದೂ ಕಾಣದು. ಗಾಳಿಯಂತೂ ಕೇಳಬೇಡಿ. ನಿಚ್ಚಳ ಆಕಾಶಕ್ಕೂ ನನಗೂ ಮೋಡ ಅಡ್ಡ ನಿಂತಿದೆ. ಹೊಲಸು ಸಗಣಿ ಕರಡಿ ಬಿಟ್ಟ ಹಾಗೆ.
ಆ ಹುಡುಗಿಯೂ ಹೀಗೆ ಸೆಕೆ ಎಂದು ಗೇಟಿನ ಬಾಜುವಿಗೇ ನಿಂತಿರಬಹುದೆ? ಹೋಗಿ ಬರಲೆ? ಎಂಥ ಹುಚ್ಚು. ಯಾಕೆ ಇದೇ ಛಿ.ಠಿ.ಜ. ಗಾಡಿ ಹತ್ತಿ ನಡೆದು ಬಿಡಬಾರದು. ನಾಳೆ ಸ್ಟಾಂಡಿನಲ್ಲಿ ನಿಂತರೆ ಸ್ವರ್ಣಲತಾ ಸಿಕ್ಕಲಿಕ್ಕಿಲ್ಲವೆ?
ಸುಟ್ಟು ಮೋಡ. ಆ ಯಕ್ಷ ಮೋಡದೊಡನೇ ಸಂದೇಶ ಕಳುಹಿದನಂತೆ. ನಾನೂ ಕಳುಹಲೆ? ಯಾರಿಗೆ? ಸ್ನೇಹಲತೆಗೆ? ಥೂ ಮತ್ತೂ ಅವಳದ್ದೇ ನೆನಪು. ಯಾಕೆ ಕಾಡಬೇಕೋ. ನನಗೆ ಆಕೆ ಜನ್ಮಕ್ಕೆ ಅಂಟಿದ ನಂಟೆ?
ಈ ಮೋಡಗಳು ಸಾವಿರ ನಕ್ಷತ್ರ ನುಂಗಿದರೂ ಸ್ನೇಹಲತೆಯ ಕಣ್ಣುಗಳು ಇನ್ನೂ ಹೊಳೆಯುತ್ತವೆ.
ಹಾಗೆ ನೋಡಬೇಡ ಕಣೆ. ನಿನ್ನ ಕಣ್ಣನ್ನು ಎದುರಿಸುವುದು ಕಷ್ಟ. ಸ್ನೇಹಲತ ತುಂಟು ನಗೆ ನಕ್ಕಿದ್ದಳು.
ನಿಜವಾಗಿಯೂ ಅವಳ ಕಣ್ಣಲ್ಲಿ ವಿಚಿತ್ರ ಆಕರ್ಷಕತೆ ಇದೆ. ಹಾಗೆ ಇರುವುದು ಕೆಟ್ಟದ್ದು. ಮಂಜಪ್ಪನೇ ಹೇಳಿದ್ದ.
ಅವಳ ಕಣ್ಣು ನೋಡಿದರೆ ಗೊತ್ತಾಗುದಿಲ್ಲೆನೊ ಇದು ಕಣ್ಣುಹೊಡೆಯೊ ಜಾತಿ ಥೂ ಇವರೆಂಥ ಸ್ನೇಹಿತರಪ್ಪ. ನಾನು ಅವಳ ಕುರಿತು ಲಘು ಮಾತಾಡಿದ್ದೆ. ಅದೇ ಕಾರಣ. ಅವಳನ್ನು ಲಘುವಾಗಿ ಅವರು ಕಂಡರು.
