Sunday 22 December 2013

‘ನುಡಿಸಿರಿ’ಗೆ ಪರ್ಯಾಯವಾದ ‘ಜನನುಡಿ’ -ಹೊಮ್ಮುತ್ತಿರುವ ಜನಪರ ಪರ್ಯಾಯದ ಸಂಕೇತ - ವಸಂತ

‘ನುಡಿಸಿರಿ’ಗೆ ಪರ್ಯಾಯವಾದ ‘ಜನನುಡಿ’ -ಹೊಮ್ಮುತ್ತಿರುವ ಜನಪರ ಪರ್ಯಾಯದ ಸಂಕೇತ

Standard
*ವಸಂತ
‘ನುಡಿಯು ಸಿರಿಯಲ್ಲ, ಬದುಕು’ ಎಂಬ ಘೋಷವಾಕ್ಯದೊಂದಿಗೆ ಡಿಸೆಂಬರ್ 14, 15 ರಂದು ಮಂಗಳೂರಿನಲ್ಲಿ ನಡೆದ ‘ಜನನುಡಿ’, ಅದರಲ್ಲಿ ಭಾಗವಹಿಸಿದ ಕೆಲವರಿಗೆ 1980ರ ದಶಕದ ಬಂಡಾಯದ ಸ್ಥಾಪನಾ ಸಮ್ಮೇಳನವನ್ನು ನೆನಪಿಸಿದರೆ, ಇನ್ನೂ ಕೆಲವರಿಗೆ 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಸಿತಂತೆ. ಹಲವರಿಗೆ ಒಂದು ‘ಚಾರಿತ್ರಿಕ’ ಘಟನೆಯಲ್ಲಿ ಭಾಗವಹಿಸಿದ ರೋಮಾಂಚನವನ್ನು ಉಂಟು ಮಾಡಿತಂತೆ. ರಾಜ್ಯದ ನಾಲ್ಕೂ ಮೂಲೆಗಳಿಂದ ಬಂದ ಹಲವು ಪ್ರಗತಿಪರ ಲೇಖಕರು, ಕಲಾವಿದರು, ಚಿಂತಕರು ಮತ್ತು ಸಾಹಿತ್ಯ-ಕಲಾಸಕ್ತರು ಅಲ್ಲಿ ನೆರೆದಿದ್ದರು. ವೇದಿಕೆಯ ಮೇಲೂ ಕೆಳಗೂ ಮಹಿಳೆಯರೂ ಯುವಜನರೂ ಅರ್ಧಕ್ಕಿಂತಲೂ ಹೆಚ್ಚು ಇದ್ದರು. ದಲಿತ, ತಳಸಮುದಾಯದ ಲೇಖಕರೂ ಹೋರಾಟಗಾರರು, ಹಲವು ಜನವಿಭಾಗಗಳ ನಿಜವಾದ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಿದ್ದು ಎದ್ದು ಕಾಣುತ್ತಿತ್ತು. ಮಾತ್ರವಲ್ಲ, ಸಮಾವೇಶದಲ್ಲಿ ನಡೆದ ಚರ್ಚೆಗಳು ಜನರನ್ನು ಬಾಧಿಸುವ ವಿಷಯಗಳ ಬಗ್ಗೆ ಇತ್ತು. ಸಾಮಾನ್ಯವಾಗಿ ಕೊನೆಗೆ ಇರುವ (ಅಥವಾ ಇಲ್ಲದೆನೇ ಹೋಗುವ) ಮಹಿಳೆಯ ಬಗೆಗಿನ ಗೋಷ್ಟಿ ಮೊದಲ ಗೋಷ್ಟಿಯಾಗಿತ್ತು. ‘ಸಮಕಾಲೀನ ಸವಾಲುಗಳು-ಸಾಧ್ಯತೆಗಳು’, ‘ಜನಸಂಸ್ಕತಿ ಮತ್ತು ಮಾರುಕಟ್ಟೆ’, ‘ಕರಾವಳಿಯ ತಲ್ಲಣಗಳು’ ಇವೆಲ್ಲ ವಿಷಯಗಳು ಸಾಹಿತ್ಯಕ-ಸಾಂಸ್ಕøತಿಕ ಸಮಾವೇಶದಲ್ಲಿ ಗೋಷ್ಟಿಗಳ ವಿಷಯವಾಗುವುದು ಅಪರೂಪ. ಇವೆಲ್ಲಾ ಇಂತಹ ನೆನಪುಗಳಿಗೆ, ಅನ್ನಿಸಿಕೆಗಳಿಗೆ ಕಾರಣವಾಗಿರಬಹುದು.
                                                                                                                         ‘ನುಡಿಸಿರಿ’ ಒಂದು ‘ಸಾಂಸ್ಕತಿಕ ಮುಖವಾಡ’
Meenakshi Baali
Meenakshi Baali
ಡಾ. ಮೋಹನ್ ಆಳ್ವಾ ಅವರು ಕಳೆದ 10 ವರ್ಷಗಳಿಂದ ಅದ್ದೂರಿಯಾಗಿ ಸಂಘಟಿಸುತ್ತಿರುವ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್’ನ ನಿಜವಾದ ಉದ್ದೇಶ ಹಲವು ಲೇಖಕ-ಕಲಾವಿದರಾಗಿ ಅರಿವಾಗಲಾರಂಭಿಸಿದಂತೆ ಅದರ ವಿರುದ್ಧ ಭಾವನೆ ಹೊಗೆಯಾಡಲಾರಂಭಿಸಿತ್ತು. 10ನೇ ನುಡಿಸಿರಿಯನ್ನು ವೀರೇಂದ್ರ ಹೆಗಡೆಯವರು ಉದ್ಘಾಟಿಸುತ್ತಾರೆ ಎಂದು ತಿಳಿದಾಗ ಅದು ಭುಗಿಲೆದ್ದಿತು. ಧರ್ಮಸ್ಥಳದಲ್ಲಿ ಸೌಜನ್ಯ ಮತ್ತು ನೂರಾರು ಹೆಣ್ಣುಮಕ್ಕಳ ಕೊಲೆಗಳ ವಿರುದ್ಧ ಇತ್ತೀಚೆಗೆ ವ್ಯಕ್ತವಾದ ರೊಚ್ಚಿಗೆ ಮತ್ತು ಇತರ ಯಾವುದೇ ಜನತೆಯ ತಲ್ಲಣಗಳಿಗೆ ‘ನುಡಿಸಿರಿ’ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ.  ಮಾತ್ರವಲ್ಲ ಅವÀನ್ನು ಮರೆಮಾಚುವುದೇ ಇಂತಹ ಸಂಭ್ರಮಗಳ ಗುರಿ. ‘ನುಡಿಸಿರಿ’ ಪಾಳೆಯಗಾರಿ, ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ‘ಸಾಂಸ್ಕøತಿಕ ಮುಖವಾಡ’ ಎಂಬುದು ಹೆಚ್ಚೆಚ್ಚು ಲೇಖಕ-ಕಲಾವಿದರಿಗೆ ಸ್ಪಷ್ಟವಾಗುತ್ತಿದ್ದಂತೆ ಅದಕ್ಕೆ ಪರ್ಯಾಯ ಕಟ್ಟಬೇಕು. ಬಂಡವಾಳಗಾರ, ಧರ್ಮಗುರು, ಒಡೆಯ ಇವರನ್ನೆಲ್ಲಾ ಸಾಹಿತ್ಯ-ಸಂಸ್ಕøತಿ ಪ್ರವೇಶಿಸಿ ಭ್ರಷ್ಟಗೊಳಿಸಲು ಬಿಡಬಾರದು ಎಂಬ ಭಾವನೆ ಗಟ್ಟಿಯಾಗತೊಡಗಿ ‘ಜನನುಡಿ’ ಮೂಡಿಬಂತು. ಸಮುದಾಯ, ಕರಾವಳಿ ಲೇಖಕಿಯರ ಸಂಘ, ಚಿಂತನ, ಜನಸಾಹಿತ್ಯ ಸಂಘಟನೆ, ಸಹಮತ್, ಇಪ್ಟಾ, ನಾವು-ನಮ್ಮಲ್ಲಿ, ಆದಿಮ ಮುಂತಾದ ಹಲವು ಸಮಾನ-ಮನಸ್ಕ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳು ಜನ-ಪರ ಸಂಘಟನೆಗಳ ಸಹಕಾರದಿಂದ ಕಟ್ಟಿಕೊಂಡ ‘ಅಭಿಮತ’ ಈ ಸಮಾವೇಶವನ್ನು ಸಂಘಟಿಸಿತ್ತು. ‘ನುಡಿಸಿರಿ’ಗೆ ಪರ್ಯಾಯವಾಗಿ ‘ಜನನುಡಿ’ ಮೂಡಿ ಬಂದಿದ್ದರೂ ಅದರ ಉದ್ದೇಶಗಳು ಇನ್ನೂ ವ್ಯಾಪಕವಾದದ್ದು ಅಂತಾರೆ ಅದರ ಸಂಘಟಕರು.
ಅನುಪಮಾ
ಅನುಪಮಾ
    ಬಿಚ್ಚುಮನಸ್ಸಿನ ಪ್ರಬುದ್ಧ ಚರ್ಚೆ
ಉದ್ಘಾಟನೆ, ಸಮಾರೋಪಗಳಲ್ಲದೆ ಮೇಲೆ ಹೇಳಿದ ಹಲವು ಗೋಷ್ಟಿಗಳಲ್ಲಿ ಚಿಂತನ-ಮಂಥನ ನಡೆಯಿತು. ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಅಸಹಜ ಸಾವು ಮತ್ತು ಅದರ ವಿರುದ್ಧ ಭುಗಿಲೆದ್ದ ಚಳುವಳಿ, ಕಾರ್ಮಿಕ ಚಳುವಳಿಯ ಕೋಟೆ ಮತ್ತು ಬಹುಸಂಸ್ಕøತಿಯ ಬೀಡಾಗಿದ್ದ ಕರಾವಳಿ ‘ಹಿಂದುತ್ವದ ಪ್ರಯೋಗಶಾಲೆ’ ಆಗಲು ಕಾರಣಗಳು, ಮೋದಿ ಪ್ರತಿನಿಧಿಸುವ ಶ್ರೀಮಂತ-ಪರ’ಕೋಮುವಾದಿ ಫ್ಯಾಸಿಸ್ಟ್ ನಾಯಕತ್ವಕ್ಕೆ ವಿರೋಧ, ಮಡೆಸ್ನಾನ-ಪಂಕ್ತಿಬೇಧ-ಪಲ್ಲಕಿ ಮೆರವಣಿಗೆಗಳ ಖಂಡನೆ, ಮೂಢನಂಬಿಕೆಗಳ ವಿರುದ್ಧ ಕಾನೂನಿಗೆ ಬೆಂಬಲ, ಮಹಿಳೆಯರ ಮೇಲೆ ದೌರ್ಜನ್ಯಗಳ ವಿವಿಧ ರೂಪಗಳು, ಮಹಿಳಾ ಚಳುವಳಿಯ ಸಮೀಕ್ಷೆ/ವಿಮರ್ಶೆ, ಜಾಗತೀಕರಣದ ಸಂದರ್ಭದಲ್ಲಿ ಕಾವ್ಯದ ಪಾತ್ರ, ಸಾಹಿತ್ಯದ ಕಾರ್ಪೋರೇಟಿಕರಣ, ಮಾಧ್ಯಮಗಳಲ್ಲಿ ಬುದ್ಧಿಜೀವಿ-ವಿರೋಧಿ ಧೋರಣೆಗಳು, ಉದ್ಯಮ ಮತ್ತು ಜಾಹೀರಾತು ಜನಸಂಸ್ಕøತಿಯನ್ನು ಬಳಸಿಕೊಂಡ ಬಗೆ,  ಕನ್ನಡ ಕಾವ್ಯ ಮಹಿಳಾ ಸಮಸ್ಯೆಗೆ ಸ್ಪಂದಿಸಿದ ರೀತಿ, ಶ್ರಮದ ಮೇಲೆ ಬಂಡವಾಳದ ದಾಳಿ, ಜಾಗತೀಕರಣಕ್ಕೂ ಕೋಮುವಾದಕ್ಕೂ ಇರುವ ಸಂಬಂಧ, ಸರ್ಕಾರ ಮತ್ತು ಉದ್ಯಮಿಗಳು ಉತ್ಸವಗಳನ್ನು ಸಂಘಟಿಸುವ ಹಿಂದಿನ ಹುನ್ನಾರಗಳು; ಕೋಮುವಾದ, ಫ್ಯಾಸಿಸಂನಂತಹ ‘ರೋಗ ಲಕ್ಷಣ’ಗಳ ಬದಲು ಬಂಡವಾಳಶಾಹಿ, ಸಾಮ್ರಾಜ್ಯಶಾಹಿಯಂತಹ ‘ರೋಗ’ಗಳಿಗೆ ಔಷಧಿ ಹುಡುಕುವ ಅಗತ್ಯ; ಕೊರಗ, ಕುಡುಬಿ, ಮಲೆಕುಡಿಯ ಮುಂತಾದ ಮೂಲನಿವಾಸಿಗಳ ತಲ್ಲಣಗಳು, ಜನ ಚಳುವಳಿಗಳು ಬಿಡಿಬಿಡಿಯಾಗಿ ದ್ವೀಪಗಳಾಗದೆ ಐಕ್ಯತೆ ಸಾಧಿಸಿ ವ್ಯವಸ್ಥೆ ಬದಲಿಸುವತ್ತ ಸಾಗುವ ಬಗೆ, ಮೆಗಾ ಪ್ರಾಜೆಕ್ಟುಗಳಿಂದ ಒಕ್ಕಲೆಬ್ಬಿಸಿದ ಜನರ ಸಮಸ್ಯೆಗಳು, ಪ್ರಜಾಸತ್ತೆಯ ಅಂಗಗಳ ಪಾಳೆಯಗಾರೀಕರಣ,  ಐಸಿಡಿಎಸ್ ಖಾಸಗೀಕರಣ, ಮೈಸೂರು ಒಡೆಯರ್ ನಿಧನದ ಸಂದರ್ಭದಲ್ಲಿ ಮಾಧ್ಯಮಗಳ ಪಾಳೆಯಗಾರಿಯ ಪೂಜೆ ; ಜನಸಂಸ್ಕøತಿಯಲ್ಲೂ ಯಜಮಾನ, ಪೂಜಾರಿ, ಪುರುಷ  ಶಕ್ತಿಗಳ ಶಕ್ತಿ ರಾಜಕಾರಣದ  ಪ್ರಭಾವ; ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ರಾಜಕೀಯ ಪರ್ಯಾಯ – ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬಿಚ್ಚುಮನಸ್ಸಿನ ಪ್ರಬುದ್ಧವಾದ ಆಳವಾದ ಚರ್ಚೆ ನಡೆಯಿತು. ತಮ್ಮ ಮಾತುಗಳ ಮೂಲಕ ಚರ್ಚೆ ಆರಂಭಿಸಿದವರಲ್ಲಿ, ಪ್ರತಿಕ್ರಿಯಿಸಿದವರಲ್ಲಿ – ರಾಜೇಂದ್ರ ಚೆನ್ನಿ, ಎಸ್.ಜಿ. ಸಿದ್ದರಾಮಯ್ಯ, ರಹಮತ್ ತರಿಕೆರೆ, ದಿನೇಶ್ ಅಮಿನ್‍ಮಟ್ಟು, ಆರ್.ಪೂರ್ಣಿಮಾ, ಎಚ್.ಎಸ್.ಅನುಪಮ, ಕೆ.ನೀಲಾ, ವಿನಯಾ ಒಕ್ಕುಂದ, ಮಾವಳ್ಳಿ ಶಂಕರ್, ಎನ್. ಗಾಯತ್ರಿ, ಜಿ.ಪಿ.ಬಸವರಾಜು, ಕೆ.ಎಸ್.ವಿಮಲ, ಸಬಿಹಾ ಭೂಮಿಗೌಡ, ವಿಠ್ಠಲ ಭಂಡಾರಿ, ಎಂ.ಡಿ.ಒಕ್ಕುಂದ, ಸನತ್ ಕುಮಾರ ಬೆಳಗಲಿ, ರವಿಕೃಷ್ಣಾ ರೆಡ್ಡಿ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಪಿಚ್ಚಳ್ಳಿ ಶ್ರೀನಿವಾಸ್ – ಸೇರಿದ್ದರು. ಒಟ್ಟು 48 ಜನ ವೇದಿಕೆಯಿಂದ ಮಾತನಾಡಿದರು. 16 ಕವಿಗಳು ತಮ್ಮ ಕವಿತೆ ಓದಿದರು.
ರಾಜೇಂದ್ರ ಚೆನ್ನಿ
ರಾಜೇಂದ್ರ ಚೆನ್ನಿ
ಇಂತಹ ವ್ಯಾಪಕವಾದ ಆಳವಾದ ಚರ್ಚೆಗಳ ಸಾರಾಂಶವನ್ನು ಸ್ವಲ್ಪದರಲ್ಲಿ ಹೇಳುವುದು ಕಷ್ಟ. ಈ ಚರ್ಚೆಗಳಲ್ಲಿ ಹೇಳಲ್ಪಟ್ಟು ಸಮಾವೇಶದ ಉದ್ದಕ್ಕೂ ಮಾರ್ದನಿಸಿದ ಕೆಲವು ನುಡಿಗಳನ್ನು ಜತೆಗೆ ನೀಡಿದ ಬಾಕ್ಸಿನಲ್ಲಿ ಸಂಗ್ರಹಿಸಲಾಗಿದೆ. ಅವು ಚರ್ಚೆಯ ‘ರುಚಿ’ ಕೊಡಬಹುದು. ಸಮಾವೇಶದ ನಿರ್ಣಯಗಳನ್ನೂ ಬಾಕ್ಸಿನಲ್ಲಿ ಕೊಡಲಾಗಿದೆ. ‘ಜನನುಡಿ’ಯಲ್ಲಿ ಕವಿಗೋಷ್ಟಿ, ಹೋರಾಟದ ಹಾಡುಗಳು, ಕೋಲಾಟ ಮತ್ತು ಕೆಲವರ ವಿಷಯ ಮಂಡನೆಯಲ್ಲಿ ಬಿಟ್ಟರೆ ಸಾಹಿತ್ಯಕ-ಸಾಂಸ್ಕøತಿಕ ಭಾಗ ಕಡಿಮೆ ಇತ್ತು  ಎಂಬುದು ಒಂದು ಕೊರತೆ. ಇದು ಸಮಯ ಸಂಪನ್ಮೂಲಗಳ ಮಿತಿಯಿಂದ ಆಗಿರುವಂತಹದ್ದು. ಆದರೂ ‘ಜನನುಡಿ’ಯ ಮುಂದಿನ ಅವತರಣಿಕೆಗಳಲ್ಲಿ ಗಮನಿಸಬೇಕಾದ್ದು.
                                                                          ಸಾಂಸ್ಕತಿಕ ರಾಜಕೀಯ ಮಹತ್ವ
ಆದರೆ ‘ಜನನುಡಿ’ಯ ಮಹತ್ವ ಇರುವುದು ಅಲ್ಲಿ ಏನು ಹೇಳಲಾಯಿತು, ಮಾಡಲಾಯಿತು ಎಂಬುದರಲ್ಲಿ ಅಲ್ಲ. ಇಂತಹ ಒಂದು ಜನ-ಪರ ಪರ್ಯಾಯ ಸಾಹಿತ್ಯಕ-ಸಾಂಸ್ಕøತಿಕ ಸಮಾವೇಶವನ್ನು ಸಂಘಟಿಸಲಾಯಿತು. ವೈವಿಧ್ಯಮಯ ಚಟುವಟಿಕೆಯಲ್ಲಿ ತೊಡಗಿದ ಹಲವು ಸಾಂಸ್ಕøತಿಕ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿ ‘ನುಡಿಸಿರಿ’ ಪ್ರತಿನಿಧಿಸಿದ ಪಾಳೆಯಗಾರಿ, ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ‘ಸಾಂಸ್ಕøತಿಕ ಮುಖವಾಡ’ವನ್ನು ಕಿತ್ತೊಗೆದು ಅವರನ್ನು ಬಯಲು ಮಾಡಿತು ಎಂಬುದೇ ‘ಜನನುಡಿ’ಯ ಮಹತ್ವ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಡೆಸ್ನಾನ-ಪಂಕ್ತಿಬೇಧದ ವಿರುದ್ಧ ಹೋರಾಟ, ಬಿಜೆಪಿಯ ರಾಜಕೀಯ ಸೋಲು, ಸೌಜನ್ಯ ಚಳುವಳಿಗಳ ಬೆನ್ನಲ್ಲೇ ಇದು ಬಂದಿದ್ದು ಕರಾವಳಿಯಲ್ಲಿ ಬಲವಾದ ಬದಲಾವಣೆಯ ಗಾಳಿ ಬೀಸುತ್ತಿರುವುದರ ಸಂಕೇತ. ಇದು ಕರಾವಳಿಯ ತಲ್ಲಣಗಳ ನಿರ್ದಿಷ್ಟ ಸನ್ನಿವೇಶದಲ್ಲಿ ಮೂಡಿಬಂದರೂ, ಇಡೀ ರಾಜ್ಯದ ದೇಶದ ಮಟ್ಟಿಗೂ ಸಾಂಸ್ಕøತಿಕ ರಾಜಕೀಯ ಮಹತ್ವ ಹೊಂದಿದೆ. ಇದು ನಮ್ಮ ರಾಜ್ಯ ಮತ್ತು ದೇಶದಲ್ಲಿ ಕೆಳಗಿನಿಂದ ಮೇಲಕ್ಕೆ ಹೊಮ್ಮುತ್ತಿರುವ ಜನ-ಪರ ಪರ್ಯಾಯದ ಸಂಕೇತ. ಭಾರತದ ರಾಜಕೀಯದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಗಳ ದ್ವಿ-ಸ್ವಾಮ್ಯವನ್ನು ಒಡೆಯಲು ಬೇಕಾದ ಎಡ-ಪ್ರಜಾಸತ್ತಾತ್ಮಕ ಬದಲಿಗೆ ಸಾಂಸ್ಕøತಿಕ ಭೂಮಿಕೆ ಸಿದ್ಧವಾಗುತ್ತಿದೆ ಎಂಬ ಆಶಾಭಾವನೆ ಮೂಡಿಸುವಂತದ್ದು. ಇಂತಹ ಸಮಾವೇಶ ಸಂಘಟಿಸುವುದರಲ್ಲಿ ನಾಯಕತ್ವ ನೀಡಿದ ಎಚ್.ಎಸ್.ಅನುಪಮ, ಮುನೀರ್ ಕಾಟಿಪಳ್ಳ ಮತ್ತು ನವೀನ್ ಸೂರಿಂಜೆ ಅವರುಗಳನ್ನೂ; ‘ಅಭಿಮತ’ ಕಟ್ಟಲು ಸಹಯೋಗ ನೀಡಿದ ಎಲ್ಲಾ ಸಂಘಟನೆಗಳನ್ನೂ ತಮ್ಮ ಚಾರಿತ್ರಿಕ ಜವಾಬ್ದಾರಿ ನಿರ್ವಹಿಸಿದ್ದಕ್ಕೆ ಅಭಿನಂದಿಸಲೇಬೇಕು.
Lunch
‘ಜನನುಡಿ’ಯಲ್ಲಿ ಮಾರ್ದನಿಸಿದ ನುಡಿಗಳು
“ನಾನು ಕೋಮುವಾದಿ ವ್ಯಕ್ತಿ, ಸಂಘಟನೆ ಮತ್ತು ಸರ್ಕಾರಗಳ ಕಾರ್ಯಕ್ರಮ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವುದಿಲ್ಲ. ಅವರ ಪ್ರಶಸ್ತಿ, ಪುರಸ್ಕಾರಗಳನ್ನು ಸ್ವೀಕರಿಸುವುದಿಲ್ಲ” (ಅನುಪಮ);
“ಸಾಹಿತ್ಯ ಇಂದು ಅನುಸರಿಸಬೇಕಾದ್ದು ಅವ್ಯಕ್ತ ಹಿಂಸೆÀಗಳನ್ನು ವ್ಯಕ್ತಪಡಿಸುವಂತಹ ಡಾ.ಅಂಬೇಡ್ಕರ್ ಮಾರ್ಗವನ್ನು.. ಇಂದಿನ ಪರಿಸ್ಥಿಯಲ್ಲೂ ಕಾವ್ಯ ಬುಡಮೇಲು (ಸಬ್ವರ್ಸಿವ್) ಗುಣವನ್ನು ಉಳಿಸಿಕೊಳ್ಳಬೇಕು.. ನಮ್ಮೆದುರು ನಡೆಯುವ ವಿದ್ಯಮಾನಗಳನ್ನು ಅದರ ನಿಜವಾದ ಹೆಸರಿನಲ್ಲಿ ಕರೆಯಬೇಕಾಗಿದೆ. ಗುಜರಾತ್‍ನಲ್ಲಿ ನಡೆದ 2002ರಲ್ಲಿ ನಡೆದ ನರಮೇಧವನ್ನು ನರಮೇಧ ಎಂದೇ ಕರೆಯಬೇಕು. ದಂಗೆಗಳು ಎಂದಲ್ಲ.” (ಚೆನ್ನಿ);
“ಬಿಡಿಬಿಡಿಯಾಗಿ ಚದುರಿ ಹೋಗಿರುವ ಜನರ ಹೋರಾಟಗಳೂ ಸಂಘಟನೆಗಳು ಸೌಜನ್ಯ ಪ್ರಕರಣದಲ್ಲಿ ಆದಂತೆ ಒಂದಾಗಿ ಹೋರಾಡಬೇಕಾಗಿದೆ. ಜನರ ಹೋರಾಟಗಳೂ ಸಂಘಟನೆಗಳೂ ಸಿಗಿದು ಚೂರು ಚೂರು ಮಾಡಿದರೂ ಮತ್ತೆ ಮತ್ತೆ ಒಂದಾಗುವ ಜರಾಸಂಧನಂತೆ ಆಗಬೇಕಾಗಿದೆ.” (ಸಬಿಹಾ);
‘ಸಾಹಿತ್ಯ ಕಲೆಯಲ್ಲಿ ನವರಸಗಳು ಇರಬೇಕು ಅಂತಾರೆ. ಆದರೆ ‘ಶ್ರಮ ರಸ’ ಇಲ್ಲದೆ ಒಂಬತ್ತು ರಸಗಳಲ್ಲಿ ಯಾವುವು ಇರಲಾರವು..ವಿರಾಸತ್ ಎನ್ನುವುದೇ ಪಾಳೆಯಗಾರಿಯ ವಾಸನೆ ಹೊಡೆಯುವ ಶಬ್ದ.”(ಮೀನಾಕ್ಷಿ);
“ಕರಾವಳಿ ಜಿಲ್ಲೆಗಳಲ್ಲಿ ಇತಿಹಾಸದ ಚಕ್ರವನ್ನು ಶಿಲಾಯುಗಕ್ಕೆ ಹಿಂದಕ್ಕೆ ತಿರುಗಿಸುವ ಪ್ರಯ್ರತ್ನ ನಡೆದಿದೆ. ಇಲ್ಲಿನ ಬಹುಸಂಸ್ಕøತಿಗಳ ಸಹಬಾಳ್ವೆ, ಮಾತೃಪ್ರಧಾನ ಕುಟುಂಬದಲ್ಲಿ ವ್ಯಕ್ತವಾದ ಮಹಿಳೆಯರ ಸ್ವಾತಂತ್ರ್ಯ ಮತ್ತು ಆತ್ಮಗೌರವ, ಭೂಸುಧಾರಣೆ, ಸಾಮಾಜಿಕ ನ್ಯಾಯ, ಮಾನವ ಕೇಂದ್ರಿತ ಅಭಿವೃದ್ಧಿ ಮಾದರಿ – ಇವೆಲ್ಲವನ್ನು ಅಗೋಚರ ಸರ್ಕಾರವೊಂದು ಅದರ ವಿರುದ್ಧ ದಿಕ್ಕಿನಲ್ಲಿ ಬದಲಾಯಿಸಲು ಪ್ರಯತ್ನಿಸುತ್ತಿದೆ.” (ಅಮಿನ್ ಮಟ್ಟು);
“ಇಲ್ಲಿನ ದೈವವಾದ ನಾಗಬ್ರಹ್ಮರಲ್ಲಿ ಹೆಣ್ಣು ಬೇಕೆಂದು ಕೇಳುವ ಏಕೈಕ ಪ್ರದೇಶ ಇದಾಗಿದೆ. ಇಲ್ಲಿನ ಇತಿಹಾಸದಲ್ಲಿ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಒಂದು ಉದಾಹರಣೆ ಇಲ್ಲಿ ಇಲ್ಲ. ಆದರೆ ಕಳೆದ ಕೆಲವು ದಶಕಗಳಿಂದ ನೇತ್ರಾವತಿ  ಹೆಣ್ಣು ಮಕ್ಕಳ ರಕ್ತ ಮತ್ತು ಕಣ್ಣಿರಿನಿಂದ ಕೆಂಪಾಗಿದೆ. ಸೌಜನ್ಯ ಪ್ರಕರಣ ಇಡೀ ತುಳುನಾಡಿನ ಮನಸ್ಸಿನ ಮೇಲೆ ಎಸಗಿದ ಅತ್ಯಾಚಾರ. ನಮ್ಮ ಸಹನೆ ಕಟ್ಟೊಡೆದಿದೆ. ಇನ್ನೊಂದು ಇಂತಹ ಪ್ರಕರಣ ನಡೆಯಬಾರದು ಎಂದು ನಾವು ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟದಲ್ಲಿ ನಮ್ಮೊಂದಿಗೆ ಗಟ್ಟಿಯಾಗಿ ನಿಂತ ಏಕೈಕ ಪಕ್ಷ ಎಂದರೆ ಸಿಪಿಎಂ.” (ಅತ್ರಾಡಿ ಅಮೃತಾ ಶೆಟ್ಟಿ);
‘ಬಿಜೆಪಿಗೆ ಮೋದಿ ಎಂಬ ‘ಫಿಟ್ಸ್’ ಬಂದಿದೆ. ಅದಕ್ಕೆ ಕಬ್ಬಿಣ ಬೇಡುತ್ತಿದೆ. ಈ ‘ಫಿಟ್ಸ್’ನ್ನು ಬಿಡಿಸುವತ್ತ ನಾವು ಎಡ-ಪ್ರಜಾಸತ್ತಾತ್ಮಕ ಬದಲಿ ತರಬೇಕಾಗಿದೆ.” (ಮಾವಳ್ಳಿ ಶಂಕರ್);
“ಜನನುಡಿ ನುಡಿಸಿರಿಗೆ ಪರ್ಯಾಯವಾಗಿ ಮೂಡಿಬಂದಿದೆ. ನಮ್ಮ ಸಂಖ್ಯೆ ಇಲ್ಲಿ ಕಡಿಮೆ ಇರಬಹುದು. ಆದರೆ ಬುದ್ಧ, ಬಸವ ಮುಂತಾದವರು ಆರಂಭಿಸಿದ ಎಲ್ಲಾ ದೊಡ್ಡ ಬದಲಾವಣೆಗಳೂ ಆರಂಭವಾಗಿದ್ದು ಇಂತಹ ಸಣ್ಣ ಸಂಖ್ಯೆಯ ಜನರಿಂದಲೇ”( ನೀಲಾ);
“ಕರಾವಳಿಯಲ್ಲಿ ಹೆಂಚು, ಗೇರುಬೀಜ, ಬೀಡಿ ಮುಂತಾದ ಕೈಗಾರಿಕೆಗಳು ಜಾಗತೀಕರಣದ ದಾಳಿಗೆ ಸಿಕ್ಕು ಜರ್ಝರಿತವಾಗಿ ವ್ಯಾಪಕ ನಿರುದ್ಯೋಗ ಉಂಟಾದ ಪರಿಸರ ಕೋಮುವಾದ ಬೆಳೆಯಲು ಪ್ರಶಸ್ತವಾದ ಭೂಮಿಕೆ ನಿರ್ಮಿಸಿತು ಎಂಬುದನ್ನು ಮರೆಯಬಾರದು.” (ವಿಮಲಾ);
“ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಲವು ದಿನಗಳ ಕಾಲ ಚಳಿಗಾಳಿ ಲೆಕ್ಕಿಸದೆ ಧರಣಿ ಕೂತ ಸಾವಿರಾರು ಅಕ್ಷರ ದಾಸೋಹ ಮಹಿಳಾ ಕಾರ್ಮಿಕರನ್ನು ಎಷ್ಟು ಜನ ಲೇಖಕರು ಕಲಾವಿದರು ಚಿಂತಕರು ಹೋಗಿ ಮಾತನಾಡಿಸಿದರು ? ಅದಕ್ಕೆ ಅವರಿಗೆ ಆಹ್ವಾನ ಬೇಕೆ ? ಅದು ಅವರ ಜವಾಬ್ದಾರಿ ಅಲ್ಲವೆ ?”(ವಿಠ್ಠಲ)

“ಒಂದು ಕೋಮುವಾದ ಎದುರಿಸಲು ಪ್ರಗತಿಪರರೆನಿಸಿಕೊಂಡವರು ಇನ್ನೊಂದು ಕೋಮಿನ ಮೂಲಭೂತವಾದ ಬೆಂಬಲಿಸಿ ಕೋಮುವಾದದ ವಿರುದ್ಧ ಹೋರಾಟಕ್ಕೆ ಪೆಟ್ಟು ಕೊಟ್ಟಿದ್ದಾರೆ. ಬಡ ಮುಸ್ಲಿಂ ಮಹಿಳೆಗೆ ನೆರವು ನೀಡಿದನೆಂಬ ಕಾರಣಕ್ಕೆ ವಿಟ್ಲದ ಪತ್ರಕರ್ತನೊಬ್ಬನ ಮೇಲೆ ಕೋಮುವಾದಿ ಸಂಘಟನೆಯೊಂದು ದಾಳಿ ಮಾಡಿದೆ. ಅದನ್ನೂ ನಾವು ಖಂಡಿಸುತ್ತೇವೆ.” (ಜೀವನ್)
“ಆಳ್ವಾಸ್ ನುಡಿಸಿರಿಗೆ ಇಷೆಲ್ಲಾ ಖರ್ಚು ಮಾಡುವುದು ಹೇಗೆ ಸಾಧ್ಯವಾಗುತ್ತದೆ… ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ 16 ಸಾವಿರ ವಿದ್ಯಾರ್ಥಿಗಳಿದ್ದಾರೆ. ಪ್ರತಿಯೊಬ್ಬರಿಂದ ಒಂದುವರೆ ಲಕ್ಷ ಬರುತ್ತದೆ. ಅಂದರೆ ಸುಮಾರು 200ಕೋಟಿ.ರೂ. ಇದರ ಮಿಗುತೆ ಹಣದಲ್ಲೇ ಇಂತಹ ಅದ್ದೂರಿ ಸಮ್ಮೇಳನ ನಡೆಸಲಾಗುತ್ತಿದೆ.”(ಪ್ರಶಾಂತ್);
  • ಡಾ. ವಿನಯಾ ಒಕ್ಕುಂದ
    ಡಾ. ವಿನಯಾ ಒಕ್ಕುಂದ

ಜೀವ ಎರಡು: ಆರ್.ವಿ.ಭಂಡಾರಿ- ರಹಮತ್ ತರಿಕೆರೆ

ಜೀವ ಎರಡು: ಆರ್.ವಿ.ಭಂಡಾರಿ
೮೦ರ ದಶಕ. ಬಂಡಾಯ ಸಾಹಿತ್ಯ ಚಳುವಳಿಯ ಸಮ್ಮೇಳನಗಳು ನಡೆಯುತ್ತಿದ್ದವು. ಯುವಕರಾಗಿದ್ದ ನಾವು ಹೆಗಲಿಗೊಂದು ಬ್ಯಾಗು ನೇತುಹಾಕಿಕೊಂಡು, ಅದರಲ್ಲಿ ಒಂದು ಜತೆ ಬಟ್ಟೆ ತುರುಕಿಕೊಂಡು, ಕರ್ನಾಟಕದ ಯಾವುದೊ ಒಂದು ಮೂಲೆಯ ಊರಿಗೆ ಹೋಗುತ್ತಿದ್ದೆವು. ಆಗ ತಪ್ಪದೆ ಕಾಣಿಸುತ್ತಿದ್ದ ಮುಖಗಳಲ್ಲಿ ಭಂಡಾರಿಯವರದೂ ಒಂದು. ಸಾಮಾನ್ಯವಾಗಿ ಛತ್ರಗಳಲ್ಲಿ ಸಮ್ಮೇಳನ ನಡೆಯುತ್ತಿತ್ತು. ಅಲ್ಲೇ ವಸತಿ. ಬೆಳಿಗ್ಗೆ ಎದ್ದು, ಕೈಲಿ ಬ್ರಶ್ಶು ಹಿಡಿದು ಟೂತ್‌ಪೇಸ್ಟಿಗಾಗಿ ಭಂಡಾರಿ ಇರುವ ರೂಮಿಗೆ ದಾಳಿ ಇಡುತ್ತಿದ್ದೆವು. ಹೆಸರಿಗೆ ತಕ್ಕಂತೆ ಅವರ ಚೀಲ ಅನೇಕ ವಸ್ತುಗಳ ಭಂಡಾರವೇ. ಸಣ್ಣಗಾತ್ರದ ಸೋಪುಗಳು, ಕರಪತ್ರ, ಪುಸ್ತಕ, ಚಾಕಲೇಟು, ಹೆಚ್ಚಿನ ಪೆನ್ನುಗಳು, ಅಡಕೆ ಇತ್ಯಾದಿ ಬಹೂಪಯೋಗಿ ವಸ್ತುಗಳು ಅದರಲ್ಲಿ ಇರುತ್ತಿದ್ದವು. ಅವರಲ್ಲಿಗೆ ಹೋದರೆ, ಹಿಡಿದವರ ಬ್ರಶ್ಶುಗಳಿಗೆ ತಮ್ಮಲ್ಲಿದ್ದ ಪೇಸ್ಟನ್ನು ಮಕ್ಕಳಿಗೆ ಬೆಲ್ಲಹಂಚುವಂತೆ ಹಂಚುವ ಭಂಡಾರಿಯವರು ಇರುತ್ತಿದ್ದರು. ಪೇಸ್ಟ್ ಕೊಟ್ಟಮೇಲೆ ಮೆಲ್ಲಗೆ ಕೇಳುತ್ತಿದ್ದರು-‘ನಿಮಗೆ ಪೌಡರು ಬೇಕಾದರೂ ಕೇಳಿ. ನನ್ನಲ್ಲಿದೆ’; ರಾತ್ರಿ ಮಲಗಿದಾಗ ಹಾಕಿಕೊಂಡ ಬಟ್ಟೆಯನ್ನು ಬದಲಿಸಿದೆ ಸೋಮಾರಿತನದಿಂದ ಓಡಾಡುವ ನಮ್ಮಲ್ಲಿ ನೀಟಾಗಿ ಶೇವ್ ಮಾಡಿ, ಜಳಕ ಮುಗಿಸಿ, ಶುಭ್ರವಸ್ತ್ರ ಧರಿಸಿ, ಗುಳಿಬಿದ್ದ ಕೆನ್ನೆಗಳಿಗೆ ಸ್ನೋ ಪೌಡರು ಹಚ್ಚಿಕೊಂಡು ಘಮಘಮಿಸುತ್ತ ಭಂಡಾರಿಯವರು ಕೀಳರಿಮೆ ಹುಟ್ಟಿಸುತ್ತಿದ್ದರು. ಅದೇನು ಶೋಕಿಯಲ್ಲ. ಶಾಲಾ ಮಾಸ್ತರರಾಗಿದ್ದ ಅವರ ಶಿಸ್ತೊ, ಚರ್ಮ ಸುಕ್ಕಾಗಿ ಬಿಗಿತ ಮಾಡುತ್ತಿದ್ದುದ್ದಕ್ಕೆ ಹಾಗೆ ಮಾಡುತ್ತಿದ್ದರೊ ಗೊತ್ತಿಲ್ಲ.