ಅವರೊಡನೆಲ್ಲ ನನ್ನ ಪ್ರೀತಿಯ ಪ್ರಕರಣ ಅಂದದ್ದೇ ತಪ್ಪು. ಅವಳ ನಗೆಯೆಷ್ಟು ಮಾಟ, ಅವಳ ದೇಹವೆಷ್ಟು ಮಾಟ, ಅಪ್ಪಿ ಮುದ್ದಾಡಬೇಕೆನಿಸುತ್ತದೆ. ನನ್ನ ಮೈಯಲ್ಲೇಕೆ ಕಾವು ಬರುತ್ತದೆ. ಅಯ್ಯೊ ಸೆಕೆ. ತಡೆಯಲು ಸಾಧ್ಯವಿಲ್ಲ. ನನಗೆ ಸ್ನೇಹಲತೆಯ ಹೊರತು ಗತಿಯಿಲ್ಲ. ಇದ್ದಕ್ಕಿದ್ದಂತೆ ಅವಳೇಕೆ ಬಂದು ಬಿಡಬಾರದು. ನನ್ನ ಕಾಲಿಗೆ ಬಿದ್ದು ನಿನ್ನ ಹೊರತೂ ನನಗೆ ಗತಿಯಿಲ್ಲವೆಂದು ಹೇಳಿಬಿಡಬಾರದು. ಅಳಬಾರದು. ನಾನು ಮುದ್ದಾಗಿ ಎತ್ತುಕೊಳ್ಳುತ್ತಿದ್ದೆ. ಸ್ನೇಹ, ನಾವು ಚಿರಪ್ರೇಮಿಗಳು ನಿನ್ನ ಮೇಲೆ ನನಗೆ ಸಂಶಯವಿಲ್ಲ. ಇದು ಕೇವಲ ಗಂಡಸಿನ ಜೆಲೆಸಿ. ನೀನು ಹತ್ತಿರವಿಲ್ಲದ್ದರಿಂದ ನಾನು ರಜೆ ಪಡೆದು ಬಂದು ಬಿಡುತ್ತೇನೆ. ನಿನ್ನ ಕಾಲೇಜು ಈ ಸಲ ಮುಗಿಯಿತಲ್ಲ. ಈ ವರ್ಷ ಮದುವೆಯಾಗಿ ಬಿಡುವ ಯಾರ ಸುದ್ದಿಯೂ ಬೇಡ. ಆಗದಾ? ನನ್ನ ಮುದ್ದು ಸ್ನೇಹಲತಾ ಆಗದಾ?...... ಛೇ! ಎಂಥ ಕನಸಿದು. ನನಗೇನು ಹುಚ್ಚುಹಿಡಿದಿದೆಯೆ? ನಾಟಕದ ಪಾಟರ್ು ಗಟ್ಟಿ ಮಾಡುತ್ತಿರುವೇನೆ. ಇಲ್ಲ ಸ್ನೇಹಲತಾ ನನ್ನ ಪಾಲಿಗೆ ಇಲ್ಲ. ಅವಳಷ್ಟಕ್ಕೆ ಅವಳು. ನನಗೂ ಅವಳಿಗೂ ಸಂಬಂಧವಿಲ್ಲ.
ಮನೆಯಲ್ಲಿ ಏನೇನೋ ಗುಸು ಗುಸು. ಸ್ನೇಹಲತಾ ಬಂದರೆ ತಮ್ಮ ಮನೆಯಲ್ಲಿ ತಮ್ಮ ಮಾತನ್ನು ಎಲ್ಲಿ ಕೇಳುತ್ತಾಳೆಂದು ಆಯಿ ಹೇಳಲಿಲ್ಲವೆ? ಆ ಸ್ವರ್ಣಲತಾ ಎಷ್ಟು ಮುದ್ದು ಮುದ್ದಾಗಿದ್ದಾಳೆ. ಎಂಥ ವಿನಯ!
ಸ್ನೇಹಲತಾ, ನನಗೆ ತಿಳಿದಿರಲಿಲ್ಲ ನಿನ್ನ ಗುಣ. ನಾನು ನಿನ್ನ ಸ್ನೇಹಿತನಲ್ಲ. ತೆಳೀತಾ? ನಿನ್ನ ಹೊರತು ಮದುವೆಯಾಗುವುದಿಲ್ಲವೆಂದಿದ್ದಿ. ಏನೇ ಮಾಡು. ಮದುವೆಯಾಗು ಬಿಡು. ಅಥವಾ ಸೂಳೆಯಾಗು. 
ಅಬ್ಬ! ಒಂದು ಗಂಟೆಯಾಯಿತು. ನಿದ್ದೆ ಹತ್ತದು. ಹೊರಳಾಟ, ಹೊರಳಾಟ. ಈ ಮೋಡಗಳು ಯಾಕೆ ದಟ್ಟೈಸಿ ನಿಂತು ತ್ರಾಸು ಕೊಡುವವೊ. ಒಂದು ಬಿರುಗಾಳಿ ಬಂದು ಈ ಮೋಡಗಳನ್ನು ಯಾಕೆ ಚದುರಿಸಬಾರದು. ವಾತಾವರಣ ತಿಳಿಗೊಳಿಸಬಾರದು.