ಹೊನ್ನಾವರದಿಂದ ಪೂರ್ವಕ್ಕೆ ಹತ್ತು ಹದಿನೈದು ಮೈಲಿ ಪಶ್ಚಿಮಘಟ್ಟಗಳಲ್ಲಿ ನುಸುಳಿ ಹೋದರೆ, ಅಲ್ಲಿ ಕರೆಕೋಣ ಎಂಬ ಊರು ಸಿಗುತ್ತದೆ. ಅದು ಭಂಡಾರಿಯವರಿದ್ದ ಜಾಗ. ಅಲ್ಲಿಂದ
ನಾಲ್ಕಾರು ಬಸ್ಸು ಬದಲಿಸಿ, ಶಾಲೆಗೆ ರಜೆ ಹಾಕಿ ಭಂಡಾರಿಯವರು ಉತ್ತರಕರ್ನಾಟಕದ ಯಾವುದೊ ಪುಟ್ಟ ಊರಿಗೆ ಸಮ್ಮೇಳನಕ್ಕೆಂದು ಬರುತ್ತಿದ್ದರು. ಅವರದೂ ಹೊನ್ನಾವರದ ಅವಧಾನಿಯವರದೂ ಒಂದು ಜೋಡಿ. ಕೆಂಪಗೆ ಎತ್ತರಕ್ಕೆ ಮಿನುಗುವ ಮುಖದ ಕವಳ ಮೆದ್ದು ಬಾಯೆಲ್ಲ ಕೆಂಪುಮಾಡಿಕೊಂಡ ಅವಧಾನಿಯವರ ಜತೆ, ಒಣಮೀನಿನಂತೆ ಬಾಡಿದ ಬೆಳ್ಳಿಕೂದಲಿನ ಬೊಚ್ಚುಬಾಯಿಯ ಭಂಡಾರಿಯವರು. ಅವಧಾನಿಯವರು ತೀರಿಕೊಂಡ ಬಳಿಕ ಭಂಡಾರಿಯವರು ಒಬ್ಬರೇ ಬರುತ್ತಿದ್ದರು. ಉಬ್ಬಸದ ಸಮಸ್ಯೆಯಿದ್ದ ಭಂಡಾರಿಯವರಿಗೆ ನಮ್ಮ ಬಯಲುಸೀಮೆಯ ಧೂಳು ಬಿಸಿಲು ಸೆಖೆ ಆಗುತ್ತಿರಲಿಲ್ಲ. ಉಸಿರಾಡಲು ಕಷ್ಟಪಡುತ್ತ, ಸಭಾಂಗಣದ ಒಂದು ಮೂಲೆಯಲ್ಲಿ ಕುಳಿತು ವಿದ್ಯಾರ್ಥಿಯಂತೆ ಭಾಷಣಗಳ ನೋಟ್ಸ್ ಮಾಡುತ್ತಿದ್ದರು. ಕಿರಿಯರು ಭಾಷಣ ಮಾಡಿದರೆ, ಚೆಂದವಾಯ್ತು ಮಾತು ಎಂದು ಹೆಗಲಮೇಲೆ ಕೈಹಾಕಿ ಕಣ್ಣಲ್ಲಿ ಹೊಳಪನ್ನು ಹೊಳೆಸುತ್ತಿದ್ದರು.

ನಮ್ಮಂತಹ ಚಿಕ್ಕವರು ಎಲ್ಲಿಯಾದರೂ ಒಂದು ಲೇಖನ ಪ್ರಕಟಿಸಿದರೆ, ಕೂಡಲೇ ತಿಳಿನೀಲಿ ಇಂಕಿನಲ್ಲಿ ಗೀಚುಬಾಚಾಗಿ ಬರೆದ ಅಕ್ಷರಗಳ ನಸುಹಳದಿ ಬಣ್ಣದ ಒಂದು ಪೋಸ್ಟ್ ಕಾರ್ಡು ತಪ್ಪದೆ ಬರುತ್ತಿತ್ತು. ಅದರಲ್ಲಿ ಅವರ ಮೆಚ್ಚಿಕೆಯೊ ಭಿನ್ನಮತವಿದ್ದರೆ ವಿಮರ್ಶೆಯೊ ಇರುತ್ತಿತ್ತು. ತಮ್ಮ ಕಾರ್ಡು ಪ್ರತಿಕ್ರಿಯೆಗಳಿಂದ ನಾಡಿನ ಬಹುತೇಕ ಲೇಖಕರ ಜತೆ ಕಾಡಮೂಲೆಯಲ್ಲಿದ್ದ ಭಂಡಾರಿಯವರು ಸಂಪರ್ಕ ಇರಿಸಿಕೊಂಡಿದ್ದರು.

ಆ ಪುಟ್ಟಹಳ್ಳಿಯಲ್ಲಿದ್ದ ಭಂಡಾರಿಯವರು, ಜ್ಞಾನದಾಹಿ. ಎಲ್ಲೆಲ್ಲಿಂದಲೋ ಪುಸ್ತಕ ತರಿಸಿ ಓದುತ್ತಿದ್ದರು. ಅಲ್ಲಿದ್ದೇ ಪಿಎಚ್‌ಡಿ, ಮಾಡಿದರು. ನಿರಂಜನ ಅವರ ಪ್ರಿಯ ಲೇಖಕ. ವರ್ಗಸಂಘರ್ಷ ಅವರಿಗೆ ಪ್ರಿಯವಾದ ಪರಿಕಲ್ಪನೆ. ಕ್ಷೌರಿಕವೃತ್ತಿಯಿಂದ ಬಂದಿದ್ದ ಭಂಡಾರಿಯವರು, ಜಾತಿವ್ಯವಸ್ಥೆಯ ಅಪಮಾನ ಉಂಡವರು. ಹೀಗಾಗಿ ಯಾರಾದರೂ ಅಸಮಾನತೆ ಪ್ರತಿಪಾದಿಸುವ ಚಿಂತನೆಗಳನ್ನು ರೊಮ್ಯಾಂಟಿಸೈಜ್ ಮಾಡಿದರೆ, ಗತಕಾಲವನ್ನು ವೈಭವೀಕರಿಸಿದರೆ, ಅವರಿಗೆ ರುಮ್ಮನೆ ಕೋಪ ಬರುತ್ತಿತ್ತು. ‘ಹೌದು ಸ್ವಾಮಿ, ನಿಮ್ಮ ಭವ್ಯ ಸಂಸ್ಕೃತಿಯಲ್ಲಿ ನನ್ನಪ್ಪನೂ ನಾನೂ ಪೊಂಯ್ಞ್ ಎಂದು ವಾಲಗ ಊದಿಕೊಂಡು ಇದ್ದೆವು’ ಎಂದು ಜಗಳಕ್ಕೆ ಹೋಗುತ್ತಿದ್ದರು. ತಮಗೆ ಒಪ್ಪಿಗೆಯಾಗದ ವಿಚಾರವಿದ್ದರೆ ಅವರ ಭಿನ್ನಮತದ ಪ್ರತಿಕ್ರಿಯೆ ಪ್ರಕಟವಾಗುತ್ತಿತ್ತು. ಅಂಕೋಲೆಯ ವಿಷ್ಣುನಾಯಕರು ಕೆಲವು ವರ್ಷಗಳ ಹಿಂದೆ ‘ಸಕಾಲ’ ಎಂಬ ಪತ್ರಿಕೆ ಹೊರಡಿಸುತ್ತಿದ್ದರು. ಅದರಲ್ಲಿ ಭಂಡಾರಿಯವರು ಸ್ಥಳೀಯರ ಜತೆ ತಾತ್ವಿಕವಾಗಿ ಜಗಳ ಮಾಡುವ ಇಂತಹ ಪತ್ರಗಳು ಲೇಖನಗಳು ಇರುತ್ತಿದ್ದವು. ಎರಡು ಮೂರು ತಿಂಗಳ ಕದನ. ಒಮ್ಮೆ ಭಂಡಾರಿಯವರಿಗೆ ಕೇಳಿದೆ. ‘ನಿಮಗೆ ಸುಸ್ತಾಗೋಲ್ಲವೇ?’ ಎಂದು. ‘ಅಲ್ಲ, ಮಾರಾಯರೆ ಅಂವ್ಞ ಹೀಗೆ ಬರೆಯುವುದಾ? ಅವನು ನನ್ನ ಗೆಳೆಯನೇ. ಒಳ್ಳೆಯ ವ್ಯಕ್ತಿ. ಆದರೆ ಅವನ ಚಿಂತನೆ ಸರಿಯಿಲ್ಲ. ಅದಕ್ಕೆ ವಾದ ಮಾಡುವೆ’ ಎನ್ನುವರು. ತಾಳಮದ್ದಲೆಯ ಕಲಾವಿದರಾಗಿದ್ದ ಭಂಡಾರಿಯವರಲ್ಲಿ ವಿಚಿತ್ರ ಜಿಗುಟುತನವಿತ್ತು. ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡುವ ಜಾಯಮಾನವಿರಲಿಲ್ಲ. ಇಂತಹ ಭಂಡಾರಿಯವರ ಉಬ್ಬಸದ ದಾಳಿಗೆ ಸೋತುಹೋದರು. ಕಳೆದ ಒಂದು ವರ್ಷದಿಂದ ನೋವುಣ್ಣುತ್ತಿದ್ದ ಅವರು, ಜೀವ ಸಾಕಾಗಿ, ಕಳೆದ ತಿಂಗಳು ಕಣ್ಮುಚ್ಚಿದರು. ಸದಾ ವರ್ಗಸಂಘರ್ಷದ ಬಗ್ಗೆ ಮಾತಾಡುತ್ತಿದ್ದ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕಣ್ಮುಚ್ಚಿದುದು ಒಂದು ವ್ಯಂಗ್ಯವೊ ಏನೊ?

ಆರ್.ವಿ.ಭಂಡಾರಿ ಉತ್ತರಕನ್ನಡ ಜಿಲ್ಲೆಯ ಬಹುತೇಕ ಬರೆಹಗಾರರು-ಗೌರೀಶಕಾಯ್ಕಿಣಿ, ವಿಷ್ಣುನಾಯಕ, ಸು.ರಂ.ಎಕ್ಕುಂಡಿ ಮುಂತಾದವರು ಶಿಕ್ಷಕರು. ಇವರೆಲ್ಲ ಬರೆಹಗಾರರು ಮಾತ್ರವಲ್ಲ, ತಮ್ಮ ಭಾಗದ ವೈಚಾರಿಕ ಚಳುವಳಿಗಳಲ್ಲಿ ಭಾಗವಹಿಸಿದವರು. ದಿನಕರ ದೇಸಾಯಿಯವರ ಸಂಗಾತಿಯಾಗಿದ್ದ, ಅಂಕೋಲೆಯ ಪ್ರಸಿದ್ಧ ಭೂಹೋರಾಟಗಳ ಹೀರೋ ಆಗಿದ್ದ ಪಿಕಳೆಯವರೂ ಒಬ್ಬ ಮಾಸ್ತರರು. ಇಂತಹ ಪರಂಪರೆಯಲ್ಲಿ ಬಂದ ಭಂಡಾರಿಯವರು ಬರೆದಿದ್ದು ಬಹಳವಿಲ್ಲ. ಅದು ಕನ್ನಡದ ದೊಡ್ಡ ಬರೆಹ ಹೌದೊ ಅಲ್ಲವೊ ಬೇರೆ ಪ್ರಶ್ನೆ. ಆದರೆ ಅವುಗಳಲ್ಲಿ ಮಿಡಿದ ಮನಸ್ಸು ಮಾತ್ರ ಮಾನವೀಯತೆಯದು. ತಾಯ್ತನದ್ದು.

ಕೆರೆಕೋಣಕ್ಕೆ ಹೋಗುತ್ತಿದ್ದ ಗೆಳೆಯರನ್ನು ಭಂಡಾರಿಯವರು, ಹತ್ತಿರದ ಕರಿಕಾಲಮ್ಮನ ಗುಡ್ಡಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿಂದ ಸೂರ್ಯ ಕೆಂಪಗೆ ಕಡಲಲ್ಲಿ ಮುಳುಗುವುದು ಕಾಣುವುದು. ಸಮುದ್ರ ಕಾದಗಾಜಿನ ರಸದಂತೆ ಥಳಥಳ ಹೊಳೆಯುತ್ತಿರುವ ಅರಬ್ಬಿ ಕಡಲಿಗೆ, ಘಟ್ಟಗಳಲ್ಲಿ ಎಲ್ಲೋ ಹುಟ್ಟಿ ಯಕ್ಷಗಾನದ ಬಣ್ಣವೇಷದವರಂತೆ ಕುಣಿದು ಕುಪ್ಪಳಿಸಿದ ನದಿಯು ದಣಿದುಬಂದು ಅಸಹಾಯಕವಾಗಿ ಮಿಂಚಿನ ಬಾಲದಂತೆ ಸೇರುವುದು. ಅದನ್ನು ಭಂಡಾರಿಯವರು ‘ಕಾಣಿ, ನದಿ ಕಡಲನ್ನು ಸೇರುವದು’ ಎಂದು ಮಕ್ಕಳಂತೆ ಉತ್ಸಾಹದಿಂದ ತೋರುವರು. ನನಗೆ ಅವರು ಮಕ್ಕಳಿಗಾಗಿ ಬರೆದ ಸಾಹಿತ್ಯವೇ ಇಷ್ಟ. ಅದರಲ್ಲಿ ಅವರ ಮಗುವಿನಿಂತಹ ಮನಸ್ಸು ಇದೆ. ಸಮಾಜವನ್ನು ಬರೆಹದಿಂದಲೂ ನೈತಿಕವಾಗಿ ತಿದ್ದಬಹುದು ಎಂಬ ಕನಸು ಇದೆ.
ಪುಟದ ಮೊದಲಿಗೆ
 
Votes:  3     Rating: 5    

 Sunanda Kadime Bhandariyavarannu kurithu tumbhaa bhavapoornavaagi barediddhare, Rahamath Tarikereyavara baraha aapthavagiddukondoo Bhandariyavara jeevana, siddhantha, avara jeevana shaili haagu avara hinneleyannu sundaravaagi niroopisutthadhe. Elli vyakthi chitragalu prakatavadharu avannu kuthoohaladindha odhuva nanage Ponnammal haagu Bhandari ibbaroo nanna smaraneya khajaneyolage hosadaagi serikondaru ennisidhe. Thanks Kendasampige....
 Moulyayutha baalannu baalida eradu hirijeevagala nenapu, parichaya sundaravaagithu. R,V.Bhandariyavarige karnataka Sahitya Academiya 2005 ra Gourava prashasthi praapthavadaga avrnnu kandu, avara pustakagalannu padeva bhagya odagithu.--Shyamala....
 Tumba Chennagi Baredidiri Nenapugala Nenapugalu,.,.,,.,.,.,.,., Ismail Mk Shivamogga(UAE)...
 ಸಾರ್, ನಮ್ಮಿಂದ ಕಣ್ಮರೆಯಾದ ಎರಡು ಜೀವಗಳ ಕುರಿತು ತುಂಬ ಸೂಕ್ಷ್ಮವಾಗಿ ಅವರ ವ್ಯಕ್ತಿತ್ವದ ವಿಶಿಷ್ಟತೆ ಮತ್ತು ಮಿತಿಗಳನ್ನು ವಿವೇಚಿಸಿದ ಬರೆಹ ತುಂಬ ಆಪ್ತವಾಗಿದೆ. ವದಂನೆಗಳು...
 'ಎರಡು ಜೀವ'ಗಳ ವ್ಯಕ್ತಿ ಚಿತ್ರವನ್ನು ಇಲ್ಲಿ ಜೀವ೦ತ ಇಟ್ಟಿದ್ದೀರಿ.ಪೊನ್ನಮ್ಮಾಳರನ್ನು ಹಲವು ವರ್ಷಗಳ ಹಿ೦ದೆ ನೀನಾಸ೦ ಶಿಬಿರದಲ್ಲಿ ಭೇಟಿಯಾಗುವ ಆಪ್ತ ಕ್ಷಣ ನನಗೆ ಒದಗಿಬ೦ದಿತ್ತು.ಬಹಳ ಹೊತ್ತು ಅವರ ಕೈ ಹಿಡಿದು ಜೊತೆಗೇ ಕುಳಿತಿದ್ದೆ.ತಾಯ್ತನದ ಸ್ಪರ್ಶ.....
 ರಹಮತ್ ತುಂಬಾ ಚೆನ್ನಾಗಿ ಬರೆದಿದೀರಿ. ಪೊನ್ನಮ್ಮಾಳ್ ಅವರನ್ನು ಒಂದೆರಡು ಸಲ ಭೇಟಿಯಾಗಿದ್ದು ನೆನಪಾಯಿತು. ಭಂಡಾರಿಯವರ ಕುರಿತು ಈ ವಿವರಗಳು ನನಗೆ ತಿಳಿದಿರಲಿಲ್ಲ.ಮನಕಲಕುವಂತಿದೆ. ಥ್ಯಾಂಕ್ಸ್ ಕೆಂಡಸಂಪಿಗೆ. -ಸುಮಿತ್ರಾ....
 ಎರಡು ಹಿರಿಯ ಜೀವಗಳ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದೀರಿ. ಓದುತ್ತಾ ಕಣ್ಣಲ್ಲಿ ನೀರು ಬಂತು. -ಇಸ್ಮಾಯಿಲ್...

ಆರ್ ವಿ ಭಂಡಾರಿ ಹುಟ್ಟಿದ ದಿನ : ಸುನಂದಾ ಕಡಮೆ ನೆನಪುಗಳು

ಆರ್ ವಿ ಭಂಡಾರಿ ಹುಟ್ಟಿದ ದಿನ : ಸುನಂದಾ ಕಡಮೆ ನೆನಪುಗಳು    
ಸುನಂದಾ ಪ್ರಕಾಶ ಕಡಮೆ
ಮಂಗಳವಾರ, 5 ಮೇ 2009 (08:59 IST)
ಆರ್ ವಿ ಭಂಡಾರಿ
ಬಂಡಾಯ ಸಂಘಟನೆಯ ಮುಂಚೂಣಿಯಲ್ಲಿದ್ದ ಡಾ. ಆರ್‍.ವಿ ಭಂಡಾರಿಯವರು ಉತ್ತರಕನ್ನಡದ ಹೊನ್ನಾವರ ತಾಲೂಕಿನ ಅರೆಅಂಗಡಿಯಲ್ಲಿ ೧೯೩೫ ಮೇ ೫ ರಂದು ಜನಿಸಿದ್ದು. ಅವರ ಹುಟ್ಟು ಹಬ್ಬದ ನಿಮಿತ್ತ ಈ ಲೇಖನ.
ನಮ್ಮ ಉತ್ತರ ಕನ್ನಡದ ಹಿರಿಯ ಚೇತನ ಆರ್.ವಿ ಭಂಡಾರಿಯವರನ್ನು ಸಾಹಿತ್ಯ ಮತ್ತು ಸಾಮಾಜಿಕ ಲೋಕವು ಕಾಮ್ರೆಡ್ ಅಂದಿತು. ನಿಷ್ಠುರ ಸಮಾಜವಾದಿ ಅಂದಿತು. ವೈಚಾರಿಕತೆಯ ಹರಿಕಾರ ಅಂದಿತು. ದಲಿತ ಬಂಡಾಯ ಚಳುವಳಿಯ ಹಿರೀಕ ಅಂದಿತು. ತಾತ್ವಿಕತೆಯ ಕಠಿಣ ಚಿಂತಕ ಅಂದಿತು. ಕ್ರಾಂತಿಕಾರಿ ಹೋರಾಟಗಾರ ಅಂತೆಲ್ಲ ಏನೇನೋ ಅಂದಿತು. ಆದರೆ ನನ್ನ ಪಾಲಿಗೆ ಮಾತ್ರ ಅವರೊಬ್ಬ ಸಂವೇದನಾಶೀಲ ವಾತ್ಸಲ್ಯಮಯಿ ಸಾಕ್ಷಾತ್ ತಂದೆಯ ಸ್ಥಾನದಲ್ಲಿದ್ದವರು. ಹೆತ್ತರಷ್ಟೇ ತಂದೆಯಲ್ಲ, ಅಕ್ಷರ ಕಲಿಸಿದರಷ್ಟೇ ಗುರುವಲ್ಲ. ಅಂಥದೊಂದು ಸಾಧ್ಯಂತ ಅಂತರ್‌ದೃಷ್ಟಿ ಕಾಳಜಿ ಅಂತಃಕರಣಗಳನ್ನು ಎರೆದು ಪೋಷಿಸಿದವರೆಲ್ಲ ಆ ಜಾಗವನ್ನು ಭದ್ರವಾಗಿ ತುಂಬುವವರೇ. ಹಾಗೆ ಪ್ರಮುಖ ಸಾಲಲ್ಲಿ ನಿಲ್ಲುವ ನನ್ನ ಸಾಹಿತ್ಯಕ ಗುರು ಆರ್‍ವಿ ಭಂಡಾರಿಯವರು ಹುಟ್ಟಿದ ದಿನ ಇಂದು. ಶ್ರೇಷ್ಠ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿ ಮಾತ್ರ ನನ್ನನ್ನಾವರಿಸಿದ್ದ ಆರ್‍ವಿಯವರು ಎಲ್ಲ ಶೋಷಿತ ಸಮುದಾಯಗಳ ಒಳಸಂಕಟಗಳನ್ನು ಮಾತುಗಳಲ್ಲಿ ವರ್ತನೆಯಲ್ಲಿ ಬರಹಗಳಲ್ಲಿ ಮೊಗೆಮೊಗೆದು ಕೊಟ್ಟವರು. 

೧೯೮೮ ರ ನನ್ನ ಮದುವೆಯ ನಂತರ ಪ್ರಕಾಶ್‌ನ ಸಾಹಿತ್ಯಕ ವಲಯದಲ್ಲಿ ಪರಿಚಯವಾದ ಆರ್‍ವಿ, ಮೊದಲ ಭೇಟಿಯಿಂದಲೇ ಮನಸ್ಸಿನಲ್ಲಿ ನಿಂತರು. ಅವರ ಬೆಳ್ಳಿ ಕೂದಲ ಸೌಸ್ಟವ, ಯಕ್ಷಗಾನ ಕಲೆಗೆ ಒಗ್ಗುವಂಥ ಚೂಪು ಮುಖಚರ್ಯೆ, ಮುಖಕ್ಕೆ ಚೂರು ದೊಡ್ಡದೇ ಅನ್ನಿಸುವ ಸದಾ ಮೂಗಿನಿಂದ ಮೇಲೇರಿಸಿಕೊಳ್ಳುವ ಚಾಳೀಸು, ಕೈಯಲ್ಲೆರಡು ಪುಸ್ತಕಗಳು, ತಿಳಿ ಬಣ್ಣದ ಖಾದಿ ಕುರ್ತಾ, ಬಿಳಿಯ ಪಾಯಿಜಾಮಾದಲ್ಲಿ ಆಪ್ತವೆನ್ನಿಸುವ ಸಪೂರ ನಿಲುವಿನ ಆರ್‍ವಿ ಭಂಡಾರಿ ನನ್ನ ಮೊದಲ ಪರಿಮಿತ ಓದಿನ ಅರಿವಿಗೊಂದು ಸಮಾಜವಾದಿ ವಾಸ್ತವದ ಪರಿಕಲ್ಪನೆ ಒದಗಿಸಿದವರು. ಒಮ್ಮೆ ಕಂಡು ಮಾತಾಡಿದವರನ್ನು ತಮ್ಮ ಅತ್ಯಂತ ಸಹಜವಾದ ಕಕ್ಕುಲಾತಿಯ ಮಾಯಾ ಸ್ಪರ್ಶದಿಂದ ತನ್ನೆಡೆಗೆ ಸೆಳೆಯುವ ಆಳವಾದ ಸಾಮರ್ಥ್ಯ ಅವರ ಘನ ವ್ಯಕ್ತಿತ್ವಕ್ಕಿತ್ತು. ‘ಬದುಕನ್ನು ಅರಿತಂತೆ ಅರ್ಥ ಮಾಡಿಕೊಂಡಂತೆ ಬರೆ, ಆಶಯ ಉದ್ದೇಶ ಪ್ರಾಮಾಣಿಕವಾಗಿದ್ದರಾಯ್ತು’ ಎಂದೇ ಉತ್ಸಾಹ ತುಂಬುವ ಆರ್‍ವಿಯವರು, ಸ್ತ್ರೀವಾದ ಬಂಡಾಯ ಅಂತೆಲ್ಲ ಎಂದೂ ನನ್ನನ್ನು ಪ್ರೇರೇಪಿಸಿದವರಲ್ಲ. 

ಯಾವುದೇ ಬರಹ ಎಲ್ಲೇ ಪ್ರಕಟವಾದರೂ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಭಂಡಾರಿಯವರ ಆತ್ಮೀಯವೂ ಮೌಲಿಕವೂ ಆದ ಅಂಚೆ ಕಾರ್ಡೋಂದು ಹಾಜರಾಗುತ್ತಿತ್ತು. ಇಂಕು ಪೆನ್ನಿನಿಂದಲೇ ಬರೆದ ಸಣ್ಣ ಗೀಚು ಅಕ್ಷರ, ನನ್ನ ಬರಹದ ಜೀವದನಿಯಂತಿರುವ ಒಂದೆರಡೇ ಸಾಲು, ಮಳೆಗಾಲವಾಗಿದ್ದರೆ, ಒಂದೆರಡು ಮಳೆಹನಿಗೆ ಒದ್ದೆಯಾಗಿ ಹರಡಿಕೊಂಡ ಅಲ್ಲಿಯ ಪದಗಳು. ಅಂಥ ಇಪ್ಪತ್ತಾರು ಪತ್ರಗಳು ಅವರ ಜೀವದುಸಿರಂತೆ ಇಂದು ನನ್ನ ಕಡತಗಳ ಮಡಿಲಲ್ಲಿ ಜೀವಂತವಾಗಿವೆ. ಬೀದರ್ ಸಾಹಿತ್ಯ ಸಮ್ಮೇಳನ ಮುಗಿಸಿ ವಾಪಸ್ಸಾಗುವ ದಾರಿಯಲ್ಲಿ, ಬಿರುಬೇಸಿಗೆಯ ಮಧ್ಯಾಹ್ನದ ದಿನವೊಂದರಲ್ಲಿ ಆರ್‌ವಿ ಯವರು, ಜಿಲ್ಲೆಯ ಇನ್ನೊಬ್ಬ ಹಿರಿಯ ಆಪ್ತಬಂಧು ವಿಷ್ಣು ನಾಯ್ಕರು ಮತ್ತು ಮಗ ವಿಠ್ಠಲನ ಜೊತೆ ನಮ್ಮ ಹುಬ್ಬಳ್ಳಿಯ ಮನೆಗೆ ಬಂದರು. ನನಗಂತೂ ಬದುಕಿನ ಹಲವು ಸಂಭ್ರಮದ ದಿನಗಳಲ್ಲಿ ಇದೂ ಒಂದು. ಅಂದು ನನ್ನದು ತರಕಾರೀ ಅಡಿಗೆ. ಆರ್‌ವಿಯವರಿಗೆ ಕೋಳಿ ಸಾರೆಂದರೆ ಇಷ್ಟದ ಊಟವೆಂದು ಕೇಳಿದ್ದೆ. ಅದನ್ನು ಮಾಡಿ ಬಡಿಸುವ ಹಂಬಲದಿಂದ ‘ಉಳಿಯಿರಿ ಸರ್, ನಾಲ್ಕು ದಿನದ ನಂತರ ಸಿರಸಿಯ ಬಸ್ಸು ಹತ್ತಿಸುವೆ’ ಅಂತ ಒತ್ತಾಯಪೂರ್ವಕವಾಗಿಯೇ ಅಂದಿದ್ದೆ. ಕಣ್ಣಲ್ಲಿ ಅದೇ ಮೋದ, ಶಾಂತಚಿತ್ತ, ಮಿದು ಹೂವಂಥ ತೀಕ್ಷ್ಣ ಸ್ವರದಲ್ಲಿ ‘ಇನ್ನೊಮ್ಮೆ ಬರುವೆ’ ಅಂದಿದ್ದರು.

ನಾನು ಹಾಗೂ ಪ್ರಕಾಶ್, ಎಷ್ಟೋ ಸಲ ನಮಗೆ ಆಮಂತ್ರಣವಿಲ್ಲದ ಸಾಹಿತ್ಯ ಕಾರ್ಯಕ್ರಮಗಳಿಗೆಲ್ಲ ಉಪಸ್ಥಿತರಿರುತ್ತಿದ್ದ ಸಂದರ್ಭದಲ್ಲಿ ಆರ್‍ವಿಯವರು ಹತ್ತಿರ ಸರಿದು ನಿಂತು ‘ಇದೇ ನಿಜವಾದ ಸಾಹಿತ್ಯ ಪ್ರೀತಿ’ ಅಂತ ಮೆಲುದನಿಯಲ್ಲಿ ಪಿಸುಗುಟ್ಟಿ ನಸುನಗುತ್ತಿದ್ದರು. ಕಾರ್ಯಕ್ರಮಗಳಲ್ಲಿ ಭೇಟಿಯಾದಾಗಲೆಲ್ಲ ಕನಿಷ್ಠ ಹತ್ತು ನಿಮಿಷವಾದರೂ ಮಾತಾಡದೇ ಅವಸರದಲ್ಲಿ ಎದ್ದು ಬಿಟ್ಟರೆ ನಮಗೆಂಥದೋ ಕಳಕೊಂಡ ತಪ್ಪಿತಸ್ಥ ಭಾವ. ಕೂಡಲೇ ಒಂದು ಪುಟ್ಟ ಪತ್ರ. ಹೀಗೆ ಜಾತಿ ಮತ ಲಿಂಗ ತಾರತಮ್ಯವಿಲ್ಲದೇ ನಮ್ಮ ಉತ್ತರಕನ್ನಡದ ಹಿರಿ-ಕಿರಿಯ ಬರಹಗಾರರದೆಲ್ಲ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಒಳಗೊಂಡೂ ಒಂದು ಸಮಗ್ರ ಕುಟುಂಬದಂತಹ ಸಂಬಂಧಗಳು. ಜಿಲ್ಲಾ ಸಮ್ಮೇಳನವೊಂದರಲ್ಲಿ ನಾನು ‘ಮಹಿಳೆ ಮತ್ತು ಸಾಹಿತ್ಯಾಭಿವ್ಯಕ್ತಿ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸುತ್ತಿದ್ದ ಆ ವೇಳೆಯಲ್ಲಿ ಆರ್‍ವಿಯವರು ವೇದಿಕೆಯಿಂದ ಹೊರಗಿರುವ ಪುಸ್ತಕ ಮಳಿಗೆಯಲ್ಲಿ ಕೂತಿದ್ದು, ನನ್ನ ಲೇಖನವನ್ನು ಆಲಿಸಲಾಗಲಿಲ್ಲವೆಂಬ ಕಾರಣಕ್ಕೆ ಆನಂತರ ಅವರು ನನಗೆ ಎರಡು ಪತ್ರಗಳನ್ನು ಬರೆದು ಕೇವಲ ಓದುವುದಕ್ಕಾಗಿ ಅದನ್ನು ತರಿಸಿಕೊಂಡಿದ್ದರು. ತಲುಪಿದ ತಕ್ಷಣ ಮರುಟಪಾಲಿಗೊಂದು ಚುಟುಕಾದ ಅನಿಸಿಕೆ. ‘ನಿನ್ನ ಯೋಚನೆಗಳು (ಥಿಂಕಿಂಗ್ಸ್) ಸರಿಯಾದ ದಾರಿಯಲ್ಲಿವೆ, ಅಚ್ಚರಿಯ ಜೊತೆ ಸಂತೋಷವೂ ಆಯಿತು’ ಹೀಗೆ ಅದೇಕೋ ನನ್ನ ಬರಹಗಳೆಂದರೆ ಆರ್‍ವಿಯವರಿಗೆ ಒಂದು ವಿಶೇಷ ಪ್ರೀತಿಯಿತ್ತು ಕಾಳಜಿಯಿತ್ತು. 

‘ನನ್ನನ್ನು ಗುಂಪಿನಲ್ಲಿ ಗುರ್ತು ಹಿಡಿಯೋದು ಸುಲಭ ನೋಡಿ, ಈ ಬೆಳ್ಳಿ ಕೂದಲ ಭಾಗ್ಯದಿಂದ’ ಎಂದು ಯಾವುದೇ ಅಹಮಿಕೆಯಿಲ್ಲದೇ ಮುಗ್ಧ ಮುಕ್ತ ಮನಸ್ಸಿನಿಂದ ಹರಟುವ ಆರ್‍ವಿಯವರ ಭಾಷಣಗಳೆಂದರೆ ಜಿಲ್ಲೆಯ ಕಿರಿಯರಿಗೆ ಅಚ್ಚುಮೆಚ್ಚು. ಯಾಕೆಂದರೆ ಅಲ್ಲಿ ಯಾವುದೇ ಆಟಾಟೋಪವಿಲ್ಲದೇ ಸುಳಿದು ಬರುವ ತಾಜಾ ಆಗಿರುವ- ಪಳದಿ, ಕೋಳಿಸಂಡಿಗೆ, ಗುಳ್ಳೆ, ಸೋಗು, ದಂಡು, ಬೆಪ್ಪುತಕ್ಕಡಿ, ಹರಿಗೋಲು, ಹುಬೇಹೂಬು, ನದರು, ಗೋಣಿಚೀಲ ಮುಂತಾದ ಅಪ್ಪಟ ನೆಲದ ಭಾಷೆ ಹಾಗೂ ದೇಶೀ ನುಡಿಗಟ್ಟುಗಳೇ ಕಾರಣ. ಒಂದು ಹೊಸ ಸಿದ್ಧಾಂತ, ಹೊಸ ನೋಟವನ್ನು ಸೀಳಿ ತೋರಿಸುವ ಹೊಸ ವರಸೆ ಆರ್‍ವಿಯವರ ಭಾಷಣದ ವೈಶಿಷ್ಟ್ಯ. ತಮ್ಮ ‘ಬಿರುಗಾಳಿ’ ‘ಹದ್ದುಗಳು’ ಕೃತಿಗಳನ್ನು ಮಗಳಂತಿರುವ ನನಗೆ ‘ಗೌರವಪೂರ್ವಕ’ ಅಂತ ಬರೆದು ಸಹಿ ಹಾಕಿ ಕೊಟ್ಟಾಗ ಮಾತ್ರ ನಾನು ಸಿಡುಕಿ ಬಿಟ್ಟಿದ್ದೆ. ಅದಕ್ಕವರು ‘ಯಾಕೆ? ಕಿರಿಯರೆಂದ ಮಾತ್ರಕ್ಕೆ ಗೌರವ ತೊಗೊಳ್ಳಲು ಯೋಗ್ಯರಲ್ಲವೇ’ ಅಂತ ಸಮಾಧಾನಚಿತ್ತರಾಗಿ ಅದೇ ಆರ್ದ್ರಭಾವ ತುಂಬಿ ನುಡಿದಿದ್ದರು.  

ಕಾಡಿನ ಕವಿ ಕುವೆಂಪು ಸಾಹಿತ್ಯ ಸಮೀಕ್ಷೆಯನ್ನು ಸಹೃದಯರ ಮನಸ್ಸಿಗೆ ನೀಡಿದ ಭಂಡಾರಿಯವರು, ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷವೆಂಬ ಚಿಂತನಶೀಲ ಸಂಕಥನವನ್ನು ಸೃಷ್ಟಿಸಿದರು. ‘ಕಣ್ಣೇ ಕಟ್ಟೆ ಗಾಡೇ ಗೂಡೇ’ ಮುಂತಾದ ಕವನ ಸಂಕಲನಗಳಲ್ಲಿ ಅವರು ಕವಿಯಾಗಿ ಹೆಸರು ಮಾಡಿದ್ದರೂ ಒಂದು ಝಲಕ್ ನಂತೆ ಮಿಂಚಿ ಮರೆಯಾಗುತ್ತಿದ್ದ ಅವರ ಕವಿತೆಗಳ್ಯಾಕೋ ವಯಕ್ತಿಕವಾಗಿ ನನಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೆ ‘ಕೋಳಿಸಂಡಿಗೆ’ ಎಂಬ ಅವರ ಕಥೆಯೇ ಒಂದು ಒಳ್ಳೆಯ ಕಾವ್ಯದ ಹೊಳಹನ್ನು ನೀಡುವಷ್ಟು ಸಾಂದ್ರವಾಗಿತ್ತು. ಮಾರ್ಕ್ಸ ವಿಚಾರಧಾರೆಯಿಂದ ಪ್ರಭಾವಿತರಾದ ಆರ್‍ವಿಯವರು ‘ಬೆಂಕಿಯ ಮಧ್ಯೆ’ ಮತ್ತು ‘ಬಿರುಗಾಳಿ’ಯೆಂಬ ಜನಪರ ನಿಲುವಿನ ಹಾಗೂ ಮಕ್ಕಳ ಕಣ್ಣುಗಳ ಮೂಲಕ ಲೋಕವನ್ನು ನೋಡುವ ಎರಡು ಅಮೂಲ್ಯ ಕಾದಂಬರಿಯನ್ನು ಹೊರತಂದವರು. ‘ಬೆಳಕಿನ ಕಡೆಗೆ’ ಎಂಬ ಮಕ್ಕಳ ನಾಟಕಗಳ ಮೂಲಕ ಮಗುವಿನ ಮಾನಸಿಕ ಸಾಮಾಜಿಕ ಜಗತ್ತನ್ನು ವಿಸ್ತರಿಸುವತ್ತ ಗಮನಹರಿಸಿದವರು. ನನ್ನ ಅರಿವಿನ ಮಿತಿಗೆ ಬಾರದ ಅವರ ಇನ್ನೂ ಹಲವು ಬರಹಗಳು ಈಗಾಗಲೇ ಪ್ರಕಟವಾಗಿದ್ದು, ಇನ್ನೂ ಕೆಲವು ಮುದ್ರಣ ಹಂತದಲ್ಲಿದ್ದು, ಅವರ ಕನಸಿನ ಕೂಸು ‘ಬಂಡಾಯ ಪ್ರಕಾಶನ’ ಮಗ ವಿಠ್ಠಲ ಸೊಸೆ ಯಮುನಾ ಮಗಳು ಮಾಧವಿ ಅವರ ಆರೈಕೆಯಲ್ಲಿ ಇನ್ನಷ್ಟು ಪುಷ್ಟಿಯನ್ನು ಪಡೆಯುತ್ತಿದೆ. 

ನಾಲ್ಕೈದು ವರ್ಷಗಳ ಕೆಳಗೆ ಮೈಸೂರು ದಸರೆಯಲ್ಲಿ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆಯ ಕುರಿತು ತಮ್ಮದೇ ಕೆಲವು ತಾತ್ವಿಕ ಚಿಂತನೆಗಳನ್ನು ಮಂಡಿಸಿದ ಆರ್‍ವಿಯವರು ಮುಖ್ಯವಾಗಿ ಅಲ್ಲಿಯ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದರು. ಆ ವಿಷಯವೊಂದು ಕೆಲ ಕಾಲದವರೆಗೆ ಬಹುಮುಖೀ ಚರ್ಚೆಗೆ ಗ್ರಾಸ ಒದಗಿಸಿತ್ತು. ಹೀಗೆ ಅವರ ಮಾತು ಮತ್ತು ಕೃತಿ ಒಂದೇ ಆಗಿತ್ತಲ್ಲದೆ, ನುಡಿದಂತೆ ನಡೆವ ಬದ್ಧತೆಯಿದ್ದು ಕೆಲವು ಆದರ್ಶದ ವಿಷಯಕ್ಕಂತೂ ಸರ್ವತಾ ಹೊಂದಾಣಿಕೆಯ ಮನೋಭಾವ ಅವರ ಸ್ವಭಾವದಲ್ಲಿರಲಿಲ್ಲ. ಆ ಸಮಯದಲ್ಲೇ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭೇಟಿಯಾದರು. ಚಾಮುಂಡೇಶ್ವರಿ ಮೆರವಣಿಗೆಯ ಕುರಿತು ಸೂಕ್ಷ್ಮವಾಗಿ ಕೇಳಿದೆ. ‘ಇನ್ನೊಬ್ಬರ ಮಾತನ್ನು ವಿಚಾರಗಳನ್ನು ಯೋಚನೆಗಳನ್ನು ಆಲಿಸುವವರ ಸಂಖ್ಯೆ ಇಂದಿನ ಕಿರಿಯರಲ್ಲಿ ವಿರಳವಾಗುತ್ತಿದೆ’ ಎಂದು ಖೇದ ತುಂಬಿದ ದನಿಯಲ್ಲಿ ಹೇಳಿ ಮುಗುಳ್ನಕ್ಕರು. ಡಾ. ಗೌರೀಶ ಕಾಯ್ಕಿಣಿಯವರಂತೆ ಚಿಂತನೆಗೆ ಹಚ್ಚುವ, ಸಂಘರ್ಷಗಳನ್ನು ಇನ್ನಷ್ಟು ಕೆದಕುವ, ಕಿಡಿಯಾಗಿ ಹೊಸ ಬೆಳಕನ್ನೇ ಮೂಡಿಸಿ ಹೊಸ ದಾರಿಗಳನ್ನೇ ಸೃಷ್ಟಿಸಿಬಿಡುವ ಆರ್‍ವಿಯವರ ಮನೋಶಕ್ತಿ ಮತ್ತು ಅವರು ಅರಳಿಸಿಟ್ಟ ಸಾಹಿತ್ಯ ವಿಸ್ತಾರ ಭೀಮಬಲದಿಂದ ಕೂಡಿದ್ದಾಗಿದೆ. 

ದರಾ ಸರ್ತಿಯಂತೆ ನನ್ನ ‘ಗಾಂಧಿ ಚಿತ್ರದ ನೋಟು’ ಕಥಾ ಸಂಕಲನದ ಪ್ರತಿಯೊಂದನ್ನು ಪ್ರತ್ಯೇಕವಾಗಿ ಆರ್‍ವಿ ಯವರ ಹೆಸರಿಗೆ ಕಳಿಸಿದ್ದೆ. ಅದೇ ದಿನ ಅವರ ಮಗಳು ನನ್ನ ಆಪ್ತ ಗೆಳತಿಯೂ ಆದ ಮಾಧವಿಯಿಂದ ದೂರವಾಣಿ ಬಂತು, ಮಾಧವಿ ತನ್ನ ತಂದೆಯನ್ನು ಅಣ್ಣ ಅಂತ ಸಂಬೋಧಿಸುತ್ತಾಳೆ. ‘ಅಣ್ಣನ ಹೆಸರಿಗೆ ಬೇರೆ ಯಾಕೆ ಕಳಿಸಿದಿ, ಅವರೀಗ ನಿನ್ನ ಪುಸ್ತಕವನ್ನು ಓದುವ ಹಂತದಲ್ಲಿಲ್ಲ’ ಎಂಬ ಎದೆಯೊಡೆವ ಸುದ್ದಿಯೊಂದನ್ನು ರವಾನಿಸಿದಳು. ನಾನು ಕಣ್ಣೀರಾಗಿ ಹೋದೆ. ಕರುಳ ಬಳ್ಳಿಯೊಂದು ಎಲ್ಲೋ ಸಡಿಲಾಗಿ ಹೋಗುತ್ತಿರುವ ಎಂಥದೋ ಅವ್ಯಕ್ತ ಸಂಕಟ, ಹಿಂಸೆ. 