ನಾನು ಅವರಿವರು ಹೇಳಿದುದನ್ನು ಕೇಳಿದೆನೆಂದು ನಿನ್ನ ಆಕ್ಷೇಪ ತಾನೆ? ಅವರಿವರು ಏಕೆ ಅನ್ನುತ್ತಾರೆ? ನಿನ್ನ ಆಗ್ಯರ್ುಮೆಂಟ್ ನನಗೆ ಗೊತ್ತು. ನಮ್ಮೂರ ಜನಕ್ಕೆ ಬೇರೆ ಕೆಲಸವಿಲ್ಲ. ಎಲ್ಲಾದರೂ ಒಂದು ಹೆಣ್ಣು ಕಣ್ಣಿಗೆ ಬಿದ್ದರೆ ಸಾಕು. ಅದನ್ನು ಬೇಟೆಯಾಡುವುದು. ಸಿಕ್ಕದಿದ್ದರೆ ಸುದ್ದಿ ಹೇಳುತ್ತ ಚಟ ತೀರಿಸಿಕೊಳ್ಳುವುದು. ಸಾಮಾಜಿಕವಾಗಿ ಒಂದು ಹೆಣ್ಣು ಮುಂದೆ ಬಂದರೆ ಆ ಹೇಡಿಗಳು ಸಹಿಸುವುದಿಲ್ಲ. ನೀನೂ ಅಂಥ ಒಂದು ಪ್ರೊಡಕ್ಟು. ಶ್ರೀಮಂತಳಾದರೆ ಶರಣೆನ್ನುವುದು, ತನ್ನಂತೆ ಬಡವಳಾದರೆ ತುಳಿಯುವುದು. ಅಲ್ಲವೆ? ಖರೆ ಹೇಳಲಾ ನಿನ್ನ ಮಾತನ್ನು ನಂಬಬೇಕೆನ್ನಿಸುತ್ತದೆ. ಆದರೆ ಆಗುತ್ತಿಲ್ಲ. ಏನು ಮಾಡಲಿ? ನಾನು ಸ್ವರ್ಣಲತೆಯ ಕಡೆ ವಾಲಿದ್ದೆ ಅನ್ನುತ್ತಿ. ಅಥವಾ ನನ್ನ ಕೀಳ್ಮೆ ಮನೋಭಾವ ಸಂಭಾವಿತ ತನಕ್ಕೆ ಕಾರಣ ಹುಡುಕುತ್ತದೆ. ಅನ್ನುತ್ತಿ ಅಥವಾ ಮನೆಯವರಿಗೆ ಹೆದರುತ್ತಿ. ಒಟ್ಟಾರೆ ತನ್ನಲ್ಲಿ ಏನಾದರೂ ತಪ್ಪು ಹುಡುಕುವ ನೀನು ಪ್ರಯತ್ನಿಸುತ್ತಿ. ಆದರೆ ನಾನು ಮಾತ್ರ ಬಳಲುತ್ತೇನೆ. ನೆನಪು ಬರುತ್ತದೆ. ತಾನೆಷ್ಟು ಬೆಪ್ಪು ನಿನ್ನ ಈ ತೆಳು ವ್ಯಕ್ತಿತ್ವವನ್ನು ನಂಬಿದೆ. ನಂಬಿಕೆಟ್ಟೆ. ನನ್ನ ಕಷ್ಟಗಳು ನಿನಗೆ ಅರಿವಾಗುವುದಿಲ್ಲ. ನಿನ್ನಂತೆ ನಾನು ಗಂಡಸಲ್ಲ. ಏನು ಬೇಕಾದರೂ ಎಲ್ಲಿಯಾದರೂ ಹೋಗಿ ಪಡೆಯಲಾಗುವುದಿಲ್ಲ. ತಂದೆ-ತಾಯಿಗಳು ನನ್ನ ಮೇಲೆ ಬಹಳ ಭರವಸೆ ಇಟ್ಟುಕೊಂಡಿದ್ದಾರೆ. ಕೆಲ ವಿಶ್ವಾಸಿಕರಲ್ಲಿ ನಾನು ನಂಬಿಗೆ ಇಟ್ಟು ನಡೆದೆ. ಆದರೆ ನಾನು ನಿನ್ನ ಪ್ರೀತಿಸಿದ್ದರಿಂದ ನನಗೆ ಪ್ರೀತಿಯ ಭಯವಿರಲಿಲ್ಲ. ಆದರೆ ನೀನು ಕೆಟ್ಟ ಹೆಸರಿಟ್ಟೆ. ನನಗೆ ಬೇಸರವಿಲ್ಲ. ತಂದೆತಾಯಿಗಳು ನಾನು ನೌಕರಿ ಮಾಡಬಹುದು. ಸ್ವಲ್ಪ ಸಹಾಯವಾದೀತು ಎಂದುಕೊಂಡಿದ್ದಾರೆ. ನನ್ನನ್ನು ಗುತ್ತಿಗೆ ಕೊಳ್ಳುವ ಮನಸ್ಸು ಅವರದಲ್ಲ. ನನ್ನ ಬಗ್ಗೆ ಅವರಿಗೆ ಹೊರಯಾಗದಿದ್ದರಾಯಿತು. ಅಷ್ಟು ಅವರು ಬಯಸುವುದು ತಪ್ಪೆ?