ಕಳೆದ ದೀಪಾವಳಿ ಮುನ್ನಾ ದಿನ ಅಂಬಾರಕೊಡ್ಲಿನ ವಿಷ್ಣು ನಾಯ್ಕರ ಪರಿಮಳದಂಗಳದಲ್ಲಿ ಕಾವ್ಯ ಕಮ್ಮಟವೊಂದು ನಡೆಯುತ್ತಿದ್ದ ಸಂದರ್ಭದಲ್ಲೇ ಅವರ ಅಗಲಿಕೆಯ ಸುದ್ದಿ ವಿದ್ಯುತ್ ಶಾಕಿನಂತೆ ನಮ್ಮನ್ನು ತತ್ತರ ನಡುಗಿಸಿಬಿಟ್ಟಿತು. ಕೊನೆಯ ಕ್ಷಣ ಕಾಣಲಾಗಲಿಲ್ಲವೆಂಬ ದುಃಖ ಇಂದಿಗೂ ಕಾಡುತ್ತಿದೆ. ಕನ್ನಡದ ಚೈತನ್ಯ ಶಕ್ತಿ ಭಂಡಾರಿಯವರ ಆ ಮಂದಸ್ಮಿತ ನೋಟ, ಆ ಮೃದು ಮಧುರ ಸವಿನುಡಿಯ ಸನ್ನಿಧಿ, ನನ್ನ ಕಡೇ ಉಸಿರಿರುವ ತನಕ ನನ್ನೊಡಲಲ್ಲಿರುತ್ತದೆ. ನನ್ನನ್ನು ಹಾಗೂ ನನ್ನ ಬರವಣಿಗೆಯನ್ನು ಪೊರೆಯುತ್ತದೆ.
[ಆರ್ ವಿ ಭಂಡಾರಿ ಕುರಿತು ರಹಮತ್ ತರೀಕೆರೆ ಬರೆದ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ]
ಪುಟದ ಮೊದಲಿಗೆ
 
Votes:  6     Rating: 3.5    
 ಭಂಡಾರಿಯವರು ಬ್ರಾಹ್ಮಣರೂ ಅಲ್ಲ, ಬ್ರಾಹ್ಮಣ್ಯದ ಬಗ್ಗೆ ಒಲವಿದ್ದವರೂ ಅಲ್ಲ. ಹೀಗಿದ್ದರೂ ಭಂಡಾರಿಯವರ ಜನ್ಮದಿನದ ನೆಪದಲ್ಲಿ ಬ್ರಾಹ್ಮಣ್ಯದ ಬ್ರಾಹ್ಮಣರ ಚರ್ಚೆ ಏಕೆ ಈ ವೇದಿಕೆಯಲ್ಲಾಗುತ್ತಿದೆ?...
 Re:  ನಿಮಗೇಕೆ ಇದರಬಗ್ಗೆ ಹೊಟ್ಟೇಕಿಚ್ಚು? ನೀವೂ ಮಾರ್ಕ್ಸ್‌ವಾದಿ ಬ್ರಾಹ್ಮ೦ಡ್ರಾ?
 ಇಲ್ಲಿ ಪ್ರತಿಕ್ರಿಯಿಸುತ್ತಿರುವವರಲ್ಲಿ ಬಹುತೇಕರು ಬ್ರಾಹ್ಮಣಶಾಹಿ ಮನೋಭಾವದವರೆಂಬುದು ಅವರ ಧಾಟಿಯಿಂದಲೇ ಸುಸ್ಪಷ್ಟ. ಇಂತಹವರ ವಿರುದ್ಧವೇ ಭಂಡಾರಿ ರಣಕಹಳೆ ಊದಿದ್ದು....
 Re:  ಇವರೊಬ್ಬ ಜಾತಿವಾದಿಯೆ೦ದು ಈ ಪ್ರತಿಕ್ರಿಯೆಯಿ೦ದಲೇ ಗೊತ್ತಾಗುತ್ತದೆ.
 Re:  ಕಹಳೆಯನ್ನಲ್ಲದೆ ಓಲಗವನ್ನು ಊದಬೇಕಿತ್ತೆ?!!
 illin kelavara reply-gaLannu noDidare avaru pratiyobbara huLuku huDukalende KENDASAMPIGE oduttiruvantide. - RAVEE...
 Re:  ರವೀ, ನೀವು ಮಾಡಿರುವುದು ಅದನ್ನೇ!
 ಭಂಡಾರಿಯವರಿಗೆ ಪ್ರಿಯವಾದ ಕರಿಕಾನಮ್ಮನ ಗುಡ್ಡ ನಿಜಕ್ಕೂ ರುದ್ರರಮಣೀವಾದ ಕ್ಷೇತ್ರ. ಅಲ್ಲಿ ನೆಲೆಸಿರುವ ಕರಿಕಾನಪರಮೇಶ್ವರಿ ಕೆಂಡಸಂಪಿಗೆಯ ಓದುಗರೆಲ್ಲರಿಗೂ ಒಳ್ಳೆಯದ್ದನ್ನು ಮಾಡಲಿ....
 Re:  ರುದ್ರರಮಣೀಯ ಕ್ಷೇತ್ರವಾದ ಕರಿಕಾನಮ್ಮನ ಗುಡ್ಡದ ಬಗ್ಗೆ ಸಚಿತ್ರವರದಿಯನ್ನು ಕೆ೦ಡಸ೦ಪಿಗೆಗೆ ದಯವಿಟ್ಟು ಬರೆಯಿರಿ. ಓದುಗರೆಲ್ಲರೂ ಅದರಲ್ಲಿ ವಿಹರಿಸುವ೦ತಾಗಲಿ.
 ಭಂಡಾರಿಯವರ ಬಗ್ಗೆ ಕೇಳಿ ಮತ್ತೆ ಅವರ ನೆನಪಿಸಿಕೊಂಡೆ ಒಂದೆರಡು ಭಾರಿ ಅವರೊಂದಿಗೆ ಜಗಳವಾಡಿದ್ದೆ. ಅವರ ಮಗ ವಿಠ್ಠಲ ನನ್ನ ಸ್ನೇಹಿತರು. ನಾನು ಮತ್ತು ನಾಟಕ ಅಕಾಡಮಿ ಸದಸ್ಯರಾಗಿದ್ದ ಕಿರಣ್ ಭಟ್ ತುಂಬಾ ಬಾರಿ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ನಿಮ್ಮ ಬರಹ ಚೆನ್ನಾಗಿದೆ. ಅವರ ಬಗ್ಗೆ ಇನ್ನು ಬರೆಯ ಬಹುದಿತ್ತು....
 Re:  ನೀವು ಯಾರು ದಯವಿಟ್ಟು ತಿಳಿಸಿ
 ಭಂಡಾರಿಯವರ ವ್ಯಕ್ತಿತ್ವ ೨೪ ಕ್ಯಾರೆಟ್ ಚಿನ್ನದಂಥದ್ದು. ಆದರೆ ಅವರು ಬ್ರಾಹ್ಮಣ ವಿರೋಧಿಗಳಾಗಿದ್ದರು. ಬ್ರಾಹ್ಮಣೇತರ ಸಮಾಜಗಳ ಎಲ್ಲಾ ಮುಖ್ಯ ಸಮಸ್ಯೆಗಳಿಗೂ ಬ್ರಾಹ್ಮಣರೇ ಕಾರಣ ಎಂದು ಅವರು ಬಲವಾಗಿ ನಂಬಿದ್ದರು. ಮಾರ್ಕ್ಸ್‌ವಾದದಿಂದ ಪ್ರೇರಿತವಾಗಿದ್ದ ಅವರ ವೈಚಾರಿಕತೆ ವೈದಿಕ ಧರ್ಮವನ್ನು ಖಂಡಿಸುವಲ್ಲಿ ಎಲ್ಲಿಲ್ಲದ ಪ್ರಖರತೆಯನ್ನು ಪಡೆಯಿತು. -- ಹಂಪನಕಟ್ಟೆ ಶ್ರೀರಾಮ...
 Re:  ಬ್ರಹ್ಮದ್ವೇಷವೇ ಬಂಡಾಯ ಚಳುವಳಿಯ ಪ್ರಾಣವಾಯು. ಬ್ರಾಹ್ಮಣವಿರೋಧಿಯಾಗದೆ ಬಂಡಾಯ ಸಾಹಿತಿಯಾಗಲು ಸಾಧ್ಯವೇ ಇಲ್ಲ. ವೈದಿಕ ಧರ್ಮದ ವಿರುದ್ಧ ರಣಕಹಳೆ ಊದದ ಕೃತಿ ಬಂಡಾಯ ಸಾಹಿತ್ಯವಾಗಲು ಸಾಧ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಪ್ರವರ್ಧಮಾನಕ್ಕೆ ಬಂದವರು ಭಂಡಾರಿ. ಹೀಗಾಗಿ ಅವರೂ ಸಹ ಮಿಕ್ಕ ಬಂಡಾಯಗಾರರ ಹಾಗೆ ಬ್ರಾಹ್ಮಣ ವಿರೋಧಿಯಾಗಿದ್ದು ಆಶ್ಚರ್ಯವೇನಲ್ಲ.
 ದಲಿತ ಬಂಡಾಯ ಚಳುವಳಿಯಲ್ಲಿ ಗುರುತಿಸಿಕೊಂಡ ಅನೇಕ ಮಂದಿ ಕಾಲ ಕಾಲಕ್ಕೆ ತಮ್ಮ ನಿಲುವುಗಳನ್ನು ಬದಲಿಸಿಕೊಂಡು ಯಾವ ಮೌಲ್ಯಗಳನ್ನು ವಿರೋಧಿಸಿದ್ದರೋ ಅದೇ ಮೌಲ್ಯಗಳ ಭಾಗವಾಗಿಬಿಟ್ಟರು. ಆದರೆ ಡಾ.ಭಂಡಾರಿಯವರು ಮಾತ್ರ ತಾವು ಪ್ರತಿಪಾದಿಸಿದ ಮೌಲ್ಯಗಳಿಗೆ ಕೊನೆತನಕವೂ ಬದ್ದರಾಗಿದ್ದರು. ಈ ಕಾರಣಕ್ಕಾಗಿಯೂ ಡಾ.ಭಂಡಾರಿ ಮುಖ್ಯರಾಗುತ್ತಾರೆ-ಚಿದಂಬರ ಬೈಕಂಪಾಡಿ...
 Re:  ಚಿದಂಬರ ಬೈಕಂಪಾಡಿಯವರೆ, ಮೌಲ್ಯಗಳನ್ನು ವಿರೋಧಿಸುವುದು ಮೂರ್ಖತನ ಹಾಗೂ ಅಪಾಯಕಾರಿ. ಮೌಲ್ಯಗಳಿಲ್ಲದ ಸಮಾಜ ನಿತ್ಯ ನರಕ ಸದೃಶ. ಮೌಲ್ಯಗಳ ಪೋಷಣೆ ಮತ್ತು ಸಂರಕ್ಷಣೆಯೇ ಪ್ರಜ್ಞಾವಂತ ನಾಗರಿಕರ ಹೊಣೆಗಾರಿಕೆ.
 nimmadu bejavaabdaari pratikriye. - ravi...
 ಇಲ್ಲಿ ಆರ್.ವಿ.ಯವರ ಪರಿಚಯಕ್ಕಿ೦ತ ಹೆಚ್ಚಾಗಿ ಸುನ೦ದಾರವರು ತಮ್ಮ ಪರಿಚಯವನ್ನೇ ಮಾಡಿಕೊ೦ಡಿದ್ದಾರೆ!...
 Re:  ತೇಜಸ್ವಿಯವರ ಅಣ್ಣನ ನೆನಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

Saturday 21 December 2013

ಜನನುಡಿ : ಪ್ರತಿಭಟನೆಯ ದಾರಿಯಾಗಿ ಪರ‍್ಯಾಯ

ಜನನುಡಿ : ಪ್ರತಿಭಟನೆಯ ದಾರಿಯಾಗಿ ಪರ‍್ಯಾಯ





ಜಿ.ಪಿ.ಬಸವರಾಜು


ಪರ‍್ಯಾಯ ಎನ್ನುವುದು ಒಂದು ವ್ಯವಸ್ಥೆಯಲ್ಲ; ಅದೊಂದು ಸಿದ್ಧ ಮಾದರಿಯೂ ಅಲ್ಲ. ಜಡಗಟ್ಟಿದ ವ್ಯವಸ್ಥೆಯ ವಿರುದ್ಧ ಪ್ರಕಟಗೊಳ್ಳುವ ಕೋಪ ಕಂಡುಕೊಂಡ ದಾರಿ. ಕಾಲ, ಸಂದರ್ಭ ಮತ್ತು ಸನ್ನಿವೇಶಗಳನ್ನು ಅವಲಂಬಿಸಿ ಈ ಪರ್ಯಾಯ ರೂಪ ಪಡೆದುಕೊಳ್ಳುತ್ತದೆ. ವ್ಯವಸ್ಥೆಯ ವಿರುದ್ಧ ಹುಟ್ಟುವ ಈ ಪರ್ಯಾಯ, ವ್ಯವಸ್ಥೆಯೊಳಗಿನ ಜಡತೆಯನ್ನು ತೊಡೆದುಹಾಕಲು ನೋಡುತ್ತದೆ. ವ್ಯವಸ್ಥೆಯೊಳಗೆ ಬೇರುಬಿಟ್ಟ ಶಕ್ತಿಗಳನ್ನು ಕೊನೆಗಾಣಿಸಲು ನೋಡುತ್ತದೆ. ಹೊಸ ವ್ಯವಸ್ಥೆಯೊಂದನ್ನು ಹುಟ್ಟುಹಾಕಿ, ಈ ವ್ಯವಸ್ಥೆಯ ಮೂಲಕ ಬದುಕಿನ ಅರ್ಥವನ್ನು ವಿಸ್ತರಿಸಲು, ಜನಹಿತಕ್ಕೆ ಪೂರಕವಾಗಲು ನೋಡುತ್ತದೆ. ಈ ಆಶಯವೇ ಪರ್ಯಾಯದ ಚೈತನ್ಯವಾಗಿರುತ್ತದೆ. ಈ ಚೈತನ್ಯ ಬರಿದಾಗುವವರೆಗೆ ಪರ್ಯಾಯ ಜೀವಂತವಾಗಿರುತ್ತದೆ. ನಂತರ ಅದೇ ಒಂದು ವ್ಯವಸ್ಥೆಯಾಗಿ ರೂಪಾಂತರ ಹೊಂದುತ್ತದೆ. ವ್ಯವಸ್ಥೆ ಎಂದಕೂಡಲೇ ಅದಕ್ಕೆ ಜಡತೆ ಅಂಟಿಕೊಂಡುಬಿಡುತ್ತದೆ. ಈ ಜಡತೆ ಎನ್ನವುದು ಅನೇಕ ಹಿತಾಸಕ್ತಿಗಳ ಶಕ್ತಿಕೇಂದ್ರವಾಗಿ ಆ ವ್ಯವಸ್ಥೆಯ ಚಲನೆಯನ್ನೇ ನಿಯಂತ್ರಿಸಿಬಿಡುತ್ತದೆ. ಇಂಥ ಚಲನೆಯಿಲ್ಲದ ವ್ಯವಸ್ಥೆ ಜನರ ಬದುಕಿಗೆ ಮಾರಕವಾಗಿರುತ್ತದೆ. ಅದು ಹೊಸ ಚಿಂತನೆಯನ್ನು, ಕ್ರಿಯಾಶೀಲತೆಯನ್ನು ಬೆಂಬಲಿಸುವುದಿಲ್ಲ. ಹೊಸ ಜೀವಚೈತನ್ಯ ಇಂಥ ವ್ಯವಸ್ಥೆಯ ಅಡಿಯಲ್ಲಿ ಪಲ್ಲವಿಸುವುದಿಲ್ಲ; ಮುರುಟಿಹೋಗುತ್ತವೆ. ಅಂಥ ಹೊತ್ತಲ್ಲಿ ಆ ವ್ಯವಸ್ಥೆಯ ವಿರುದ್ಧ ಕೋಪ ಸಿಡಿದೇಳುತ್ತದೆ. ಈ ಕೋಪವೇ ಹೊಸ ಪರ‍್ಯಾಯಕ್ಕೆ ದಾರಿಮಾಡಿಕೊಡುತ್ತದೆ. ಪರ್ಯಾಯವಾಗಿ ಹುಟ್ಟಿದ್ದು ಕೂಡಾ ಕಾಲಾಂತರದಲ್ಲಿ ಜಡವ್ಯವಸ್ಥೆಯಾಗುವುದು ಹೀಗೆ. ಕಾಲಚಕ್ರದಲ್ಲಿ ಪರ್ಯಾಯ, ವ್ಯವಸ್ಥೆ ಎನ್ನುವವು ಅದಲು ಬದಲಾಗುತ್ತಲೇ ಇರುತ್ತವೆ. 

ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟನ್ನೇ ನೋಡಿ. ಇದು ಕನ್ನಡ ಸಾಹಿತ್ಯ ಸಮ್ಮೇಳನ ಜಡಗೊಂಡಾಗ, ಅರ್ಥಕಳೆದುಕೊಂಡಾಗ ಹುಟ್ಟಿಕೊಂಡ ಸಿಟ್ಟಿಲ ಫಲ. ಸಾಹಿತ್ಯ ಎನ್ನುವುದು ಕೇವಲ ಪಠ್ಯಕ್ಕೆ ಸೀಮಿತವಾದ ಚರ್ಚೆಯಲ್ಲ; ಅದು ಸಮಾಜಕ್ಕೆ, ರಾಜಕೀಯಕ್ಕೆ, ಸಂಸ್ಕೃತಿಗೆ ವಿಸ್ತರಿಸಿಕೊಳ್ಳುವ ಚಿಂತನೆ. ಮನುಷ್ಯ ಕೇಂದ್ರದ ಸುತ್ತ ತಿರುಗುವ ಎಲ್ಲ ಸಂಗತಿಗಳನ್ನೂ ಸಾಹಿತ್ಯ ಒಳಗೊಳ್ಳುತ್ತದೆ. ಹಾಗೆಯೇ ಸಾಹಿತ್ಯ ಚಿಂತನೆ ಈ ಎಲ್ಲ ಸಂಗತಿಗಳಿಗೂ ವಿಸ್ತರಿಸಿಕೊಳ್ಳಬೇಕು; ಈ ಎಲ್ಲ ಸಂಗತಿಗಳೂ ಸಾಹಿತ್ಯ ಸಮ್ಮೇಳನಗಳಲ್ಲಿ ಅರ್ಥಪೂರ್ಣ ಚರ್ಚೆಯನ್ನು ಪಡೆದುಕೊಳ್ಳಬೇಕು. ಸಾಹಿತ್ಯ ಸಮ್ಮೇಳನ ಎನ್ನುವುದು ಕೇವಲ ವಾರ್ಷಿಕ ಆಚರಣೆಯಲ್ಲ; ಕನ್ನಡ ಸಾಹಿತ್ಯ ಪರಿಷತ್ತಿನ ಬಾಜಾಭಜಂತ್ರಿಯೂ ಅಲ್ಲ; ರಾಜಕಾರಣಿಗಳ ಮೆರವಣಿಗೆಯೂ ಅಲ್ಲ; ಅಥವಾ ಜಾನಪದ ಕಲೆಗಳ ಕುಣಿತ ಮಾತ್ರವೂ ಅಲ್ಲ. ಇದನ್ನೇ ಬಹಿರಂಗವಾಗಿ ಸಾರಿ, ಬಂಡಾಯ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ ಸಮ್ಮೇಳನವಾಗಿ ಹುಟ್ಟಿಕೊಂಡಿತು. ಮುಂದೆ ಅದನ್ನೊಂದು ಚಳವಳಿಯಾಗಿ ರೂಪಿಸಲು ಬಂಡಾಯ ಸಾಹಿತ್ಯ ಸಂಘಟನೆಯೂ ರೂಪಿತವಾಯಿತು. ’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ಬಂಡಾಯದ ಘೋಷಣಾ ವಾಕ್ಯದಲ್ಲಿ ಅದರ ಆಶಯ ವ್ಯಕ್ತವಾಗುವಂತೆಯೇ, ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧದ ಕೋಪವೂ ತಿಳಿಯುತ್ತದೆ. ಅಷ್ಟೇ ಅಲ್ಲ, ಆ ದಿನಗಳಲ್ಲಿ ಮೆರೆಯುತ್ತಿದ್ದ ಸಾಹಿತ್ಯ ಜನರ ನೋವಿಗೆ ಮಿಡಿಯುತ್ತಿಲ್ಲ ಎಂಬ ಸಿಟ್ಟೂ ಇದೆ. ಮುಂದೆ ಇದೇ ಬಂಡಾಯ ಜಡಗೊಂಡದ್ದನ್ನೂ ನಾವು ಕಾಣುತ್ತೇವೆ. ಆದರೆ ಬಂಡಾಯ ಎನ್ನುವುದು ಒಂದು ಮನೋಧರ್ಮವಾಗಿ, ಬದುಕನ್ನು ಬೇರೊಂದು ನಿಟ್ಟಿನಲ್ಲಿ ನೋಡುವುದಕ್ಕೆ ಒತ್ತಾಯಿಸಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು ಎಂಬುದನ್ನು ಮರೆಯಲಾಗದು.

ಮಡಿಕೇರಿಯಲ್ಲಿ ೮೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸದ್ಯದಲ್ಲಿಯೇ ನಡೆಯಲಿದೆ. ಅದಕ್ಕೂ ಮುನ್ನ ಮೂಡಬಿದಿರೆಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಜಗಮಗಿಸಲಿದೆ. ಈ ಹೆಸರುಗಳನ್ನೇ ನೋಡಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದರೇನು ಅರ್ಥ? ಕನ್ನಡ ಇರುವುದು ಕರ್ನಾಟಕದಲ್ಲಿ ಮಾತ್ರ. ಕರ್ನಾಟಕದ ಚೌಕಟ್ಟಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನವೇ ಮುಖ್ಯವಾದದ್ದು. ಅಖಿಲ ಭಾರತ, ವಿಶ್ವ ಇವೆಲ್ಲ ಅರ್ಥವಿಲ್ಲದ ಮಾತುಗಳು. ಜಾಗತಿಕ ಮಟ್ಟದಲ್ಲಿ ಅಂದರೆ ಅನೇಕ ರಾಷ್ಟ್ರಗಳಲ್ಲಿ ಆಡುವ, ಓದುವ, ಬರೆಯುವ, ವ್ಯವಹರಿಸುವ ಭಾಷೆಗಳಾದರೆ ಅಂಥ ಭಾಷೆಗಳಿಗೆ ವಿಶ್ವ ಸಮ್ಮೇಳನ, ಜಾಗತಿಕ ಸಮ್ಮೇಳನ ಎಂದರೆ ಅರ್ಥ ಇರಬಹುದು. ಆದರೆ ಕನ್ನಡಕ್ಕೆ? ಅದು ನಮ್ಮಲ್ಲಿಯೇ ಅಂದರೆ ಕರ್ನಾಟಕದಲ್ಲಿಯೇ ಬೆಳಗಬೇಕು, ಮೆರೆಯಬೇಕು, ಎಲ್ಲ ಗೌರವ ಗಳಿಸಿಕೊಳ್ಳಬೇಕು. ಇದನ್ನು ಸಾಧ್ಯವಾಗಿಸದ ನಾವು ಅಖಿಲ ಭಾರತ ಎಂದು ಕರೆದು, ಇಲ್ಲವೇ ವಿಶ್ವ ಸಮ್ಮೇಳನ ಎಂದು ಕರೆದು ಹುಸಿ ಪ್ರತಿಷ್ಠೆಯನ್ನು ತಂದುಕೊಳ್ಳಲು ನೋಡುತ್ತೇವೆ; ಗಾಳಿಬುರುಡೆಯಂತೆ ಉಬ್ಬಲು ನೋಡುತ್ತೇವೆ. ವಿಶ್ವಕನ್ನಡ ಎಂದ ಕೂಡಲೇ ಸರ್ಕಾರ ಹೆಚ್ಚು ಹಣವನ್ನು ಕೊಡಬಹುದು; ಹೆಚ್ಚಿನ ಪ್ರಚಾರ ಸಿಕ್ಕಬಹುದು. ಆದರೆ ನಿಜಕ್ಕೂ ಅದರಿಂದ ಕನ್ನಡಕ್ಕೆ ಏನು ದೊರೆತಂತಾಗುತ್ತದೆ?

ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯ ಬಿಕ್ಕಟ್ಟುಗಳು, ರಾಜಕೀಯ ಪಲ್ಲಟಗಳು, ಭಾಷೆಗಳು ಎದುರಿಸುತ್ತಿರುವ ಗಂಡಾಂತರಗಳು, ಗಣಿಗಾರಿಕೆಯಿಂದ ಹದಗೆಡುತ್ತಿರುವ ನಮ್ಮ ಕೃಷಿಯ ಚಟುವಟಿಕೆಗಳು, ಮಾಧ್ಯಮಗಳ ಅಬ್ಬರದಲ್ಲಿ ನಲುಗುತ್ತಿರುವ ಅಭಿವ್ಯಕ್ತಿಯ ವಿವಿಧ ರೂಪಗಳು, ಕೋಮುಭಾವನೆಗಳ ಅಡಿಯಲ್ಲಿ ಸಿಕ್ಕವರ ನರಳಾಟಗಳು -ಇವೆಲ್ಲ ಇವತ್ತಿನ ತಲ್ಲಣಗಳು. ಜೊತೆಗೆ ನಮ್ಮ ಮೌಢ್ಯಗಳನ್ನು ತಡೆಯಲಾಗದ ಅಸಹಾಯಕತೆ, ಭ್ರಷ್ಟಾಚಾರದ ವಿಶ್ವರೂಪ ದರ್ಶನ, ದಿಕ್ಕೆಟ್ಟಿರುವ ಶಿಕ್ಷಣ ವ್ಯವಸ್ಥೆ, ಕುಡಿಯಲು ಸ್ವಚ್ಛ ನೀರನ್ನು, ವಾಹನಗಳು ಓಡಲು ಯೋಗ್ಯವಾದ ದಾರಿಗಳನ್ನು ಕೊಡದೆ ಜನರ ಕಣ್ಣಿಗೆ ಮಣ್ಣೆರಚುತ್ತಿರುವ ಸರ್ಕಾರಗಳು-ಇವೂ ಚರ್ಚೆಗೆ ಯೋಗ್ಯ ವಸ್ತುಗಳೇ. ಹೊಸ ತಲೆಮಾರಿನ ಬರಹಗಾರರು ಎದುರಿಸುತ್ತಿರುವ ಬಿಕ್ಕಟ್ಟುಗಳು, ನಮ್ಮ ಅಕಾಡೆಮಿಗಳು, ಪರಿಷತ್ತುಗಳು, ವಿಶ್ವವಿದ್ಯಾನಿಲಯಗಳ ಜಡಗೊಂಡ ಸ್ಥಿತಿ ಇವೆಲ್ಲವೂ ಸಾರ್ವಜನಿಕ ಸಂವಾದಕ್ಕೆ ಅಗತ್ಯ ನೆಲೆಗಟ್ಟನ್ನು ಒದಗಿಸಬಲ್ಲವು. ಅಖಿಲ ಭಾರತ ಸಮ್ಮೇಳನಗಳಾಗಲೇ, ವಿಶ್ವ ಸಮ್ಮೇಳನಗಳಾಗಲೀ ಇಂಥ ದಿಕ್ಕಿನಲ್ಲಿ ಬೆಳಕನ್ನು ಚೆಲ್ಲುವ ಕಾರ್ಯಕ್ರಮಗಳನ್ನು ಈವರೆಗೆ ಎಷ್ಟು ರೂಪಿಸಿವೆ, ಅವುಗಳಲ್ಲಿ ಎಷ್ಟು ಜನ ಪಾಲ್ಗೊಂಡಿದ್ದಾರೆ, ಇಂಥ ಸಾರ್ವಜನಿಕ ಸಂವಾದಗಳಿಗೆ ಎಷ್ಟು ವೇದಿಕೆಗಳು ನೆಲೆ ನೀಡಿವೆ?

ಸಮ್ಮೇಳನವೆಂದರೆ ಊಟ, ವಸತಿ, ಓಡಾಟ, ಅದ್ಧೂರಿಯ ಮೆರವಣಿಗೆ, ಅನೇಕರಿಗೆ ಸನ್ಮಾನ, ಜಾನಪದ ಕುಣಿತಗಳು, ಪುಸ್ತಕ ಪ್ರದರ್ಶನ ಇತ್ಯಾದಿಗೆ ಮಾತ್ರ ಸೀಮಿತವಾಗುವಂಥ ಪರಿಸ್ಥಿತಿಯೇ ಇವತ್ತಿಗೂ ಮುಂದುವರಿದಿದೆ. ಲಕ್ಷಾಂತರ ಜನರ ಜಮಾವಣೆ, ಅವ್ಯವಸ್ಥೆ ಇತ್ಯಾದಿಗಳಿಗೆ ಸಿಕ್ಕುವ ಭಾರೀ ಪ್ರಚಾರ, ಕೊಟ್ಯಂತರ ರೂಪಾಯಿ ಖರ್ಚು. ಇದಕ್ಕೆ ಪರ‍್ಯಾಯವೆಂಬಂತೆ ಕಾಣುವ ಆಳ್ವಾಸ್ ನುಡಿಸಿರಿಯಾಗಲಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನವಾಗಲೀ ಸ್ವರೂಪದಲ್ಲಿ ತುಂಬ ಭಿನ್ನವಾಗಿ ಕಾಣಿಸುವುದಿಲ್ಲ. ಊಟ, ವಸತಿ, ಓಡಾಟ, ಸಮ್ಮೇಳನದ ವ್ಯವಸ್ಥೆ, ಸನ್ಮಾನಗಳು, ಪಲ್ಲಕ್ಕಿ ಮೆರವಣಿಗೆ ಇತ್ಯಾದಿ ಎಲ್ಲವೂ ಅಚ್ಚುಕಟ್ಟು; ಬಂದ ಜನರಿಗೂ ತೃಪ್ತಿ. ಸರ್ಕಾರದ ಬೊಕ್ಕಸವನ್ನೂ ಇವರು ನೆಚ್ಚಿಕೊಂಡಿಲ್ಲ. ಆದರೆ ಇಲ್ಲಿನ ಸಂವಾದಗಳು, ಗೋಷ್ಠಿಗಳು, ಸಂಕಿರಣಗಳು ಎಷ್ಟು ಅರ್ಥಪೂರ್ಣವಾಗಿರುತ್ತವೆ? ಜ್ವಲಂತ ಸಮಸ್ಯೆಗಳಿಗೆ ಈ ಮೇಳಗಳು ಎಷ್ಟು ಸ್ಪಂದಿಸಿವೆ? ಈ ಮೇಳಗಳು ಯಾರನ್ನು ತೃಪ್ತಿಪಡಿಸಲು, ಯಾರ ಪ್ರತಿಷ್ಠೆಯನ್ನು ಹೆಚ್ಚಿಸಲು ನಡೆಯುತ್ತಿವೆ? ಯಾವ ಶಕ್ತಿಗಳು, ಯಾರ ಹಿತಾಸಕ್ತಿಗಳು ಇಂಥ ಮೇಳಗಳ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುತ್ತವೆ? ಇಂಥ ಪ್ರಶ್ನೆಗಳನ್ನು ನಾವು ಎದುರಿಸುವಂತಾದರೆ ಬೇರೆಯ ಸತ್ಯಗಳೇ ಹೊರಬರುತ್ತವೆ.

ಕನ್ನಡ ನಾಡಿನ ಮುಗ್ಧರ, ಬಡಜನತೆಯ ಧಾರ್ಮಿಕ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಮೌಢ್ಯಾಚರಣೆಗಳು, ಮಡೆಸ್ನಾನದಂಥ ಅಸಹ್ಯ ಆಚರಣೆಗಳು, ಅತ್ಯಂತ ಹೇಯ ರೀತಿಯಲ್ಲಿ ಕೆಳ ಜಾತಿಗಳನ್ನು ಶೋಷಿಸುವ ಅಜಲು ಪದ್ಧತಿ, ಮನುಷ್ಯರ ಸಮಾನತೆ ಮತ್ತು ಘನತೆಯನ್ನು ಅಣಕಿಸುವ ಪಂಕ್ತಿಭೇದದ ಊಟಗಳು, ಪ್ರವೇಶವನ್ನು ಜಾತಿ ಆಧಾರದ ಮೇಲೆ ನಿರಾಕರಿಸುವ ದೇವಾಲಯಗಳು, ಮಠಗಳು ಹೆಚ್ಚಾಗಿ ಇರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ. ಕೋಮುವಾದ ಎಂಬುದು ಭೂತದಂತೆ ಬೆಳೆದಿರುವುದು ಈ ಜಿಲ್ಲೆಗಳಲ್ಲೇ. ಪದ್ಮಲತಾ, ವೇದವಲ್ಲಿ, ಸೌಜನ್ಯ ಹೀಗೆ ಯುವತಿಯರು ಸಾಲು ಸಾಲಾಗಿ ನಿಗೂಢವಾಗಿ ಅತ್ಯಾಚಾರ ಮತ್ತು ಕೊಲೆಗಳಿಗೆ ಬಲಿಯಾಗಿರುವುದು, ಈ ಕೃತ್ಯಗಳ ಹಿಂದಿನ ಶಕ್ತಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿರುವುದು ಈ ಜಿಲ್ಲೆಗಳಲ್ಲೇ. ಕಾಲೇಜು ತರುಣ ತರುಣಿಯರು ಪರಸ್ಪರ ಸ್ನೇಹದಿಂದ ಮಾತನಾಡಲಾಗದ ಬಿಕ್ಕಟ್ಟು ಉಂಟಾಗಿರುವುದೂ ಈ ಜಿಲ್ಲೆಯಲ್ಲಿಯೇ. ಆಳ್ವಾಸ್ ನುಡಿಸಿರಿ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಗಳು ನಡೆಯುವುದೂ ಈ ಜಿಲ್ಲೆಗಳಲ್ಲೇ. ತಮ್ಮ ನೆಲದಲ್ಲಿಯೇ ನಡೆಯುವ ಈ ಘೋರ ತಲ್ಲಣಗಳ ಬಗ್ಗೆ ಈ ಸಮ್ಮೇಳನಗಳಲ್ಲಿ ಈವರೆಗೆ ಒಂದು ಸಂವಾದ ಅಥವಾ ಒಂದು ನಿರ್ಣಯ ಅಂಗೀಕಾರ ಯಾಕೆ ಸಾಧ್ಯವಾಗಿಲ್ಲ? ಸಾಹಿತ್ಯ ಎನ್ನುವುದು ’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ನಾಗುವುದು ಇಂಥ ಉರಿಯುವ ಸಮಸ್ಯೆಗಳಿಗೆ ಮುಖಾಮುಖಿಯಾದಾಗಲೇ. 
ಅಖಿಲ ಭಾರತ ಅಥವಾ ವಿಶ್ವ ಸಮ್ಮೇಳನ ಎಂದು ಹೇಳಿಕೊಳ್ಳುವ ’ಸಾಹಿತ್ಯ ಸಮ್ಮೇಳನ’ದ ಉದ್ಘಾಟನೆಯ ಗೌರವವನ್ನು ಒಬ್ಬ ಸಾಹಿತಿಗೆ ನೀಡಲಾಗುತ್ತಿಲ್ಲ ಎಂದರೆ ಈ ಮೇಳಗಳ ಹಿಂದಿರುವ ಉದ್ದೇಶವೇನು? ಸಾಹಿತ್ಯ ಮತ್ತು ಕಲೆಗಳನ್ನು ಒಂದರೊಳಗೊಂದು ಬೆರಸಿ, ಯಾವುದಕ್ಕೂ ಫೋಕಸ್ ಇಲ್ಲದಂತೆ ಮಾಡಿ, ವೈಭವವನ್ನೇ ಪ್ರಧಾನಮಾಡಿರುವ ಆಳ್ವಾಸ್ ವಿಶ್ವ ನುಡಿಸಿರಿಯ ಉದ್ದೇಶವೇನು? ಇದಕ್ಕಾಗಿ ವೆಚ್ಚವಾಗುವ ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ? ಇವರನ್ನು ಪೋಷಿಸುವವರು ಯಾರು? ಇವರ ಮಾರ್ಗದರ್ಶಕರು ಯಾರು? ಸ್ವಾಗತ ಸಮಿತಿಯ ಉದ್ದೋಉದ್ದ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. 

ಇಂಥ ಹಿನ್ನೆಲೆಯಲ್ಲಿಯೇ ಅಭಿಮತ, ಕರ್ನಾಟಕ ಜನಸಾಹಿತ್ಯ  ಸಂಘಟನೆ, ಸಹಮತ, ನಾವು ನಮ್ಮಲ್ಲಿ, ಚಿಂತನ, ಲಡಾಯಿ, ಆದಿಮ ಇತ್ಯಾದಿ ಪರ‍್ಯಾಯಗಳು ಹುಟ್ಟಿಕೊಳ್ಳುತ್ತವೆ. ಇವು ನಡೆಸುವ ಮೇಳಗಳಲ್ಲಿ ಲಕ್ಷಾಂತರ ಜನ ಸೇರುವುದಿಲ್ಲ; ಹಣದ ಹೊಳೆ ಹರಿಯುವುದಿಲ್ಲ. ಊಟ ವಸತಿಯ ರಾಜವೈಭವವೂ ಇರುವುದಿಲ್ಲ. ಆದರೂ ಅಂಥ ಪರ್ಯಾಯಗಳು ಸಮಾಜದ ಹಿತವನ್ನು, ಆರೋಗ್ಯವನ್ನು ಕಾಪಾಡುತ್ತವೆ.

Thursday 28 November 2013

ಪಶ್ಚಿಮ ಘಟ್ಟ ಪರಿಸರ ರಕ್ಷಣಾ ಸಂಬಂಧಿ ವರದಿಯ ಕುರಿತು ನಮ್ಮ ದೃಷ್ಟಿಕೋನ -- ಯಮುನಾ ಗಾಂವ್ಕರ್, ಕಾರವಾರ

ಪಶ್ಚಿಮ ಘಟ್ಟ ಪರಿಸರ ರಕ್ಷಣಾ ಸಂಬಂಧಿ ವರದಿಯ ಕುರಿತು ನಮ್ಮ ದೃಷ್ಟಿಕೋನ 


ಈಗ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಯುಪಿಎ-2 ಸಕರ್ಾರ 4-3-2013 ರಂದು ಪ್ರೋ. ಮಾಧನ ಗಾಡ್ಗಿಳ್ ಅವರ ಅಧ್ಯಕ್ಷತೆಯಲ್ಲಿ ಪಶ್ಚಿಮ ಘಟ್ಟ ಜೀವ ಪರಿಸರ ಪರಿಣಿತರ ತಂಡವನ್ನು ರಚಿಸಿತ್ತು. 18 ತಿಂಗಳಲ್ಲಿ ಅದು ನಿಡಿದ ವರದಿ 6 ರಾಜ್ಯಗಳ 1,29,037 ಚ.ಕಿ.ಮಿ ವಿಸ್ತೀರ್ಣದ ಪ್ರದೇಶವನ್ನು ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿತು. ಮಾತ್ರವಲ್ಲ ಈ ಪ್ರದೇಶಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ನಿರ್ವಹಣೆ ಕುರಿತು ಹಲವು ನಿರ್ಬಂಧವನ್ನು ಹೇರಿತ್ತು. ವಿವಿಧ ರಾಜ್ಯಗಳಿಂದ ಈ ವರದಿಗೆ 1750 ವಿರೋಧವು ಬಂದಿತ್ತು.

ನಂತರ ನಡೆದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಈ ವರದಿ ಒಪ್ಪದ ಕೇಂದ್ರ ಸಕರ್ಾರ ಮತ್ತೆ 17-8-12ರಂದು ಯೋಜನಾ ಆಯೋಗದ ಸದಸ್ಯರೂ ಬಾಹ್ಯಾಕಾಶ ವಿಜ್ಞಾನಿಯೂ ಆದ ಡಾ. ಕೆ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ 10 ಜನರ ಉನ್ನತ ಹಂತದ ಕಾರ್ಯತಂಡ (ಎಚ್.ಎಲ್.ಡಬ್ಲು.ಜಿ) ವನ್ನು (ತಂಡದಲ್ಲಿರುವ ಬಹುತೇಕರು ಸಾಮಾನ್ಯಜನರೊಂದಿಗೆ ಸಾವಯವ ಸಂಬಂಧ ಇಟ್ಟುಕೊಂಡವರಲ್ಲ. ಅಧ್ಯಕ್ಞರು ಕೂಡ ಬಾಹ್ಯಾಕಾಶ ತಜ್ಞರೇ ಹೊರತು ಪರಿಸರ ತಜ್ಞರಲ್ಲ ಎಂಬ ಆಪಾದನೆಯೂ ಇತ್ತು.)ರಚಿಸಿತು. ಅದೂ ಕೂಡ ಕೇವಲ 8 ತಿಂಗಳಲ್ಲಿ ತನ್ನ ವರದಿ ನೀಡಿತು. ಇವರ ವರದಿಯನ್ನು ಜ್ಯಾರಿಗೊಳಿಸಲು ಮುಂದಾಗಿರುವ ಕೇಂದ್ರ ಸಕರ್ಾರ ಪಾರಂಪರಿಕವಾಗಿ ಅರಣ್ಯವಾಸಿಗಳ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲು ಮುಂದಾಗಿರುವುದು ಖೇದಕರ. 