ನನಗೆ ಪುಸ್ತಕ ಕೊಳ್ಳಲಾಗಲಿಲ್ಲ. ಸಂಬಂಧಿಕನಲ್ಲಿ ಹೋಗಿ ತಂದೆ. ಆ ಭೆಟ್ಟಿಗೆ ನಿನ್ನ ಅರ್ಥವೇ ಬೇರೆ.
ನಿನ್ನ ಸ್ನೇಹಿತ ನೀನು ಹಿತೈಷಿಯೆಂದು ತಿಳಿದೆ. ಅವನು ನನ್ನನ್ನು ಉಪಯೋಗದ ವಸ್ತುವನ್ನಾಗಿ ಮಾಡಲು ಬಯಸಿದ್ದು ನಿನಗೆ ತಿಳಿಯುವುದಿಲ್ಲ. ತಾನು ಚುನಾವಣೆಗೆ ನಿಲ್ಲಬಾರದಿತ್ತು. ಹಾಗೆ ಮಾಡಬಾರದಿತ್ತು. ಹೀಗೆ ಮಾಡಬಾರದಿತ್ತು. ಒಂದೂ ನೀನು ನೋಡದ್ದು. ನೀನು ಹೇಳಿದೆಲ್ಲ ಕೇಳುತ್ತ ಬಂದೆ. ನೀನು ಕರೆದಾಗ ಮಗ್ಗಲಿಗೆ ಬರಲಿಲ್ಲವೆಂದು ಸಿಟ್ಟು. ನಾನು ಅಷ್ಟು ಲೂಸ್ಪಿಟ್ ಅಲ್ಲ ನಿನ್ನ ಪ್ಯಾಂಟಿನ ಹಾಗೆ. ಒಬ್ಬರನ್ನೊಬ್ಬರು ನಂಬಲಾರದಾದರೆ ಎಂಥ ಸ್ನೇಹ..... ಇದೆಲ್ಲ ನಿನ್ನ ಆಗ್ಯರ್ುಮೆಂಟ್ ಅಲ್ಲವಾ?
ನಿನ್ನ ಆಗ್ಯರ್ುಮೆಂಟ್ನಿಂದ ಗಾಳಿ ಬೀಸುವುದಿಲ್ಲ. ಮೋಡ ಚದುರುವುದಿಲ್ಲ. ನೋಡು ಆಕಾಶವನ್ನು ಎಂಥ ದಟ್ಟೈಸಿದೆ. ಸೆಕೆ ಅಯ್ಯೋ ತಾಳಲಾರೆ ಎಂಥ ಸೆಕೆ. ಎಂಥ ಸೆಕೆ. ನನಗೆ ಗಾಳಿಯೂ ಬೇಡ. ಮೋಡ ಚೆದುರುವುದೂ ಬೇಡ. ಹಾಗೇ ಬಿದ್ದುಕೊಳ್ಳುತ್ತೇನೆ. ಹೊರಳಾಡುತ್ತೇನೆ. ಕಣ್ಣು ತೂಕಡಿಸುತ್ತದೆ. ನಿದ್ದೆ ಹತ್ತುತ್ತದೆ. ಮೋಡ ಕರಗಲಿ, ಬಿಡಲಿ. ಹೊಸದಿನ ಬರುತ್ತದೆ. ಅದನ್ನು ಅನುಭೋಗಿಸುತ್ತೇನೆ. ಈಗ ಮಲಗುತ್ತೇನೆ.