ಪರಿಸರ ಮತ್ತು ಜೀವ ವೈವಿಧ್ಯದ ಹೆಸರಿನಲ್ಲಿ ಬಂದ ಈ ಎರಡೂ ವರದಿಗಳು(ಗಾಡ್ಗಿಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿ) ಮನುಷ್ಯನನ್ನು ಒಬ್ಬ ಜೀವಿಯೆಂದು ಗಂಭೀರವಾಗಿ ಪರಿಗಣಿಸದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೆಚ್ಚು ದೀರ್ಘ ಸಮಯ ತೆಗೆದುಕೊಂಡು ಸಲ್ಲಿಸಿದ ಪ್ರೋ. ಗಾಡ್ಗೀಳ್ ವರದಿ ಮತ್ತು ತರಾತುರಿಯಲ್ಲಿ ಸಲ್ಲಿಸಲ್ಪಟ್ಟ ಬಾಹ್ಯಾಕಾಶ ತಜ್ಞ ಡಾ, ಕಸ್ತೂರಿ ರಂಗನ್ ವರದಿಗಳೆರಡರಲ್ಲೂ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಳ್ಳದೇ, ಪಶ್ಚಿಮ ಘಟ್ಟದಲ್ಲಿ ಪಾರಂಪರಿಕವಾಗಿ ವಾಸಮಾಡುವವರ ಬದುಕಿನ ವಿವರ ಮತ್ತು ಅವರ ಸಾಮಾಜಿಕ, ಸಾಂಸ್ಕೃತಿಕ, ಆಥರ್ಿಕ ವಿವರಗಳ ವಸ್ತುನಿಷ್ಟ ಅರಿವಿಲ್ಲದೇ ರಚನೆಗೊಂಡದ್ದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.


ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿತವಾದ ಅಭಿವೃದ್ಧಿ ನಿಷೇಧಿತ ಪ್ರದೇಶ ನಮ್ಮ ರಾಜ್ಯದ 11 ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ಇದು ರಾಜ್ಯದ ಸಾವಿರಾರು ಚ.ಕಿ.ಮಿ ಪ್ರದೇಶದ ಸುಮಾರು 8ರಿಂದ 10 ಲಕ್ಷಕ್ಕು ಹೆಚ್ಚು ಜನರನ್ನು ಬಾಧಿಸುತ್ತಿದೆ. 8 ರಿಂದ 10 ಲಕ್ಷ ಜನ ವಾಸವಾಗಿರುವ ಪ್ರದೇಶಗಳಿಂದ ತಕ್ಷಣ ಒಕ್ಕಲೆಬ್ಬಿಸದಿದ್ದರೂ ಕ್ರಮೇಣ ಮನುಷ್ಯವಾಸವನ್ನು ನಿರ್ಬಂಧಿಸುವುದಕ್ಕೆ ಈ ವರದಿ ಮೂಲವಾಗಲಿದೆ.

ಭಾರತ ಸಕರ್ಾರದ ಆದೇಶಾನುಸಾರ ಕನರ್ಾಟಕದ 11 ಜಿಲ್ಲೆಗಳ 1576 ಹಳ್ಳಿಗಳು, ಗೋವಾದ 3 ಜಿಲ್ಲೆಗಳ 99 ಹಳ್ಳಿಗಳು, ಮಹಾರಾಷ್ಟ್ರದ 12 ಜಿಲ್ಲೆಗಳ 2159 ಹಳ್ಳಿಗಳು, ಗುಜರಾತಿನ 4 ಜಿಲ್ಲೆಗಳ 64 ಹಳ್ಳಿಗಳು, ತಮಿಳುನಾಡಿನ 9 ಜಿಲ್ಲೆಗಳ 135 ಹಳ್ಳಿಗಳು, ಕೇರಳದ 12 ಜಿಲ್ಲೆಗಳ 123 ಹಳ್ಳಿಗಳು ಹೀಗೆ ಒಟ್ಟು 4156 ಹಳ್ಳಿಗಳು ಅಭಿವೃದ್ಧಿ ಪ್ರಕ್ರಿಯೆಯಿಂದ ನಿಷೇಧಿಸಲ್ಪಡುತ್ತವೆ. ಒಟ್ಟು 52 ಜಿಲ್ಲೆಗಳನ್ನು ವ್ಯಾಪಿಸಿರುವ ಈ ಹಳ್ಳಿ ಪ್ರದೇಶಗಳ 164280 ಚ.ಕಿ.ಮೀ ವ್ಯಾಪ್ತಿ ಆವರಿಸಿದೆ. 
ಕನರ್ಾಟಕದ 10 (ವರದಿಯಲ್ಲಿ ಧಾರವಾಡದ ಉಲ್ಲೇಖವಿದೆ ಅದೂ ಸೇರಿ 11 ಜಿಲ್ಲೆ) ಜಿಲ್ಲೆಗಳ 40 ತಾಲೂಕುಗಳ ಒಟ್ಟು 1576 ಹಳ್ಳಿಗಳು ವಿಷೇಧಾವ್ರತವಾಗಲಿವೆ.! ಬೆಳಗಾವಿಯ 5 ತಾಲೂಕುಗಳ 64 ಹಳ್ಳಿಗಳು, ಚಾಮರಾಜನಗರದ  1 ತಾಲೂಕಿನ 21, ಚಿಕ್ಕಮಗಳೂರಿನ 5 ತಾಲೂಕಿನ 147, ಕೊಡಗಿನ 3 ತಾಲೂಕಿನ 55, ಹಾಸನದ 4 ತಾಲೂಕಿನ 35, ಉತ್ತರ ಕ್ನನಡದ 10 ತಾಲೂಕಿನ 626, ದಕ್ಷಿಣಕನ್ನಡದ 3 ತಾಲೂಕಿನ 45, ಮೈಸೂರಿನ 1 ತಾಲೂಕಿನ 62, ಶಿವಮೊಗ್ಗದ 5 ತಾಲೂಕಿನ 484, ಉಡುಪಿಯ 3 ತಾಲೂಕಿನ 37 ಹಳ್ಳಿಗಳು ಪ್ರಸ್ತುತ ಆದೇಶದಿಂದ ತೊಂದರೆಗೆ ಒಳಗಾಗುತ್ತವೆ.

ಈ ತಂಡವನ್ನು ರಚಿಸಿದ ಸಂದರ್ಭದಲ್ಲಿ ಕೇಂದ್ರ ಸಕರ್ಾರವು 5 ಮುಖ್ಯಾಂಶಗಳ ಮೇಲೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿ ವರದಿ ನೀಡುವಂತೆೆ ಸೂಚಿಸಿತ್ತು. ಅದರಲ್ಲಿ ಅಪರೂಪದ ಜೀವವೈವಿಧ್ಯದ ರಕ್ಷಣೆಯ ಅವಶ್ಯಕತೆ ಮತ್ತು ಕಾರ್ಯಸೂಚಿ ಜೊತೆಗೆ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಐಕ್ಯತೆಯನ್ನು ಸಮಾನ ಆಥರ್ಿಕ ಸಾಮಾಜಿಕ ಬೆಳವಣಿಗೆಯೊಂದಿಗೆ ಸಮತೂಗಿಸಿಕೊಳ್ಳುತ್ತಲೇ ಸ್ಥಳೀಯರು ಮತ್ತು ಮೂಲ ನಿವಾಸಿಗಳು, ಬುಡಕಟ್ಟು ಜನ, ಅರಣ್ಯವಾಸಿಗಳು ಮತ್ತು ಸ್ಥಳೀಯ ಸಮುದಾಯಗಳ ಹಕ್ಕುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ ಆಶೋತ್ತರಗಳನ್ನು  ಖಾತ್ರಿ ಪಡಿಸುವುದು ಪ್ರಮುಖವಾಗಿತ್ತು. ಆದರೆ ಕಸ್ತೂರಿ ರಂಗನ್ ವರದಿಯ ಶಿಫಾರಸ್ಸು ಸಕರ್ಾರದ ಈ ನಿದರ್ೇಶನಕ್ಕೆ ವಿರೋಧವಾಗಿಯೇ ಇದೆ. ಇದನ್ನು ಪಾಲಿಸಲೇ ಇಲ್ಲ. 


ಪರಿಸರ ಜೀವ ವೈವಿಧ್ಯ ತೀರಾ ಮುಖ್ಯವಾದುದು. ಯಾವ ಕಾರಣಕ್ಕೂ ಪರಿಸರವನ್ನು ವಿರೋಧಿಸುವ ಅಥವಾ ಉಪೇಕ್ಷಿಸುವ ಪ್ರಶ್ನೆ ಇಲ್ಲ. ಕಾಡನ್ನು ತಲೆತಲಾಂತರದಿಂದ ಕಾಪಿಟ್ಟುಕೊಂಡು ಬಂದವರು ಇದೇ ದುಡಿಯುವ ಜನ. ಲಕ್ಷಾಂತರ ರೂಪಾಯಿ ಹಣ ಸುರಿದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗದ ಶ್ರಮಿಕರಿಗೆ ಸ್ವಚ್ಛ ಮತ್ತು ಉತ್ತಮ ಪರಿಸರದ ಅಗತ್ಯ ಇದ್ದೇ ಇದೆ. ಹಾಗಾಗಿಯೇ ಮರವನ್ನು ಪೂಜಿಸುವ, ಕಾಡಿನ ಮೇಲೆ ಹಾಡು ಕಟ್ಟಿ ಕುಣಿಯುವ ಬುಡಕಟ್ಟು ಜನ ಎಂದೂ ಮರಗಳ್ಳರಾಗಿಲ್ಲ. ಕಾಡನ್ನು ನಾಶಮಾಡಿಲ್ಲ; ದೇವರೆಂದೇ ಪೂಜಿಸುತ್ತಿದ್ದಾರೆ. ಈ ವರೆಗೆ ಆಳಿದ ಹಲವು ಸಕರ್ಾರಗಳು ಪ್ರತಿಯಾಗಿ ಅವರಿಗೆ ನೀಡಿದ್ದೇನು? ಏನೂ ಇಲ್ಲ. ರಸ್ತೆಯಿಲ್ಲ, ಸೇತುವೆ ಇಲ್ಲ, ಮನೆ ಇಲ್ಲ, ಶಾಲೆ ಆಸ್ಪತ್ರೆಗಳಿಲ್ಲ, ಈವರೆಗೆ ದುಡಿದು ತಿನ್ನುತ್ತಿದ್ದ ಭೂಮಿಗೆ ಹಕ್ಕುಪತ್ರವಿಲ್ಲ. ಉದ್ಯೋಗಕ್ಕೆ ಕೈಗಾರಿಕೆಗಳಿಲ್ಲ. ಕಟ್ಟಕೊನೆಗೆ ಅರಣ್ಯ ಸಂಪತ್ತಿನ ಮೇಲೆ ಸಾಮುದಾಯಿಕವಾದ ಹಕ್ಕೂ ಇಲ್ಲ.

ಇವೆಲ್ಲವನ್ನೂ ಒದಗಿಸಬೇಕಾದ್ದು ಸಕರ್ಾರದ ಜವಾಬ್ದಾರಿಯಾಗಿರಬೇಕಾದಾಗ ಕಾಡಿನಲ್ಲಿರುವವರು, ಬುಡಕಟ್ಟು ಸಮುದಾಯ, ಅರಣ್ಯವವಾಸಿಗಳು ಮತ್ತು ಪಶ್ಚಿಮ ಘಟ್ಟದ ತೊಪ್ಪಲಿನಲ್ಲಿ ವಾಸಿಸುವ ಎಲ್ಲರಿಗೂ ಬದುಕುವ ಹಕ್ಕನ್ನೇ ಸಕರ್ಾರ ನಿರಾಕರಿಸುತ್ತಿದೆ. ಈವರೆಗೆ ಅರಣ್ಯ ರಕ್ಷಣೆಯ ನೆಪದಲ್ಲಿ ಬಂದ ಹತ್ತಾರು ಕಾನೂನುಗಳು ಅಂದರೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ, ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣಾ ಕಾಯ್ದೆ, ಜೈವಿಕ ತಂತ್ರಜ್ಞಾನ ಅನುಮೋದನಾ ಸಮಿತಿಯ ನಿಯಮಾವಳಿಗಳು, ಜಂಟಿ ಅರಣ್ಯ ನಿರ್ವಹಣಾ ನೀತಿಗಳು, ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳು, ತೀರ ಪ್ರದೇಶ ನಿಯಮಾವಳಿಗಳು, ರಾಷ್ಟ್ರೀಯ ಜೀವ ವೈವಿಧ್ಯತಾ ಕಾರ್ಯತಂತ್ರ-ಕ್ರಿಯಾ ಯೋಜನೆ, ಜೊತೆಗೆ ಕನರ್ಾಟಕದಲ್ಲಿ ಕನರ್ಾಟಕ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯವಾಗುತ್ತವೆ. ಇವೆಲ್ಲ ಸುತ್ತು ಬಳಸಿ ಹೇಳುವುದೂ ಇದನ್ನೇ.

 ಕಸ್ತೂರಿ ರಂಗನ್ ವರದಿಯು, ಟೌನ್ ಶಿಪ್ ಅಥವಾ ವಸತಿ ಸಂಕಿರ್ಣ ನಿಮರ್ಾಣ ಮತ್ತು ಇತರೇ ಅಭಿವೃದ್ಧಿ ಕಾರ್ಯ ನಿಷೇಧ, ಈಗಾಗಲೇ ಇರುವ ಕೈಗಾರಿಕೆಗಳನ್ನು ಕ್ರಮೇಣ ಮುಚ್ಚುವುದು, 20 ಸಾವಿರ ಚ.ಕಿ.ಮಿ ಮತ್ತು ಅದಕ್ಕಿಂತ ಹೆಚ್ಚು ಅಳತೆಯ ಕಟ್ಟಡ ಮತ್ತು ಇರತೇ ನಿರ್ಮಣ ಕಾರ್ಯಗಳ ನಿಶೇಧ, ವಿವಿಧ ಪ್ರದೇಶಗಳಲ್ಲಿ ಹಲವು ಶಾಸನಗಳ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹೇರಿದ್ದ ನಿರ್ಬಂಧದ ಮುಂದುವರಿಕೆ, ಖಾಸಗಿ ಏಜೆನ್ಸಿ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹ ಹೀಗೆ ಹಲವು ರೀತಿಯ ಶಿಫಾರಸ್ಸುಗಳನ್ನು ಹೇರಿದೆ. ಇದರೊಂದಿಗೆ ಸಂಪೂರ್ಣವಾಗಿ ಗಣಿಗಾರಿಕೆ, ಕಲ್ಲುಕ್ವಾರಿ, ಮತ್ತು ಮರಳುಗಾರಿಕೆ ನಿಷೇಧಿಸಿದೆ. ಇವೆಲ್ಲವೂ ಪಶ್ಚಿಮ ಘಟ್ಟದಲ್ಲಿ ಬದುಕುವವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ಅಡೆತಡೆಯಾಗಿ 'ಸ್ಥಳೀಯ ಸಮುದಾಯಗಳ ಹಕ್ಕುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ' ಆಶೊತ್ತರಗಳನ್ನು ನಾಶಪಡಿಸುವಂತದ್ದೇ ಆಗಿದೆ.

ಮುಖ್ಯವಾಗಿ ಇದು ಜನರ ಸಾಮುದಾಯಿಕ ಹಕ್ಕುಗಳನ್ನು ನಾಶಮಾಡಿ ಖಾಸಗಿಕರಣದೆಡೆಗೆ ಮುಖಮಾಡುತ್ತದೆ. ಸಾವಯವ ಕೃಷಿಗೆ ಬೆಂಬಲ ನೀಡುವ ನೆಪದಲ್ಲಿ ಇಡೀ ಕೃಷಿಯನ್ನೇ ಏಜೆನ್ಸಿಗಳಿಗೆ, ಖಾಸಗಿಗೆ ಕೊಡಲು ಮುಂದಾಗಲಾಗುತ್ತದೆ. ಗಾಡ್ಗಿಳ್ ವರದಿ ಹೇಳಿರುವ ಸಾರ್ವಜನಿಕ ಭೂಮಿಯ ಖಾಸಗಿಕರಣ ಮಾಡುವುದರ ನಿಷೇಧ ಮತ್ತು ಸ್ಥಳೀಯ ಅಭಿವೃದ್ಧಿಯ ಕುರಿತಾದ ತೀಮರ್ಾನವನ್ನು ತೆಗೆದುಕೊಳ್ಳುವ ಹಕ್ಕನ್ನು ಗ್ರಾಮಸಭೆ ಕೈಗೊಳ್ಳಬೇಕೆಂಬ ನಿಲುವನ್ನು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ಕೈಬಿಟ್ಟಿದೆ. ಇದು ವಿಕೇಂದ್ರೀಕರಣಕ್ಕೆ ವಿರೋಧವಾಗಿದೆ. ದೇಶದಲ್ಲಿ ಬಹುತೇಕ ಕಿರು ಜಲ ವಿದ್ಯುತ್ ಯೋಜನೆಗಳನ್ನು ಖಾಸಗಿಗೆ ವಹಿಸಿಕೊಡುತ್ತಿರುವ ಹೊತ್ತಿನಲ್ಲಿ ಈ ವರದಿ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಲವು ನಿಯಮದ ಅಡಿಯಲ್ಲಿ ಜಲವಿದ್ಯುತ್ ಯೋಜನೆಗೆಗಳನ್ನು ಆರಂಭಿಸಲು ಅನುಮತಿ ನೀಡುತ್ತದೆ

.
ಇದರೊಂದಿಗೆ ನದಿ ನೀರಿನ ಹಂಚಿಕೆ, ಹರಿವಿನ ವಿಸ್ತರಣೆ, ಪಾತ್ರ ಬದಲಾವಣೆ ಇತ್ಯಾದಿಗಳಿಗೆ ಇದು ವಿರೋಧವಾಗಿದೆ. ನೀರೇ ಇಲ್ಲದೇ ಸಾವಿನ ದವಡೆಗೆ ಸಾಗುತ್ತಿರುವ ಮನುಷ್ಯನ ರಕ್ಷಣೆಗಾಗಿ ನದಿ ನೀರಿನ ಸದ್ಬಳಕೆಯ ವಿಸ್ತರಣೆಗೆ ನಾವು ಆಲೋಚಿಸಲೇ ಬೇಕಾಗಿದೆ. ಯಾವ್ಯಾವುದೋ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಬಾಟಲಿ ನೀರಿಗಾಗಿ ಕೆರೆ-ಹಳ್ಳಗಳನ್ನೇ ಮಾರಲು ಹಿಂದೆ ನೋಡದ ಸಕರ್ಾರ ತನ್ನ ದೇಶದ ಜನತೆಯ ದಾಹ ತೀರಿಸಲು ನಿರ್ಬಂಧ ಹೇರುವುದು ಎಷ್ಟರ ಮಟ್ಟಿಗೆ ಸರಿ?

ಭೂಮಿಯ ಸಕ್ರಮದ ಪ್ರಶ್ನೆ: ಕಸ್ತೂರಿ ರಂಗನ್ ಗುರಿತಿಸಿದ ಪ್ರದೇಶಗಳಲ್ಲಿ ಬದುಕುತ್ತಿರುವ ರೈತರು ಮತ್ತು ಬುಡಕಟ್ಟು ರೈತರಿಗೆ ಸಾಗುವಳಿ ಯೋಗ್ಯ ಕೃಷಿಭೂಮಿಯ ಸಕ್ರಮಗೊಳಿಸುವಲ್ಲಿ ತೊಡಕುಂಟಾಗಲಿದೆ. ದೊಡ್ಡಪ್ರಮಾಣದಲ್ಲಿ ಆಹಾರ ಬೆಳೆಯನ್ನು ಮತ್ತು ಆಥರ್ಿಕ ಬೆಳೆಯನ್ನು ಬೆಳೆಯುತ್ತಿದ್ದವರನ್ನು ಮೂಲ ಸೌಕರ್ಯ ನೀಡದೇ ಸ್ವತಃ ಅವರೇ ಬಿಟ್ಟು ಹೋಗುವಂತ ವಾತಾವರಣವನ್ನು, ಸಂದರ್ಭವನ್ನು ಸೃಷ್ಟಿಸಲಾಗುತ್ತದೆ. ಆಹಾರದ ಕೊರತೆ, ಆಹಾರ ಅಭದ್ರತೆ ಎದುರಾಗಲಿದೆ. ಪಾರಂಪರಿಕ ನಿವಾಸಿಗಳ ರಕ್ಷಣೆಯ ಬಾಯುಪಚಾರದ ಮಾತಿದ್ದರೂ ಅತಿಕ್ರಮಣ ಭೂಮಿ,ಬಗರ್ ಹುಕುಂ,ಹಂಗಾಮಿ ಲಾಗಣಿ...ಇತ್ಯಾದಿ ಸಕ್ರಮಕ್ಕೆ ಪೂರ್ಣ ಅವಕಾಶಗಳಿಲ್ಲ. ಒಂದೆಡೆ ಪಶ್ಚಿಮ ಘಟ್ಟದಾಚೆಯ ಕೃಷಿಭೂಮಿಯನ್ನು ಖಾಸಗಿ.ವಿದೇಶಿ ಕಂಪನಿಗಳಿಗೆ ಕೊಡಲು ಯಾವ ನಿರ್ಬಂಧ ಇಲ್ಲ. ಆದರೆ ಇಲ್ಲಿ ಜನರ ಭೂಮಿ ಜನರಿಗೆ ಕೊಡಲು ಮಾತ್ರ ಇಲ್ಲಿ ನಿರ್ಬಂಧ!

ಉದ್ಯೋಗಕ್ಕಾಗಿ ಕೈಗಾರಿಕೆಗಳ ಸ್ಥಾಪನೆ ಅನಿವಾರ್ಯವಾಗಿರುವುದರಿಂದ ಕೈಗಾರಿಕಾ ಸ್ಥಾಪನೆಯ ಮೇಲಿನ ನಿಷೇಧ ಯುವಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಪುನಃ ಮಹಾನಗರದತ್ತ ವಲಸೆ ವ್ಯಾಪಕವಾಗಲಿದೆ.

ಕರಾವಳಿ ಭಾಗದಲ್ಲಂತೂ ಒಂದೆಡೆ ಸಮುದ್ರ ತೀರ ನಿಯಂತ್ರಣ ಕಾಯ್ದೆಗಳು, (ಸಿಆರ್.ಝಡ್) ಇನ್ನೊಂದೆಡೆ ಅಭಯಾರಣ್ಯ, ಹುಲಿ ಮತ್ತು ಆನೆ ನಡೆದಾಡುವ ಬೆಟ್ಟಗಳು, ಸಿಂಗಳೀಕ, ಗಮಯ, ಪಕ್ಷಿಗಳ ಕುರಿತು ಸಂರಕ್ಷಿತಾರಣ್ಯವಾದ್ದರಿಂದ ಈಗಾಗಲೇ ಮಾನವ ಪ್ರವೇಶ ನಿಷೇಧ ಮಾಡಲಾಗುತ್ತಿದೆ. ಈಗ ಸುಮಾರು 2000ದಷ್ಟು ಹಳ್ಳಿಗಳನ್ನು ಅಭಿವೃದ್ಧಿ ಹೀನಸ್ಥಿತಿಗೆ ಒಯ್ಯಲಿದೆ. (ಅಧಿಕೃತ ಸಂಖ್ಯೆ 1576 ಆದರೂ ಅದರ ಆಸುಪಾಸಿನ ಹಳ್ಳಿಗಳಿಗೂ ಇದರ ಬಿಸಿ ತಟ್ಟಿತ್ತದೆ. ಸಂಚಾರ ನಿರ್ಭಂಧ ನಾಕಾ ಹಾಕಲಾಗುತ್ತದೆ.) 

ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ವನ್ಯಜೀವಿ ಕಾಯ್ದೆಗೆ,(ಹುಲಿ, ಆನೆ, ಹಾರ್ನಬಿಲ್, ಕಾಡೆಮ್ಮೆಕಾಡುಕೋಣ ಧಾಮ) ರಾಷ್ಟ್ರೀಯ ಉದ್ಯಾನಕ್ಕೆ ಹೋಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಜನತೆಯ ವಾಸ ನಿರ್ಬಂಧ ಮತ್ತು ಜಲವಿದ್ಯುತ್ ಯೋಜನೆಗೆ ಅರಣ್ಯ ನಾಶ ಜೊತೆಗೆ ಮನೆ-ಭೂಮಿ ಕಳಕೊಂಡಿದ್ದಾರೆ. ಈಗಿನ 88 ಹಳ್ಳಿಗಳು ಸೇರಿದರೆ ಇಡೀ ಜೋಯಿಡಾ ತಾಲೂಕು ಐತಿಹಾಸಿಕವಾಗಿ ಮಾನವ ವಸತಿಯ ನಕಾಶೆಯಿಂದ ಮಾಯವಾಗಲಿದೆ! ಇಲ್ಲಿಯ ಆದಿವಾಸಿ ಕುಣಬಿ, ಗೌಳಿಗಳ ಮತ್ತು ಇತರೇ ಹಿಂದುಳಿದ ಜನಾಂಗಗಳ ಪರಿಸ್ಥಿತಿ ಊಹಿಸಲಿಕ್ಕೂ ಸಾಧ್ಯವಿಲ್ಲದಂತೆ ಅವನತಿ ಹೊಂದುತ್ತದೆ.


ಹಾಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಖಾಸಗಿಕರಣ ಮಾಡಿ ಈ ನೆಲವನ್ನೂ ಮಾರಿದ್ದರಿಂದ ಪರಿಸರ ಅಸಮತೋಲನವನ್ನು ಸರಿ ಮಾಡಲು ಬಡ ರೈತರ ಭೂಮಿಯನ್ನು ಕಂಪನೀಕರಣ ಅಥವಾ ಕಸಿಯುವ ಹುನ್ನಾರದ ಭಾಗವಾಗಿ ಇದು ಕಾಣುತ್ತದೆ. ಲಾಭಕೋರ ಖಾಸಗಿಕರಣ ಮತ್ತು ಖಾಸಗಿಯವರಿಗೆ ಲಾಭತರುವ ತಪ್ಪು ಅಭಿವೃದ್ಧಿಯ ನೀತಿಯಿಂದಾಗಿ ಇಡೀ ಪರಿಸರ ನಾಶವಾದುದು ಸಕರ್ಾರಕ್ಕೆ ಕಾಣುತ್ತಲೇ ಇಲ್ಲ. ಅದರ ಪಾಪದ ಫಲವನ್ನು ಮಾತ್ರ ಸಣ್ಣ ಹಿಡುವಳಿದಾರರ, ಕೃಷಿಕೂಲಿ ಕಾಮರ್ಿಕರ ಹೆಗಲಿಗೆ ದಾಟಿಸುವ ಕೆಲಸವನ್ನು ಈ ವರದಿ ಯಶಸ್ವಿಯಾಗಿ ಮಾಡಿದೆ. 

 ವರದಿ ಒತ್ತು ಕೊಡುವ ಸಾವಯವ ಕೃಷಿ ಪೂರ್ಣ ಪ್ರಮಾಣದಲ್ಲಿ ಇಂದು ಕಾರ್ಯಸಾಧುವೇ? ಎಂಬ ಪ್ರಶ್ನೆ ಕೂಡ ಇದೆ. ಸಾವಯವ ಕೃಷಿ ಹುಟ್ಟಿಕೊಂಡಿದ್ದು ಒಂದು ನಿಧರ್ಿಷ್ಟ ಸಮಾಜೋ ಆಥರ್ಿಕ ಪದ್ಧತಿಯಲ್ಲಿ. ಆದರೆ, ಈಗ ಆ ಪದ್ಧತಿ ಅಲ್ಪಮಾತ್ರ. ಇದರೊಂದಿಗೆ ಮನುಷ್ಯನ ಅಗತ್ಯತೆ ಮತ್ತು ಅಪೇಕ್ಷೆಗಳು ಬದಲಾಗಿವೆ. ಜನಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವಾಗ ತಕ್ಷಣ ಸಾವಯವಕೃಷಿಗೆ ಪರಿವತರ್ಿಸುವುದರಿಂದ ಈ ಜನಸಂಖ್ಯೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮತ್ತು ಕಡಿಮೆ ದರದಲ್ಲಿ ಆಹಾರ ಒದಗಿಸಲು ಸಾಧ್ಯವೆ? ಹೆಚ್ಚು ಕೀಟ ನಾಶಕ ಬಳಸದ, ರಾಸಾಯನಿಕ ಕಡಿಮೆ ಬಳಸಿಯೂ ಉತ್ತಮ ಬೆಳೆ ಬರಬಹುದಾದ ಹೊಸ ಕೃಷಿ ಪದ್ಧತಿಯ ಸಂಶೋಧನೆಗೆ ಒತ್ತು ಕೊಡಬೇಕು. ಇದು ಸಾರ್ವಜನಿಕ ವಲಯದಲ್ಲಿಯೇ ನಡೆಯುವಂತಾಗಬೇಕು. ಬದಲಾಗಿ ಸಾವಯವದ ಉತ್ತೇಜನದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖಾಸಗಿಯವರಿಗೆ ನೀಡುವುದು, ಅದರ ಪ್ರೋತ್ಸಾಹದ ಏಜೆನ್ಸಿಯನ್ನು ಖಾಸಗಿಕರಣಗೊಳಿಸುವುದನ್ನು ಈ ವರದಿ ಪ್ರೋತ್ಸಾಹಿಸುತ್ತಿರುವುದು ಖಂಡನೀಯ. 
ಹಲವು ಯೋಜನೆಗಳ ಜಾಲ ಹೆಣೆಯುವ ಬದಲು ಈಗಿರುವ ಕಾನೂನನ್ನೆ ಜನರ ಸಹಭಾಗಿತ್ವದಲ್ಲಿ, ಪರಿಸರ ಪ್ರೇಮಿ- ಜನಮುಖಿಯಾಗಿ ತರುವ ಇಚ್ಛಾಶಕ್ತಿಯನ್ನು ತೋರ್ಪಡಿಸಬಹುದಾಗಿತ್ತು. ಆದರೆ ಸಕರ್ಾರ ತನ್ನ ವೈಫಲ್ಯ ಮರೆಮಾಚಲು ಹೊಸ ಹೊಸ ಯೋಜನೆಯನ್ನು ತಂದು ಜನರನ್ನು ಸದಾ ವ್ಯಥಿತರನ್ನಾಗಿಸುವುದರಲ್ಲೇ ಖುಷಿಕಾಣುತ್ತಿದೆ. ಒಂದೆಡೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಪ್ರದೇಶ ಇನ್ನೊಂದೆಡೆ ಯುನೆಸ್ಕೋ ಪಾರಂಪರಿಕ ವಿಶ್ವತಾಣ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಹುಲಿ ಮತ್ತು ಆನೆ ಕಾರಿಡಾರ್, ಹಾರ್ನಬಿಲ್ ಧಾಮ, ಬೈಸನ್ ಸೆಂಚುರಿ, ಸಿಂಗಳೀಕ ಉದ್ಯಾನ, ಜಲವಿದ್ಯುತ್ ಯೋಜನೆ. . . ಹೀಗೆ ಹತ್ತು ಹಲವು ಯೋಜನೆಗಳಿಗಾಗಿ ಮನುಷ್ಯ ಬಹುತೇಕ ಕಾಡುಗಳನ್ನು ಸಂಪೂರ್ಣವಾಗಿ ತೊರೆಯಬೇಕಾದ ಸ್ಥಿತಿ ಬಂದಿದೆ. ಉಳ್ಳವರ ಮೋಜಿಗೆ ಇಲ್ಲದವರು ಕೊರಳು ನೀಡುವ ಸ್ಥಿತಿ.

ಇಡೀ ವರದಿ ಪಶ್ಚಿಮ ಘಟ್ಟ ಅಭಿವೃದ್ಧಿಯ ಪಯರ್ಾಯದ ಬಗ್ಗೆ ಮಾತನಾಡುವುದಿಲ್ಲ. ಕೃಷಿ ನಾಶದಿಂದಾಗುವ ಆಹಾರ ಭದ್ರತೆ ಸಮಸ್ಯೆ, ಮರಳುಗಾರಿಗೆ, ಕಲ್ಲುಕ್ವಾರಿಯ ಪೂರ್ಣ ನಿಷೇಧದಿಂದ ಮನೆ ನಿಮರ್ಾಣ, ಅಗತ್ಯ ಕಾಮಗಾರಿಗೆ ತೊಡಕು, ಇರುವ ವಿದ್ಯುತ್ ಯೋಜನೆಯನ್ನು ಕ್ರಮೇಣ ನಿಲ್ಲಿಸಿದರೆ ಕೊರತೆಯಾಗಲಿರುವ ವಿದ್ಯುತ್ ಪ್ರಶ್ನೆ ಇತ್ಯಾದಿ ಕಡೆಗೆ ಆಲೋಚಿಸಬೇಕಿತ್ತು. ಆದರೆ ಈ ವರದಿಗೆ ಎಲ್ಲವನ್ನೂ ನಿಷೇಧಿಸುವ ಕುರಿತು ಇರುವ ಉತ್ಸಾಹ ಪಯರ್ಾಯವನ್ನು ಸೂಚಿಸುವುದರಲ್ಲಿ ಇಲ್ಲ. 
ಈ ಪ್ರದೇಶದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಪಟ್ಟ ಪೂರ್ವಭಾವಿ ಅನುಮತಿಯನ್ನು ನಿಧರ್ಿಷ್ಟ ಪಡಿಸಿದ ಇಲಾಖೆಯಿಂದ ಪಡೆದುಕೊಳ್ಳುವಂತೆ ಈ ವರದಿ ಹೇಳುತ್ತದೆ. ಇದು ಅತ್ಯಂತ ದೊಡ್ಡ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಉಳ್ಳವರ ಹಿತ ಕಾಯುವ ಮತ್ತು ಆಳುವ ರಾಜಕಾರಣಿಗಳ ಮಜರ್ಿಗೆ ಒಳಗಾಗುವಂತೆ ಮಾಡುತ್ತದೆ. 
ಸ್ಥಳೀಯ ಅಭಿವೃದ್ಧಿಯ ಸಾಧ್ಯತೆಯನ್ನು, ಸ್ವರೂಪವನ್ನು ನಿಶ್ಚಯಿಸುವ ಜವಾಬ್ದಾರಿ ಸ್ಥಳೀಯ ಗ್ರಾಮಸಭೆಗೆ ನೀಡಬೇಕು. ನೈಸಗರ್ಿಕ ಸಂಪತ್ತಿನ ನಿರ್ವಹಣೆಯನ್ನು ಖಾಸಗಿಕರಣ ಮಾಡಬಾರದು, ಪರಿಸರ ಸ್ನೇಹಿಯಾದ ಗಣಿಗಾರಿಕೆ, (ಚೀರೆಕಲ್ಲು ಇತ್ಯಾದಿ) ಮರಳುಗಾರಿಕೆಯನ್ನು ಸಕರ್ಾರವೇ ನಿಯಮಬದ್ಧವಾಗಿ ನಿರ್ವಹಿಸಬೇಕು. ಕಾಡಿನ ಜವಾಬ್ದಾರಿಯನ್ನು ಸ್ಥಳೀಯ ಸಮಿತಿಗಳಿಗೆ ಕೊಡಬೇಕು. ಅರಣ್ಯ ಕಿರು ಉತ್ಪನ್ನಗಳ  ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡಬೇಕು, ಮಾರುಕಟ್ಟೆ ಒದಗಿಸಬೇಕು, ಬಂಜರು ಭೂಮಿ, ಪಡ ಭೂಮಿಗಳನ್ನು ರೈತರಿಗೆ ನೀಡುವ ಮೂಲಕ ಅರಣ್ಯಾವಲಂಬನೆಯನ್ನು ಕಡಿಮೆಗೊಳಿಸಬಹುದು. ಉಳಿದ ಭೂಮಿಯಲ್ಲಿ ಅರಣ್ಯ ಯೋಜನೆ ಜ್ಯಾರಿಗೆ ತರಬೇಕು. ಎಲ್ಲಾ ಕಡೆ ಚಾಲ್ತಿಯಲ್ಲಿರುವ ಮೊನೋ ಕಲ್ಚರ್ ಕೈಬಿಟ್ಟು ವೈವಿಧ್ಯ ಅರಣ್ಯೀಕರಣ ಮಾಡಬೇಕು. ಅರಣ್ಯ ಇಲಾಖೆ ಭ್ರಷ್ಟಾಚಾರ, ಕಳ್ಳಸಾಗಾಣಿಕೆ ನಿಲ್ಲಿಸಲು, ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯ ಹಸ್ತಾಂತರ ನಿಲ್ಲಿಸಲು ಕ್ರಮ ವಹಿಸಬೇಕಿತ್ತು. ಈ ಬಗ್ಗೆ ಈ ವರದಿ ಮೌನವಾಗಿದೆ.




ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಯನ್ನು ಕೂಡ ಇಲ್ಲಿ ಗಮನಿಸಬೇಕು. ತಲೆತಲಾಂತರದಿಂದ ಕಾಡನ್ನು, ವನ್ಯ ಪ್ರಾಣಿಗಳನ್ನು ಪ್ರೀತಿಯಿಂದ ಬೆಳೆಸುತ್ತಾ ಅವಿಗಳೊಂದಿಗೆ ಅನ್ಯೋನ್ಯತೆ ಸಾಧಿಸಿದ ಮನುಷ್ಯನನ್ನು ಹೊರದೂಡುವುದೆಂದರೆ ಅಲ್ಲಿಯ ವೈವಿಧ್ಯತೆಯನ್ನು ನಾಶಮಾಡಿದಂತೆ. ಪಶ್ಚಿಮ ಘಟ್ಟದಲ್ಲಿ ನೂರಾರು ವರ್ಷಗಳಿಂದ ಬದುಕುತ್ತಿರುವ ಬುಡಕಟ್ಟು ಸಮುದಾಯ, ಪಾರಂಪರಿಕ ಅರಣ್ಯವಾಸಿಗಳು ಆ ಮಣ್ಣಿನೊಂದಿಗೆ, ಕಾಡಿನೊಂದಿಗೆ ಒಂದು ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಂಡು ಬಂದಿದ್ದಾರೆ. ಅವರ ಕಲೆ, ಸಾಹಿತ್ಯ, ಕುಣಿತ, ಭಾಷೆ ಇತ್ಯಾದಿಗಳು, ನಂಬಿಕೆ, ಆಚರಣೆ ಮುಂತಾದವುಗಳು ಈ ಕಾಡಿನಿಂದ ಬೇರ್ಪಡಿಸಲಾಗದ ಮುಖ್ಯ ಭಾಗವೇ ಆಗಿವೆ. ಅಲ್ಲಿಯೇ ಅವು ಹುಟ್ಟಿದ್ದು. ಈ ಪ್ರದೇಶವನ್ನು ಅಭಿವೃದ್ಧಿ ನಿಷೇಧ ಪ್ರದೇಶವನ್ನಾಗಿಸಿ ಅಲ್ಲಿಂದ ಹೊರದಬ್ಬಿದರೆ ಅವರು ಸಾವಿರಾರು ವರ್ಷಗಳಿಂದ ಕಟ್ಟಿಕೊಂಡು ಬಂದ ಸಾಂಸ್ಕೃತಿಕ ಪರಿಸರದ ಕಥೆ ಏನು? ನೀರಿನಿಂದ ತೆಗೆದ ಮೀನಿನಂತಲ್ಲವೇ? ಹಾಗಾಗಿ ಇಲ್ಲಿಯ ಭೂಮಿಯ ಹಕ್ಕು ಪತ್ರವನ್ನು ಅವರಿಗೆ ಕೊಡುವ ಶಾಲೆ, ಆಸ್ಪತ್ರೆ, ಕೈಗಾರಿಕೆಗಳ ಮೂಲಕ ಮೂಲ ಸೌಕರ್ಯ ಒದಗಿಸಿ, ಬದುಕುವ ಹಕ್ಕನ್ನು ಖಾತ್ರಿ ಪಡಿಸಬೇಕು, ಹಕ್ಕುನ ವಿಸ್ತರಣೆ ಕೂಡ ಆಗಬೇಕು. ಈ ಕುರಿತು ವರದಿ ಮೌನ ವಹಿಸಿದೆ. ಹೀಗೆ ಬುಡಕಟ್ಟು ಹಕ್ಕನ್ನು ನಿರಾಕರಿಸುವ ಯಾವ ವರದಿಗೂ ನಮ್ಮ ವಿರೋಧವಿದೆ. 
                                                                                                 ಯಮುನಾ ಗಾಂವ್ಕರ್, ಕಾರವಾರ